ಮಾಹಿತಿ ಕೇಳಿದ್ದಕ್ಕೆ ನಿಂದನೆ: ದೂರು ದಾಖಲು
Team Udayavani, Aug 6, 2019, 12:18 PM IST
ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗ್ರಾಮಸ್ಥರ ಆಗ್ರಹ
ಗುಳೇದಗುಡ್ಡ: ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಮಾಹಿತಿ ಕೇಳಿದ್ದಕ್ಕೆ ಕೆರಳಿದ ಗ್ರಾಪಂ ಸಿಬ್ಬಂದಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕಾಗಿ ನಿವೃತ್ತ ಕೃಷಿ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕೋಟೆಕಲ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಹುಚ್ಚಪ್ಪ ಕಡಪಟ್ಟಿ ಎಂಬುವರು ಗ್ರಾಮದಲ್ಲಿ ಈಚೆಗೆ ನಡೆದ ಗ್ರಾಮಸಭೆಯಲ್ಲಿ ಮಾಹಿತಿ ಕೇಳಿದ್ದರು. ಅಲ್ಲದೇ ಮಾಹಿತಿ ಹಕ್ಕು ಮೂಲಕವೂ ಮಾಹಿತಿ ಕೇಳಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಮ ಪಂಚಾಯತ ಸಿಬ್ಬಂದಿ ರಮೇಶ ಅಬಕಾರಿ ಎಂಬುವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಗ್ರಾಪಂ ಸಿಬ್ಬಂದಿ ವಿರುದ್ಧ ಗ್ರಾಮಸ್ಥರ ಆಕ್ರೋಶ: ಇದನ್ನು ಖಂಡಿಸಿದ ಗ್ರಾಮದ ಹಲವಾರು ಜನರು ಸೋಮವಾರ ಪೊಲೀಸ್ ಠಾಣೆಗೆ ತೆರಳಿ ಗ್ರಾಪಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟೆಕಲ್ಲ ಗ್ರಾಪಂ ಸಿಬ್ಬಂದಿ ಮಾತ್ರವಲ್ಲ ಅಲ್ಲಿನ ಅಧಿಕಾರಿಗಳು ಗ್ರಾಮದ ಯಾವುದೇ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ತಮಗೆ ಬಂದಂತೆ ಮನಸೋ ಇಚ್ಛೆ ಕೆಲಸ ಮಾಡುತ್ತಾರೆ. ಕೇವಲ ಒಂದು ಕಂಪ್ಯೂಟರ್ ಉತಾರ ಕೇಳಿದರೆ ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ ಎಂದು ಅಳಲು ತೋಡಿಕೊಂಡರು.
ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಸರ್ಕಾರದ ಯಾವುದೇ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುತ್ತಿಲ್ಲ. ಶೌಚಾಲಯ, ಆಶ್ರಯ ಹೀಗೆ ಸರ್ಕಾರದ ಯಾವುದೇ ಯೋಜನೆ ಇರಲಿ, ತಮಗೆ ಬೇಕಾದವರಿಗೆ ಹಾಕುತ್ತಿದ್ದಾರೆ.ಅರ್ಹ ಫಲಾನುಭವಿಗಳು ಈ ಕುರಿತು ಕೇಳಿದರೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಸಿಬ್ಬಂದಿ ತಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಮಾಹಿತಿ ಕೇಳಿದರೆ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಾಗೂ ದಬ್ಟಾಳಿಕೆ ಮಾಡುವ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಹುಚ್ಚಪ್ಪ ಕಡಪಟ್ಟಿ, ಶಶಿಧರ ದೇಸಾಯಿ, ಭುಜಂಗರಾವ್ ದೇಸಾಯಿ, ಸಂಗಪ್ಪ ಆಲೂರು, ಮಹೇಶ ನೀಲಪ್ಪ ಅಬಕಾರಿ, ಮಲ್ಲಪ್ಪ ಸಂಗಪ್ಪ ಆಲೂರು, ಹುಚ್ಚೇಶ ಪೂಜಾರ, ಬಸವರಾಜ ಯಡಹಳ್ಳಿ, ಮೈಲಾರಿ ಆಲೂರು,ಲಕ್ಷ್ಮಣ ಮಾದರ, ಮಹಾದೇವಪ್ಪ ಕೋಟಿ, ಹುಚ್ಚಪ್ಪ ಆಲೂರು ಮತ್ತಿತರರು ಆಗ್ರಹಿಸಿದರು.