8.74 ಲಕ್ಷ. ರೂ ಕ್ರಿಯಾ ಯೋಜನೆ ಸಿದ್ದ
ತಾಲೂಕಾವಾರು ಸಭೆ ನಡೆಸಲು ಸೂಚನೆ; ನೆಹರು ಯುವ ಕೇಂದ್ರದಲ್ಲಿ 548 ಯೂತ್ ಕ್ಲಬ್ ರಚನೆ
Team Udayavani, Sep 17, 2021, 5:33 PM IST
ಬಾಗಲಕೋಟೆ: ನೆಹರು ಯುವ ಕೇಂದ್ರದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಒಟ್ಟು 8.74 ಲಕ್ಷಗಳ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಆತ್ಮ ನಿರ್ಭರ ಭಾರತ ಯುವ ಮ್ಯಾಪಿಂಗ್ ಕೌಶಲ್ಯ, ಯುವ ಸಂಪರ್ಕ, ಸ್ವತ್ಛತಾ ಜಾಗೃತಿ ಅಭಿಯಾನ,
ಶ್ರಮದಾನ, ಡಿಜಿಟಲ್ ಸೌಲಭ್ಯ ಮತ್ತು ಬ್ಯಾಂಕ್ ಮಿತ್ರರ ಸಿಬ್ಬಂದಿಯನ್ನು ರೂಪಿಸುವುದು, ವೃತ್ತಿ ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆ, ವಿಪತ್ತು ಅಪಾಯ ತಗ್ಗಿಸುವ ಸಿದ್ಧತೆ ಮತ್ತು ತಂಡ ರಚಿಸುವುದು. ಅತ್ಯುತ್ತಮ ಯುವ ಕ್ಲಬ್ಗಳಿಗೆ ಪ್ರಶಸ್ತಿ ನೀಡುವುದು ಸೇರಿದಂತೆ ಇತರೆ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಮೂಲಕ ಹಮ್ಮಿಕೊಂಡ ಚಟುವಟಿಕೆಯಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಯುವಕರನ್ನು
ಮೋಟಿವೇಶನ್ ಮಾಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ತಾಲೂಕಾವಾರು ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಪ್ರಶಸ್ತಿ ಆಯ್ಕೆಗೆ ಹೊಸದಾಗಿ ಉಪ ಸಮಿತಿಯನ್ನು ರಚಿಸಲು ಸಹ ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ:ನನ್ನ ಜೊತೆ ನೀನಿದ್ರೆ ಮಾತ್ರ ನಟಿಸುತ್ತೇನೆ ಅಂದಿದ್ದ ಶಂಕರ್ : ಉದಯವಾಣಿ ಜೊತೆ ‘ಅನಂತ’ಮಾತು
ಜಿಲ್ಲಾ ಯುವ ಅಧಿಕಾರಿ ಸುಷ್ಮಾ ಗವಳಿ ಮಾತನಾಡಿ, ನೆಹರು ಯುವ ಕೇಂದ್ರದ ಪರಿಚಯದೊಂದಿಗೆ ಕ್ರಿಯಾ ಯೋಜನೆಯಲ್ಲಿ ರೂಪಿಸಿದ ವಿವಿಧ ಚಟುವಟಿಕೆಗಳ ಉದ್ದೇಶಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು. ನೆಹರು ಯುವ ಕೇಂದ್ರದಲ್ಲಿ ಈಗಾಗಲೇ 548 ಯೂತ್ ಕ್ಲಬ್ ಗಳನ್ನು ರಚಿಸಲಾಗಿದ್ದು, ಅದರಲ್ಲಿ 9150 ಮಹಿಳಾ, 7290 ಪುರುಷರು ಸೇರಿದ ಒಟ್ಟು 16440 ಸದಸ್ಯರು ಇದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವೈ. ಕುಂದರಗಿ, ಜಿಲ್ಲಾ ಎಲ್ಡಿಎಂ ಗೋಪಾಲರೆಡ್ಡಿ, ಜಿಲ್ಲಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಟ್ಟಿಮನಿ, ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಹಾಯಕ ರಾಮರಾವ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮಹಿಳಾ ಉದ್ಯೋಗ ಮೇಳ ಆಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ. -ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಜಿಲ್ಲಾಧಿಕಾರಿ