Kannada Cinema; ನನ್ನ ಕೆರಿಯರ್ನಲ್ಲಿ ಇದು ವಿಭಿನ್ನ ಸಿನಿಮಾ: ಸತ್ಯಂ ಬಗ್ಗೆ ಸಂತೋಷ್ ಮಾತು
Team Udayavani, Jan 15, 2024, 3:27 PM IST
ನಾಯಕ ನಟ ಸಂತೋಷ್ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಸತ್ಯಂ’. “ಕೆಂಪ’, “ಕರಿಯ-2′, “ಗಣಪ’ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಸಂತೋಷ್ ಈಗ “ಸತ್ಯಂ’ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ವಿಭಿನ್ನ ಕಥಾಹಂದರದೊಂದಿಗೆ ಈ ಸಿನಿಮಾ ಮೂಡಿಬಂದಿರುವುದರಿಂದ ಸಹಜವಾಗಿಯೇ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇದೆ.
ಚಿತ್ರದ ಬಗ್ಗೆ ಮಾತನಾಡುವ ಸಂತೋಷ್, “ನಾನು ಈ ಹಿಂದೆ ಮಾಡಿದ “ಕೆಂಪ’, “ಕರಿಯ-2′, “ಗಣಪ’ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿ “ಸತ್ಯಂ’ ಸಿನಿಮಾ ಮೂಡಿಬಂದಿದೆ. ನನ್ನ ತಂದೆ ಆರಂಭದಲ್ಲಿ ಈ ಕಥೆಯನ್ನು ಒಪ್ಪಿ, ಇದೊಂದು ಒಳ್ಳೆಯ ಸಿನಿಮಾವಾಗುತ್ತದೆ ಎಂದಿದ್ದರು. ಈ ಸಿನಿಮಾದಲ್ಲಿ ಸತ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಎಲ್ಲ ಥರದ ಎಂಟರ್ಟೈನ್ಮೆಂಟ್ ಅಂಶಗಳಿರುವ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಇದೊಂದು ಫ್ಯಾಮಿಲಿ ಕಂಟೆಂಟ್ ಇರುವಂಥ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಪಂಜುರ್ಲಿ ದೈವ ಆರಾಧಿಸುವ ರಾಜ ಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ. ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲಕ್ಕೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು. ಮೂರು ಶೇಡ್ ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ಗಳನ್ನು ಈ ಚಿತ್ರಕ್ಕಾಗಿ ಹಾಕಲಾಗಿದೆ’ ಎನ್ನುವುದು ಸಂತೋಷ್ ಮಾತು.
ಸತ್ಯಂ’ ಸಿನಿಮಾದಲ್ಲಿ ರಂಜನಿ ರಾಘವನ್ ನಾಯಕಿಯಾಗಿದ್ದು, ಹಿರಿಯ ನಟ ಸುಮನ್ ತಾತನಾಗಿ ಅಭಿನಯಿಸಿದ್ದಾರೆ. “ಶ್ರೀಮಾತಾ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ಮಹಂತೇಶ್ ವಿ. ಕೆ. ನಿರ್ಮಿಸಿದ್ದು, ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣವಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಿಟ್ಲಿಸ್ಟ್ ಸೇರಿದೆ.