ಗೋದ್ರಗೆ ವಸಿಷ್ಠ, ರಕ್ಷಾ ಎಂಟ್ರಿ
Team Udayavani, Dec 27, 2017, 11:01 AM IST
ನೀನಾಸಂ ಸತೀಶ್ ಅಭಿನಯದ “ಗೋದ್ರ’ ಚಿತ್ರಕ್ಕೆ ಮತ್ತೂಂದು ಜೋಡಿ ಎಂಟ್ರಿಕೊಟ್ಟಿದೆ. ಅದು ವಸಿಷ್ಠ ಸಿಂಹ ಮತ್ತು ರಕ್ಷ. ಹೌದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ “ಗೋದ್ರ’ ಚಿತ್ರ ಎರಡನೇ ಹಂತದ ಚಿತ್ರೀಕರಣದಲ್ಲಿ ಬಿಜಿಯಾಗಿದೆ. ಈ ಶೀರ್ಷಿಕೆಗೆ “ಎಂದೂ ಮುಗಿಯದ ಯುದ್ದ’ ಎಂಬ ಅಡಿಬರಹವಿದೆ. ಶ್ರದ್ಧಾ ಶ್ರೀನಾಥ್ ಹಾಗು ನೀನಾಸಂ ಸತೀಶ್ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗ ಎರಡನೇ ಹಂತದ ಚಿತ್ರೀಕರಣ ಶುರುವಾಗುತ್ತಿರುವಂತೆಯೇ ನಟ ವಸಿಷ್ಠ ಸಿಂಹ ಮತ್ತು ರಕ್ಷ ಸೋಮಶೇಖರ್ ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು 2002 ರಲ್ಲಿ ನಡೆದ ಗೋದ್ರ ಹತ್ಯೆಗೆ ಸಂಬಂದ ಪಟ್ಟ ಸಿನಿಮಾ ಅಲ್ಲ ಎಂದು ನಿರ್ದೇಶಕ ನಂದೀಶ್ ಸ್ಪಷ್ಟಪಡಿಸಿದ್ದಾರೆ. ಕಥೆ, ಚಿತ್ರಕಥೆ ಬರೆದಿರುವ ನಂದೀಶ್ , ಜೇಕಬ್ ವರ್ಗಿಸ್ ಜೊತೆ ಕೆಲಸ ಮಾಡಿದವರು.
ಚಿತ್ರದಲ್ಲೊಂದು ಪ್ರೇಮ ಕಥೆಯಿದೆ. ಸುಬ್ರಮಣ್ಯದಿಂದ ಉತ್ತರ ಭಾರತದ ಕಡೆಯವರೆಗೂ ಚಿತ್ರದ ಕಥೆ ಸಾಗುತ್ತದೆ. ಇದೊಂದು ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ ಎಂಬುದು ನಿರ್ದೇಶಕರ ಮಾತು. ಕೆಲವು ಭಾಗದ ಚಿತ್ರೀಕರಣ ಜಾರ್ಖಂಡ್ ಸುತ್ತ ಮುತ್ತಲು ನಡೆಯಲಿದೆ. ಸಮೂಹ ಟಾಕೀಸ್ ಅಡಿಯಲ್ಲಿ ಜೇಕಬ್ ಫಿಲ್ಮ್ಸ್ ಮತ್ತು ಲೀಡರ್ ಫಿಲ್ಮ್ ಜಂಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ಜಬೇಜ್ ಕೆ.ಗಣೇಶ್ ಕ್ಯಾಮೆರಾ ಹಿಡಿದಿದ್ದಾರೆ.