ಧರ್ಮ ರಕ್ಷಣೆಗೆ ವಿರಕ್ತಮಠ ಕೊಡುಗೆ ಅನನ್ಯ
ವಿರಕ್ತಮಠದಲ್ಲಿ ಸಮುದಾಯ ಭವನ ನಿರ್ಮಿಸಲು 15 ಲಕ್ಷ ರೂ. ಬಿಡುಗಡೆ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
Team Udayavani, Dec 22, 2019, 1:48 PM IST
ಔರಾದ: ದೇಶದ ಅಖಂಡತೆ ಹಾಗೂ ಧರ್ಮದ ರಕ್ಷಣೆಗೆ ವಿರಕ್ತ ಮಠದ ಕೊಡುಗೆ ಅನನ್ಯವಾಗಿದೆ ಎಂದು ಪಶುಸಂಗೋಪನೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಭಿಪ್ರಾಯ ಪಟ್ಟರು.
ಕಮಲನಗರ ತಾಲೂಕು ಸೋನಾಳ ಗ್ರಾಮದಲ್ಲಿ ನಡೆದ ನಿರಂಜನ ಮಹಾಸ್ವಾಮೀಜಿ 10ನೇ ಪುಣ್ಯಸ್ಮರಣೋತ್ಸವ ಹಾಗೂ ಚನ್ನವೀರ ಸ್ವಾಮೀಜಿ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಸೋನಾಳ ಗ್ರಾಮದಲ್ಲಿನ ವಿರಕ್ತಮಠದ ಶ್ರೀಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸೋನಾಳ ಗ್ರಾಮದಲ್ಲಿ ನಿರಂಜನ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮ ಕಳೆದ ಹಲವು ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಿದೆ. ಇಂಥ ಧಾರ್ಮಿಕ ಕಾರ್ಯಕ್ರಮಗಳು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ನಡೆದರೆ ಭೂಮಿಯಲ್ಲಿನ ಸರ್ವ ಜೀವಿಗಳು ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿರಕ್ತ ಮಠದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಶಾಸಕರ ಅನುದಾನದಿಂದ 15 ಲಕ್ಷ ರೂ. ಅನುದಾನ ಬಿಡುಗಡೆ
ಮಾಡಲಾಗಿದೆ. ಮಠದ ಶ್ರೀಗಳು ಹಾಗೂ ಮಠದ ಶಿಷ್ಯರು ಉತ್ತಮ ರೀತಿಯಲ್ಲಿ ಸಮುದಾಯ ಭವನ ಕಾಮಗಾರಿ ಮಾಡಿಸಿಕೊಳ್ಳಬೇಕು. ಭವನ ನಿರ್ಮಾಣಕ್ಕೆ ಅನುದಾನ ಕಡಿಮೆ ಬಿದ್ದರೆ ನೀಡಲು ಸಿದ್ಧ ಎಂದು ಹೇಳಿದರು.
ರೈಲ್ವೆ ನಿಲ್ದಾಣದಲ್ಲಿ ಭಿತ್ತಿಪತ್ರ ಅಂಟಿಸುವ ಹಾಗೂ ಹೋಟೆಲ್ ಅಂಗಡಿಯಲ್ಲಿ ಸರ್ವರ್ ಆಗಿ ಕೆಲಸ ಮಾಡಿದ ಬಡ ಕೃಷಿ ಕೂಲಿ ಕಾರ್ಮಿಕನ ಮಗ ಈಗ ಕ್ಯಾಬಿನೆಟ್ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ವಿರಕ್ತಮಠದ ಶ್ರೀಗಳು ಹಾಗೂ ನಾಡಿನ ಜನರ ಆಶೀರ್ವಾದವೇ ಕಾರಣವಾಗಿದೆ.
ನಮ್ಮ ಆಡಳಿತಾವ ಧಿಯಲ್ಲಿ ಬೀದರ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿ ಮೂಲಕ ಜನರ ಪ್ರೀತಿ ವಿಶ್ವಾಸ ಸಂಪಾದಿಸುತ್ತೇನೆ ಎಂದು ಭರವಸೆ ನೀಡಿದರು.
ಬೀದರ ಜಿಲ್ಲೆ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಈಗಾಗಲೆ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಮುಂದೆ ಬೀದರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಅಭಿವೃದ್ಧಿ ಕಾರ್ಯ ನಡೆದಾಗ ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಾವಲಿಂಗೇಶ್ವರ ಶಿವಾಚಾರ್ಯ, ಸಿದ್ಧಲಿಂಗ ಮಹಾಸ್ವಾಮೀಜಿ, ಮುರುಘೇಂದ್ರ ದೇವರು, ಶಿವಯೋಗೀಶ್ವರ ರಾಜಯೋಗೀಂದ್ರ ಸ್ವಾಮೀಜಿ, ಭೀಮಣ್ಣ ಖಂಡ್ರೆ, ಗುರುನಾಥ ವಡ್ಡೆ, ಅಮರ ಜಾಧವ, ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬಾಲಾಜಿ ತೆಲಂಗ, ಶ್ರೀರಂಗ ಪರಿಹಾರ, ರಾಜಕುಮಾರ ಬಿರಾದಾರ ಇದ್ದರು.