ಹೊಸಬರಿಂದ ವಿಚಾರಣೆ ಆರಂಭ
Team Udayavani, Dec 6, 2022, 4:52 PM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ವಿಚಾರಣೆ’ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು.
ಸುಮಾರು 160ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದ ಅನುಭವವಿರುವ ಎನ್. ಅಕುಲ್, “ವಿಚಾರಣೆ’ ಸಿನಿಮಾದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. “ಯಶ ಫಿಲಂಸ್ ಬ್ಯಾನರ್’ ಅಡಿಯಲ್ಲಿ ಆರ್. ಭಾಗ್ಯ “ವಿಚಾರಣೆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
“ವಿಚಾರಣೆ’ ಸಿನಿಮಾದ ಬಗ್ಗೆ ಮಾತನಾಡುವ ನಿರ್ದೇಶಕ ಅಕುಲ್, “ಕೇಸ್ ಒಂದರಲ್ಲಿ ಅಮಾಯಕ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಆತ ಮತ್ತು ಆತನ ಕುಟುಂಬ ಚಿತ್ರಹಿಂಸೆ ಅನುಭವಿಸುತ್ತದೆ. ಹಾಗಾದರೆ ಆತ ಮಾಡಿದ ತಪ್ಪಾದರೂ ಏನು? ಎಂಬುದೇ ಸಿನಿಮಾದ ಸಸ್ಪೆನ್ಸ್. ಕೊನೆಗೆ ಆ ಹುಡುಗ ಪೊಲೀಸರ ಕೈಯಿಂದ ಹೊರ ಬರುತ್ತಾನಾ, ಇಲ್ಲವಾ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. “ವಿಚಾರಣೆ’ ಸಿನಿಮಾದಲ್ಲಿ ಪ್ರೀತಿ, ದೌರ್ಜನ್ಯ, ಎಮೋಶನ್, ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಹಾಡು ಹೀಗೆ ಎಲ್ಲ ಥರದ ಮನರಂಜನಾತ್ಮಕ ಅಂಶಗಳೂ ಇದೆ’ ಎಂದು ವಿವರಣೆ ಕೊಡುತ್ತಾರೆ.
“ವಿಚಾರಣೆ’ ಸಿನಿಮಾದಲ್ಲಿ ಮಡೆನೂರು ಮನು ನಾಯಕನಾಗಿ, ಜಾನು ನಾಯಕಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಜಿ. ವಿ ರಮೇಶ್ ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ಸಂಯೋಜನೆಯಿದೆ.