ಫೆ.24ರಂದು ರಿಲೀಸ್ ಆಗುತ್ತಿದೆ ‘ಸೌತ್ ಇಂಡಿಯನ್ ಹೀರೋ’
Team Udayavani, Feb 12, 2023, 11:00 AM IST
“ಸೌತ್ ಇಂಡಿಯನ್ ಹೀರೋ’- ಹೀಗೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆ.24ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್ ಹಿಟ್ಲಿಸ್ಟ್ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ.ಈ ಹಿಂದೆ “ಫಸ್ಟ್ ರ್ಯಾಂಕ್ ರಾಜು’, “ರಾಜು ಕನ್ನಡ ಮೀಡಿಯಂ’ನಂತಹ ವಿಭಿನ್ನ ಸಿನಿಮಾ ನೀಡಿದ ನಿರ್ದೇಶಕ ನರೇಶ್ ಕುಮಾರ್ ಎಚ್.ಎನ್ ಈಗ “ಸೌತ್ ಇಂಡಿಯನ್ ಹೀರೋ’ ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ರಿಯನ್ಷಿ ಫಿಲಂಸ್ನಡಿ ನಿರ್ಮಾಣ ಮಾಡಲಾಗಿದೆ.
ನರೇಶ್ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ನಿರ್ದೇಶಕ ನರೇಶ್ ಈ ಚಿತ್ರವನ್ನು ಎಲ್ಲಾ ಸೌತ್ ಇಂಡಿಯನ್ ಹೀರೋಗಳಿಗೆ ಅರ್ಪಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ಅವರು, “ನನಗೆ ಈ ಸಿನಿಮಾ ಮಾಡಲು ಸ್ಫೂರ್ತಿ ರಜನಿ ಕಾಂತ್ ಅವರು. ಅವರ ಸ್ಫೂರ್ತಿಯೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಇನ್ನು, ಈ ಚಿತ್ರವನ್ನು ಎಲ್ಲಾ ಸೌತ್ ಇಂಡಿಯನ್ ಹೀರೋಗಳಿಗೆ ಅರ್ಪಿಸುತ್ತಿದ್ದೇನೆ’ ಎನ್ನುವ ನರೇಶ್ ಚಿತ್ರಲ್ಲೊಂದು ಸಂದೇಶವಿದೆ ಎನ್ನಲು ಮರೆಯುವುದಿಲ್ಲ.
“ಚಿತ್ರದಲ್ಲಿ ಸ್ಟಾರ್ ನಟರ ಅಭಿಮಾನಿಗಳಿಗೆ ಸಂದೇಶವೊಂದಿದೆ. ಮುಖ್ಯವಾಗಿ ಸ್ಟಾರ್ವಾರ್ ಆಗಬಾರದು ಎಂದು ದೃಷ್ಟಿಯಿಂದ ಒಂದಷ್ಟು ಅಂಶಗಳನ್ನು ಇಲ್ಲಿ ಹೇಳಿದ್ದೇನೆ. ಅಭಿಮಾನಿಗಳು ಒಬ್ಬ ಹೀರೋನಾ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೇ ಹೊರತು ಜಗಳವಾಡಬಾರದು ಎನ್ನುವುದು ನನ್ನ ಅನಿಸಿಕೆ’ ಎನ್ನುತ್ತಾರೆ ನರೇಶ್.
ಇದನ್ನೂ ಓದಿ:ಹೆರಿಗೆಗೆ 4 ಆಸ್ಪತ್ರೆಗಳಿಗೆ ಅಲೆದರೂ ಮಗು ಉಳಿಯಲಿಲ್ಲ, ತಾಯಿ ಸ್ಥಿತಿಯೂ ಗಂಭೀರ
“ಸೌತ್ ಇಂಡಿಯನ್ ಹೀರೋ’ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ. ಎಲ್ಲದರಲ್ಲೂ ಲಾಜಿಕ್ ಹುಡುಕುವ ಲಕ್ಷ್ಮಣ್ ರಾವ್ ಎಂಬ ವ್ಯಕ್ತಿ ಸಿನಿಮಾಕ್ಕೆ ಎಂಟ್ರಿಕೊಟ್ಟರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಈ ಬಗ್ಗೆ ಮಾತನಾಡುವ ನರೇಶ್, “ಮೊದಲು ಹುಟ್ಟಿದ ಪಾತ್ರವೇ ಲಾಜಿಕ್ ಲಕ್ಷ್ಮಣ್ ರಾವ್. ಸಾಮಾನ್ಯವಾಗಿ ಸಿನಿಮಾದವರು ಲಾಜಿಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ಕಮರ್ಷಿಯಲ್ ಸಿನಿಮಾದಲ್ಲಿ ಹೀರೋ ಏಳೆಂಟು ಜನರಿಗೆ ಹೊಡೆಯುವುದು ಸೇರಿದಂತೆ ಅನೇಕ ಸಾಹಸಗಳನ್ನು ಮಾಡುತ್ತಾರೆ. ಇವೆಲ್ಲವನ್ನು ನಾವು ಲಾಜಿಕ್ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆದರೆ, ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರ ಎಲ್ಲದರಲ್ಲೂ ಲಾಜಿಕ್ ಹುಡುಕುವ ವ್ಯಕ್ತಿತ್ವ ಹೊಂದಿರುತ್ತದೆ. ಇಂತಹ ವ್ಯಕ್ತಿ ಸಿನಿಮಾಕ್ಕೆ ಬರುತ್ತಾನೆ, ಸ್ಟಾರ್ ಆಗುತ್ತಾನೆ, ಸೌತ್ ಇಂಡಿಯನ್ ಸ್ಟಾರ್ ಆಗಿ ಮೆರೆಯುತ್ತಾನೆ. ಆತನ ಈ ಹಾದಿ ಹೇಗಿರುತ್ತದೆ. ಲಾಜಿಕ್ ಹುಡುಕುವ ಆತ ಸಿನಿಮಾದಲ್ಲಿ ಹೇಗೆ ವರ್ತಿಸುತ್ತಾನೆ ಎಂಬ ಅಂಶ ಸೇರಿದಂತೆ ಅನೇಕ ವಿಚಾರಗಳನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುವುದು ನರೇಶ್ ಮಾತು.
ಚಿತ್ರದಲ್ಲಿ ಸಾರ್ಥಕ್ ಎನ್ನುವವರು ಹೀರೋ ಆಗಿ ನಟಿಸಿದ್ದಾರೆ. ಉಳಿದಂತೆ ಊರ್ವಶಿ, ಕಾಶಿಮಾ ನಾಯಕಿಯರು. ಚಿತ್ರದಲ್ಲಿ ಯೋಗರಾಜ್ ಭಟ್ ನಟಿಸಿದ್ದಾರೆ. ಹಾಗಂತ ಯಾವುದೇ ಪಾತ್ರವಾಗಿಯಲ್ಲ, ಯೋಗರಾಜ್ ಭಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿಜಯ್ ಚೆಂಡೂರು, ಅಮಿತ್ ಸೇರಿದಂತೆ ಇತರರು ಬಣ್ಣ ಹಚ್ಚಿದ್ದಾರೆ