ತಾತ್ಕಾಲಿಕ ದುರಸ್ತಿಗೆ 21 ಕೋಟಿ
Team Udayavani, Dec 7, 2019, 3:36 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ–ಸೇತುವೆಗಳು ಹಾಳಾಗಿದ್ದು, ಈವರೆಗೆ ಶಾಶ್ವತ ದುರಸ್ತಿಗೊಂಡಿಲ್ಲ. ಆಗಸ್ಟ್ ಮತ್ತು ಸೆಪ್ಟಂಬರ್ನಲ್ಲಿ ಉಂಟಾದ ಪ್ರವಾಹ, ಅತಿಯಾದ ಮಳೆಯಿಂದ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ (ಸೇತುವೆ ಮಾತ್ರ), ಜಿಲ್ಲಾ ಮುಖ್ಯರಸ್ತೆಗಳು ಹಾಗೂ ಸೇತುವೆಗಳು ಕುಸಿದು ಹಾನಿಯಾಗಿವೆ. ಅವುಗಳ ತಾತ್ಕಾಲಿಕ ದುರಸ್ತಿಗಾಗಿ 21.93 ಕೋಟಿ ವೆಚ್ಚದ ಮಾಡಲಾಗುತ್ತಿದ್ದು, ಶಾಶ್ವತ ದುರಸ್ತಿಗೆ 12.30 ಕೋಟಿ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ.
ಎಲ್ಲಿ ಎಷ್ಟು ಹಾನಿ?: ಅತಿವೃಷ್ಟಿಯಿಂದ ಬೀಳಗಿ, ಮುಧೋಳ, ಜಮಖಂಡಿ ಮತಕ್ಷೇತ್ರ ವ್ಯಾಪ್ತಿಯ 5 ರಾಜ್ಯ ಹೆದ್ದಾರಿಗಳ 5.96 ಕಿ.ಮೀ. ಹಾನಿಯಾಗಿದೆ. ತಾತ್ಕಾಲಿಕ ದುರಸ್ತಿತಿಗೆ 698.36 ಲಕ್ಷ ಅನುದಾನದ ಅಗತ್ಯವಿದೆ. 5 ರಾಜ್ಯ ಹೆದ್ದಾರಿ ಸೇತುವೆಗಳು ಕುಸಿದಿದ್ದು, ಇದಕ್ಕಾಗಿ ತಾತ್ಕಾಲಿಕ ದುರಸ್ತಿಗೆ 265 ಲಕ್ಷ ಹಾಗೂ ಶಾಶ್ವತ ದುರಸ್ತಿಗೆ 2 ಕೋಟಿ ಅನುದಾನ ಬೇಕಾಗುತ್ತದೆ.
ಇನ್ನು ಬಾಗಲಕೋಟೆ-5, ಬೀಳಗಿ-15, ಹುನಗುಂದ-12, ಬಾದಾಮಿ-0.90, ಮುಧೋಳ-5.80, ಜಮಖಂಡಿ-10.57 ಹಾಗೂ ತೇರದಾಳ ಮತಕ್ಷೇತ್ರ ವ್ಯಾಪ್ತಿಯಲ್ಲಿ 1.90 ಕಿ.ಮೀ. ಸೇರಿದಂತೆ ಒಟ್ಟು 17 ಜಿಲ್ಲಾ ಮುಖ್ಯರಸ್ತೆಗಳ 51.17 ಕಿ.ಮೀ. ಹಾನಿಯಾಗಿವೆ. ಇದಕ್ಕಾಗಿ ತಾತ್ಕಾಲಿಕ ದುರಸ್ತಿ ಕೈಗೊಳ್ಳಲು 1115 (11.15ಕೋಟಿ) ಅಂದಾಜಿಸಲಾಗಿದ್ದು, ಶಾಶ್ವತ ದುರಸ್ತಿ ಕೈಗೊಳ್ಳುವ 8 ಕೋಟಿ ಅನುದಾನದ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ.
ಬೀಳಗಿ-1, ಜಮಖಂಡಿ-2, ತೇರದಾಳ-1 ಸೇರಿದಂತೆ ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 4 ಜಿಲ್ಲಾ ಮುಖ್ಯ ಸೇತುವೆಗಳು ಕುಸಿದಿದ್ದು, ಇದಕ್ಕಾಗಿ 115 ಲಕ್ಷ ಬೇಕಿದೆ. ರಾಜ್ಯ ಹೆದ್ದಾರಿ–ಸೇತುವೆ, ಜಿಲ್ಲಾ ಮುಖ್ಯರಸ್ತೆ– ಸೇತುವೆಗಳ ತಾತ್ಕಾಲಿಕ ದುರಸ್ತಿಗೆ 2193.36 ಲಕ್ಷ ಹಾಗೂ ಶಾಶ್ವತ ದುರಸ್ತಿ ಕಾಮಗಾರಿಗೆ 1230 ಲಕ್ಷ ಅನುದಾನ ಅಗತ್ಯವಿದೆ. ರಾಜ್ಯ ಸರ್ಕಾರದಿಂದ ರಾಜ್ಯ ಹೆದ್ದಾರಿ ಮತ್ತು ಸೇತುವೆ ದುರಸ್ತಿಗೆ 963.36 ಲಕ್ಷ, ಜಿಲ್ಲಾ ಮುಖ್ಯ ರಸ್ತೆ ಮತ್ತು ಸೇತುವೆ ದುರಸ್ತಿಗೆ 1185 ಲಕ್ಷ ಸೇರಿ ಒಟ್ಟು 21.48 ಕೋಟಿ ತಾತ್ಕಾಲಿಕ ಕಾಮಗಾರಿ ಕೈಗೊಳ್ಳಲು ಅನುದಾನ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗೆ 17 ಲಕ್ಷ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಷ್ಟೊಂದು ಹಾನಿಯಾಗಿಲ್ಲ. ಬಾದಾಮಿ ತಾಲೂಕು ಪಟ್ಟದಕಲ್ಲ ಬಳಿ ಸೇತುವೆ ಸಹಿತ ಹೆದ್ದಾರಿ ಕುಸಿದು ಬಿದ್ದು ಹಾನಿಯಾಗಿದೆ. ಇದಕ್ಕಾಗಿ ಇಲಾಖೆಯಿಂದ 17 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಎಇಇ ಶಿವಶಂಕರ ಬಿರಾದಾರ ಉದಯವಾಣಿಗೆ ತಿಳಿಸಿದರು.
ಕಳಪೆ ಕಾಮಗಾರಿ ಆರೋಪ: ಅತಿವೃಷ್ಟಿಯಿಂದ ಹಾನಿಯಾದ ರಸ್ತೆ ಹಾಗೂ ಸೇತುವೆಗಳ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡಿದ್ದು, ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಗುತ್ತಿಗೆದಾರರಿಗೆ ಕೆಲಸ ವಹಿಸಿದ್ದಾರೆ. ಅಲ್ಲದೇ ಕಾಮಗಾರಿ
ಬೇಕಾಬಿಟ್ಟಿ ಮಾಡಿಸಲಾಗಿದೆ. ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಒಟ್ಟು 21.48 ಕೋಟಿ ಬಳಕೆ ಮಾಡುತ್ತಿದ್ದು, ಯಾವ ಕಾಮಗಾರಿ, ಯಾವ ನಿಯಮದಡಿ ಯಾವ ಗುತ್ತಿಗೆದಾರರಿಗೆ ನೀಡಲಾಗಿದೆ ಎಂಬುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.