ಬಾಗಲಕೋಟೆ-ಕಾಯ್ದೆಗಳು ಸಮರ್ಪಕ ಅನುಷ್ಠಾನವಾಗಲಿ: ದ್ಯಾವಪ್ಪ
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇಂತಹ ಪ್ರಕರಣಗಳು ನಿಲ್ಲಬೇಕು
Team Udayavani, Feb 28, 2024, 2:40 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ಮಕ್ಕಳೇ ದೇಶದ ಆಸ್ತಿಯಾಗಿದ್ದು, ಮಕ್ಕಳ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಕಾಯ್ದೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕೆಂದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿಂದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಣಿ ಅಧಿಕಾರಿಗಳು, ಜನನ ಮತ್ತು
ಮರಣ ನೊಂದಣಿ ಕಚೇರಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಬಾಲನ್ಯಾಯ ಮಕ್ಕಳ ಪಾಲನೆ ಕಾಯ್ದೆ ಮತ್ತು ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸುವ ಕುರಿತು ಒಂದು ದಿನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಕ್ಕಳ ಕಲ್ಯಾಣಕ್ಕಾಗಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ, ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಬಾಲ್ಯಾವಸ್ಥೆಯಲ್ಲಿರುವ ಮಕ್ಕಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರಕರಣಗಳು ನಡೆಯುವುದನ್ನು ತಡೆಯುವ ಕೆಲಸವಾಗಬೇಕು. ಪ್ರಕರಣ ನಡೆದ ನಂತರ ಗಮನಕ್ಕೆ ತರುವ ಕೆಲವಾಗಬಾರದು. ಬಾಲ್ಯ ವಿವಾಹವಾಗಿ ಆ ಹೆಣ್ಣು ಮಗಳು ಗರ್ಭಿಣಿಯಾದರೆ ಪೋಸ್ಕೋ ಕಾಯ್ದೆಯಡಿ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಸ್ವಚ್ಛ ಸಮಾಜ ಅಥವಾ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇಂತಹ ಪ್ರಕರಣಗಳು ನಿಲ್ಲಬೇಕು. ಅಕ್ರಮವಾಗಿ ಮಗುವನ್ನು ಹೆತ್ತು ಬೀದಿಯಲ್ಲಿ ಬಿಸಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ತಡೆಯಬೇಕಿದೆ. ಮಕ್ಕಳು ದೇಶದ
ಕುಟುಂಬದ ಆಸ್ತಿಯಾಗಿದ್ದು, ಅವರ ಮೇಲೆ ಕಾಳಜಿ ವಹಿಸುವುದು ಇಂದು ಅಗತ್ಯವಾಗಿದೆ. ಆದ್ದರಿಂದ ತರಬೇತಿಗೆ ಹಾಜರಾದವರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಗುಲಾಬ ನದಾಫ್ ಮಾತನಾಡಿ, ತರಬೇತಿ ನೀಡುವ ಉದ್ದೇಶವನ್ನು ಮೊದಲು ಅರಿತುಕೊಳ್ಳಬೇಕು ಅಂದಾಗ ಮಾತ್ರ ತರಬೇತಿ ನೀಡಿರುವುದಕ್ಕೆ ಬೆಲೆ ಬರುತ್ತದೆ. ತರಬೇತಿಯಲ್ಲಿ ಪಡೆದುಕೊಂಡ ಮಾಹಿತಿಯನ್ನು ಮತ್ತೂಬ್ಬರಿಗೆ ಹಂಚಿಕೆ ಮಾಡುವ ಕೆಲಸವಾಗಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ತೇಜಸ್ವಿನಿ ಹಿರೇಮಠ, ಸರ್ಚ್ ಸ್ವೀಕಾರ ಕೇಂದ್ರದ ಮುಖ್ಯಸ್ಥ ವೆಂಕಟೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಮಂಗಳಾ ಹಿರೇಮನಿ, ಮಕ್ಕಳ ರಕ್ಷಣಾ ಅಧಿಕಾರಿ ಕೇಸವದಾಸ ಮುಂತಾದವರು ಉಪಸ್ಥಿತರಿದ್ದರು.