ಶಿವರಾತ್ರಿಗೆ “ಶಿವಾಜಿ ಸುರತ್ಕಲ್’ ರಿಲೀಸ್
Team Udayavani, Feb 3, 2020, 7:02 AM IST
ರಮೇಶ್ ಅರವಿಂದ್ ನಟನೆಯ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಅಣಿಯಾಗಿವೆ. ಅದರಲ್ಲಿ ಶಿವಾಜಿ ಸುರತ್ಕಲ್ ಕೂಡಾ ಒಂದು. ಆಕಾಶ್ ಶ್ರೀವತ್ಸ ನಿರ್ದೇಶನದ “ಶಿವಾಜಿ ಸುರತ್ಕಲ್’ ಚಿತ್ರ ಶಿವರಾತ್ರಿಯಂದು (ಫೆ.21) ಬಿಡುಗಡೆ ಯಾಗುತ್ತಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಆಕಾಶ್, “ಶಿವಾಜಿ ಅಂದ್ರೇನೆ ಅದೊಂದು ಪವರ್ಫುಲ್ ಪದ. ಸುರತ್ಕಲ್ ಅಂದ್ರೆ ಮೆದುಳು ಅಂಥ ಅರ್ಥವಿದೆ.
ಇವೆರಡು ಸೇರಿಕೊಂಡು ಒಂದು ಕೊಲೆಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಅನ್ನೋದೆ ಚಿತ್ರದ ಕಥೆಯ ಎಳೆ. ಚಿತ್ರದ ಟೈಟಲ್ಗೆ ದಿ ಕೇಸ್ ಆಫ್ ರಣಗಿರಿ ರಹಸ್ಯವೆಂದು ಅಡಬರಹದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದೆ’ ಎನ್ನುತ್ತಾರೆ. ಜೂಡಾ ಸ್ಯಾಂಡಿ ಅವರ ಸಂಗಿತ ನಿರ್ದೇಶನವಿದೆ. ಮೊದಲನೆಯದಾದ “ಉಸಿರೇ’ ಎಂಬ ಹಾಡಿಗೆ ವಿಜಯ್ ಪ್ರಕಾಶ್ ಅವರು ಕಂಠದಾನ ಮಾಡಿದ್ದು, ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ರಚಿಸಿದ್ದಾರೆ.
ಎರಡನೆಯದಾಗಿ “ಅಪರಿಚಿತ’ ಎಂಬ ಮತ್ತೂಂದು ಹಾಡಿಗೆ ಜಯಂತ್ ಕಾಯ್ಕಿಣಿ ಅವರೇ ಸಾಹಿತ್ಯ ರಚಿಸಿದ್ದು ಇದೊಂದು ಜರ್ನಿ ಹಾಡಾಗಿದ್ದು ಇದಕ್ಕೆ ಶ್ರೇಯಾ ಸುಂದರ್ ಅಯ್ಯರ್ ಅವರು ಕಂಠದಾನ ಮಾಡಿದ್ದಾರೆ. ಮೂರನೆಯ ಹಾಡಾದ “ಯಾರೋ ನೀ ಯಾರೋ’ ಹಾಡಿಗೆ ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರೇ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಜೂಡಾ ಸ್ಯಾಂಡಿ ಹಾಗೂ ಸಂಜಿತ್ ಹೆಗ್ಡೆ ಇಬ್ಬರು ಸೇರಿ ಹಾಡಿದ್ದಾರೆ.
ಚಿತ್ರದ ಮುಖ್ಯ ತಾರಾಗಣದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್,ಅವಿನಾಶ್, ರಮೇಶ್ ಪಂಡಿತ್, ಪಿಡಿ ಸತೀಶ್, ರಾಘು ರಮಣಕೊಪ್ಪ ನಟಿಸಿದ್ದಾರೆ. ರೇಖಾ ಕೆ.ಎನ್ ಹಾಗೂ ಅನುಪ್ ಗೌಡ ರವರು ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ನಡಿ ನಿರ್ಮಿಸಿದ್ದಾರೆ.