ನೈಜ ಘಟನೆಯ ಸುತ್ತ ‘ಅಂಬುಜಾ’: ಮದುವೆ ನಂತ್ರ ಮತ್ತೆ ಸಿನಿಮಾದತ್ತ ಶುಭಾ ಚಿತ್ತ
Team Udayavani, Jan 18, 2022, 12:30 PM IST
ಕೆಲವು ಸಿನಿಮಾಗಳು ತಮ್ಮ ಆರಂಭದಿಂದಲೇ ನಾನಾ ಕಾರಣಗಳಿಗಾಗಿ ಕುತೂಹಲ, ನಿರೀಕ್ಷೆ ಹುಟ್ಟಿಸುತ್ತವೆ. ಈ ತರಹ ಹೊಸ ವರ್ಷದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವೆಂದರೆ “ಅಂಬುಜಾ’. ಶುಭಾ ಪೂಂಜಾ, ರಜಿನಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಈಗಾಗಲೇ ಚಿತ್ರರಂಗ ಒಂದು ಕಣ್ಣಿಡುವಂತೆ ಮಾಡಿದೆ. ಶ್ರೀನಿ ಹನುಮಂತ ರಾಜು ನಿರ್ದೇಶನದ “ಅಂಬುಜ’ ಚಿತ್ರ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ. ಶೇ. 60 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ 3ನೇ ಹಂತದ ಚಿತ್ರೀಕರಣ ಮಾಡುತ್ತಿದೆ. ಚಿತ್ರದಲ್ಲಿ ಶುಭಾ ಪೂಂಜ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಥೆ-ಸಾಹಿತ್ಯದ ಜೊತೆಗೆ ನಿರ್ಮಾಣದ ಜವಾವಾªರಿಯನ್ನು ಕಾಶೀನಾಥ್ ಡಿ.ಮಡಿವಾಳ್ ಹೊತ್ತಿದ್ದು, ಲೋಕೇಶ್ ಭೈರವ ಹಾಗೂ ಶಿವಪ್ರಕಾಶ್ ಅವರು ಸಹ-ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.
“ಅಂಬುಜಾ’ ಚಿತ್ರದ ಹೈಲೈಟ್ ಏನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಒಂದು ಹೊಸ ವಿಚಾರ ಎಂಬುದು ಚಿತ್ರತಂಡದ ಮಾತು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿ, “ಚಿತ್ರದಲ್ಲಿ ಒಂದು ಹೊಸ ವಿಚಾರವನ್ನು ಹೇಳಿದ್ದೇವೆ. ಚಿತ್ರದ ಕಂಟೆಂಟ್ ತುಂಬಾ ಹೊಸದಾಗಿದೆ. ತುಂಬಾ ಫ್ರೆಶ್ ಆಗಿರುವ ಕಂಟೆಂಟ್ ಇದೆ. ಈವರೆಗೆ ಎಲ್ಲೂ ಬಾರದಿರುವ ವಿಚಾರವನ್ನು ಹೇಳಿದ್ದೇವೆ. ಈ ಘಟನೆ ಬೆಳಕಿಗೆ ಬಂದಿದ್ದೇ 2020ರಲ್ಲಿ. ಆ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇಷ್ಟು ದಿನ ಮಾಡಿದ ಚಿತ್ರೀಕರಣ ನನಗೆ ತುಂಬಾ ಖುಷಿ ಕೊಟ್ಟಿದೆ’ ಎನ್ನುತ್ತಾರೆ.
ಇದನ್ನೂ ಓದಿ:ವಿನೋದ್ ಪ್ರಭಾಕರ್ ಈಗ ನಿರ್ಮಾಪಕ
ನಿರ್ಮಾಪಕರ ಸಿನಿಮಾ ಪ್ರೀತಿ ಬಗ್ಗೆ ಮಾತನಾಡುವ ಶ್ರೀನಿ, “ಇವತ್ತು ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿಬರುತ್ತಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರ ಸಿನಿಮಾ ಪ್ರೀತಿ. ಬಜೆಟ್ನಲ್ಲಿ ಸ್ವಲ್ಪ ಆಚೀಚೆ ಆದರೂ ಯಾವುದೇ ಬೇಸರ ಮಾಡಿಕೊಳ್ಳದೇ, ಸಿನಿಮಾ ಚೆನ್ನಾಗಿ ಬರಲು ಶ್ರಮಿಸುತ್ತಿದ್ದಾರೆ’ ಎನ್ನುತ್ತಾರೆ.
ಈ ಚಿತ್ರವನ್ನು ಕಾಶೀನಾಥ್ ಮಡಿವಾಳ್ ನಿರ್ಮಿಸುತ್ತಿದ್ದಾರೆ. ಉದ್ಯಮಿಯಾಗಿರುವ ಕಾಶೀನಾಥ್ ಅವರಿಗೆ ಸಾಹಿತ್ಯದ ಮೇಲೂ ಆಸಕ್ತಿ. ಬಿಡುವಿನ ವೇಳೆಯಲ್ಲಿ ಕಥೆ, ಕವನ ಎನ್ನುತ್ತಾ ಸಾಹಿತ್ಯಾಸಕ್ತಿಯನ್ನು ಪೋಷಿಸುತ್ತಲೇ ಬಂದ ಕಾಶೀನಾಥ್ ಅವರು ಬರೆದ ಕಥೆ “ಅಂಬುಜಾ’ ಈಗ ಸಿನಿಮಾವಾಗುತ್ತಿದೆ. ಚಿತ್ರಕ್ಕೆ ಅವರೇ ಸಾಹಿತ್ಯ ಬರೆದಿದ್ದಾರೆ. ಒಂದೇ ಸಿನಿಮಾದಲ್ಲಿ ವಿಭಿನ್ನ ಜಾನರ್ನ ಹಾಡು ಬರೆದ ಖ್ಯಾತಿ ಅವರದು.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ರಾಜೇಶ್ ಕೃಷ್ಣನ್, ಅನನ್ಯಭಟ್, ಅನುರಾಧ ಭಟ್, ಎಂ.ಡಿ.ಪಲ್ಲವಿ ಹಾಗೂ ಬೇಬಿ ಆಕಾಂಕ್ಷ ಹಾಡಿದ್ದಾರೆ. ಈ ಎಲ್ಲಾ ಹಾಡುಗಳಿಗೆ ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಹಾಡು ಕೇಳಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮ್ಮ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಮಾತನಾಡುವ ಅವರು, “ಅಂಬುಜಾ ನಾನೇ ಬರೆದ ಕಥೆ. ಲಂಬಾಣಿ ಕುಟುಂಬದಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಕಥೆ ಕೇಳಿ ಶ್ರೀನಿಯವರು ಖುಷಿಯಾದರು. ಯಾವುದೇ ಬದಲಾವಣೆ ಮಾಡದೇ, ಅದಕ್ಕೆ ಚಿತ್ರಕತೆ, ಸಂಭಾಷಣೆ ರಚಿಸಿದರು. ಸಾಹಿತ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಆದರೆ, ಯಾವುದೇ ಅಶ್ಲೀಲತೆ ಇಲ್ಲದೇ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ. ನನಗೆ ಮೊದಲ ಸಿನಿಮಾದಲ್ಲೇ ವಿಶ್ವಾಸ ಮೂಡಿದೆ, ಇದೊಂದು ಒಳ್ಳೆಯ ಸಿನಿಮಾವಾಗುತ್ತದೆ’ ಎನ್ನುತ್ತಾರೆ ನಿರ್ಮಾಪಕ ಕಾಶೀನಾಥ್ ಮಡಿವಾಳ್