ಕೋವಿಡ್ 19 ಎಫೆಕ್ಟ್: ಪ್ರಸಕ್ತ ಸಾಲಿನ ಪ್ರಸಿದ್ಧ ಅಮರನಾಥ ಯಾತ್ರೆ ರದ್ದು: ಎಎನ್ ಐ ವರದಿ
ತಾತ್ಕಾಲಿಕ ಶಿಬಿರ, ವೈದ್ಯಕೀಯ ನೆರವು, ಹಿಮಪಾತದ ತೆರವು ತುಂಬಾ ಕಷ್ಟದ ಕೆಲಸವಾಗಲಿದೆ ಎಂದು ತಿಳಿಸಿದೆ.
Team Udayavani, Apr 22, 2020, 7:57 PM IST
Amarnath Yatra
ನವದೆಹಲಿ: ಮಾರಣಾಂತಿಕ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಈ ವರ್ಷದ ಪ್ರಸಿದ್ಧ ಅಮರನಾಥ ಯಾತ್ರೆಯನ್ನು ರದ್ದುಪಡಿಸಿದೆ ಎಂದು ಎಎನ್ ಐ ವರದಿ ತಿಳಿಸಿದೆ.
ಅಮರನಾಥ ದೇವರ ದರ್ಶನ ಮಾಡಲು ತೆರಳುವ ಕಾಶ್ಮೀರ ಕಣಿವೆಯ 77 ಪ್ರದೇಶಗಳು ರೆಡ್ ಝೋನ್ ಹಾಗೂ ಹಾಟ್ ಸ್ಪಾಟ್ ಗಳಿದ್ದು ಈ ಹಿನ್ನೆಲೆಯಲ್ಲಿ ಬುಧವಾರ ರಾಜಭವನದಲ್ಲಿ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು, ಅಮರನಾಥ್ ದೇವಾಲಯ ಮಂಡಳಿಯ ಅಧ್ಯಕ್ಷರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ 19 ಸೋಂಕು ವೇಗವಾಗಿ ಹರಡುತ್ತಿರುವ ವೇಳೆಯಲ್ಲಿ ಯಾತ್ರಾರ್ಥಿಗಳಿಗೆ ತಾತ್ಕಾಲಿಕ ಶಿಬಿರ, ವೈದ್ಯಕೀಯ ನೆರವು, ಹಿಮಪಾತದ ತೆರವು ತುಂಬಾ ಕಷ್ಟದ ಕೆಲಸವಾಗಲಿದೆ ಎಂದು ತಿಳಿಸಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದ ಅಮರನಾಥ ಯಾತ್ರಾರ್ಥಿಗಳು ತಮ್ಮ ಪವಿತ್ರ ಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಆಗಿದ್ದನ್ನು ನೆನಪಿಸಿಕೊಳ್ಳಬಹುದು.