Bagalkote: ಊರಿಗಾಗಿ ಒಗ್ಗಟ್ಟಿನ ಮಂತ್ರ; ಮಾಜಿ ಸೈನಿಕರ ತಂತ್ರ..!
ಸಮಾಜಮುಖಿ ಕಾರ್ಯ ಕೈಗೊಳ್ಳಲು ನೆರವಾಗಿದೆ ಎಂಬುದು ವಿಶೇಷ
Team Udayavani, Sep 8, 2023, 4:53 PM IST
ಬಾಗಲಕೋಟೆ: ಮಾಜಿ ಸೈನಿಕರ ಆಶಯದ ಗುರಿಗೆ ಊರಿಗೆ ಊರೇ ಸಾಥ್ ಕೊಟ್ಟಿದೆ. ಗ್ರಾಮೋದ್ಧಾರಕ್ಕೆ ಹಿರಿಯರು-ಕಿರಿಯರೆನ್ನದೇ ಸರ್ವರೂ ಸದಾ ಕಂಕಣಬದ್ಧರಾಗಿ, ಸ್ವಾರ್ಥರಹಿತ ಸೇವೆಗೈಯುತ್ತಿದ್ದಾರೆ. ಇವರೆಲ್ಲರ ಗುರಿ-ಆಶಯ ಎಲ್ಲ ಹಳ್ಳಿಗಳಿಗೆ ಮಾದರಿಯಾಗಿದೆ…
ಹೌದು. ಬೀಳಗಿ ತಾಲೂಕು ಕಾತರಕಿ ಗ್ರಾಪಂ ವ್ಯಾಪ್ತಿಯ ಲಿಂಗಾಪುರ ಎಸ್.ಕೆ. ಎಂಬ ಪುಟ್ಟ ಗ್ರಾಮಸ್ಥರ ಸಂಘಟನೆ ಹಾಗೂ ಸೌಹಾರ್ದತೆಯ ಕಥೆ ಇದು. ಊರಿಗಾಗಿ ಶ್ರಮಿಸಬೇಕೆಂಬ ಮಾಜಿ ಸೈನಿಕರ ತುಡಿತದ ಆಶಯವೀಗ ಈಡೇರಿದೆ. ಗ್ರಾಮದಲ್ಲಿ ಏನೇ ಕೆಲಸ-ಕಾರ್ಯಗಳಾದರೂ ಎಲ್ಲರೂ ಒಗ್ಗಟ್ಟಿನ ಮಂತ್ರ ಪಠಿಸುತ್ತಾರೆ.
ಮೊದಲು ಹೀಗಿರಲಿಲ್ಲ : ಬಹುತೇಕ ಹಳ್ಳಿಗಳಲ್ಲಿ ಇಂದು ರಾಜಕೀಯ ವೈಷಮ್ಯವೇ ಹೆಚ್ಚು. ನಾಯಕರಾದವರು ವೇದಿಕೆ ಚಿಕೊಳ್ಳಬಹುದು. ಆದರೆ ಗ್ರಾಮೀಣ ಭಾಗದ ಜನರು, ಪ್ರತಿಷ್ಠೆಯಿಂದ ಪರಸ್ಪರ ಸೆಡ್ಡು ಹೊಡೆಯುತ್ತಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪರಸ್ಪರ ಬಾಂಧವ್ಯ-ಸೌಹಾರ್ದತೆಗೆ ಪೆಟ್ಟು ಬಿದ್ದಿದೆ. ಹಾಗೆಯೇ ಲಿಂಗಾಪುರ ಎಸ್.ಕೆ. ಗ್ರಾಮದಲ್ಲೂ ಒಗ್ಗಟ್ಟು ಇರಲಿಲ್ಲ.
ಏನೇ ಕೆಲಸ ಮಾಡಬೇಕೆಂದರೂ ಒಂದಿಲ್ಲೊಂದು ಅಡೆತಡೆ ಬರುತ್ತಲೇ ಇದ್ದವು. “ಏನ್ ಮಾಡೋದು ಬಿಡ್ರಿ’ ಎಂಬ ನಿಷ್ಕಾಳಜಿಯ ಮಾತೇ ಕೇಳಿ ಬರುತ್ತಿದ್ದವು. ಆದರೆ ಮಾಜಿ ಸೈನಿಕರ ಗಟ್ಟಿ ನಿರ್ಧಾರ-ಒಂದು ದೇಶಭಕ್ತಿಯ ಕಾರ್ಯಕ್ರಮ, ಇಡೀ ಊರನ್ನೇ ಒಂದು ಮಾಡಿದೆ ಎಂದರೆ ನಂಬಲೇಬೇಕು.
ಸೈನಿಕರಿಗೆ ಸಲಾಂ!: ಸುಮಾರು 1250ಕ್ಕೂ ಹೆಚ್ಚು ಜನ ವಾಸಿಸುವ ಪುಟ್ಟ ಗ್ರಾಮವಿದು. ಇಲ್ಲಿನ ವಿಶೇಷವೆಂದರೆ ಯಾರೂ ನಿರುದ್ಯೋಗಿಗಳು ಇಲ್ಲ. ಈ ಪುಟ್ಟ ಹಳ್ಳಿಯಲ್ಲಿ 43 ಮಂದಿ (8ರಿಂದ 10 ಜನ ಸೇವೆಯಲ್ಲಿದ್ದು, ಬಹುತೇಕರು ನಿವೃತ್ತರಾಗಿದ್ದಾರೆ) ಸೈನಿಕರಿದ್ದಾರೆ. ಇಬ್ಬರು ಪಿಎಸ್ಐ ಸಹಿತ ಪಿಎಚ್ಡಿ ಮಾಡಿದವರು, ರೈಲ್ವೆ, ಶಿಕ್ಷಣ, ಪೊಲೀಸ್, ಅರಣ್ಯ ಇಲಾಖೆ ಹೀಗೆ ವಿವಿಧ ಇಲಾಖೆಯಲ್ಲಿ ನೌಕರಿ ಮಾಡುವ ಶೇ.70ರಷ್ಟು ಜನರಿದ್ದಾರೆ. ಇನ್ನು ಸುಮಾರು ಶೇ.25ರಷ್ಟು ಜನ ವಿವಿಧ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಶೇ.5ರಷ್ಟು ಜನ ಮಾತ್ರ ಇಲ್ಲಿ ರೈತರು-ಹಿರಿಯರು. ಕಳೆದ 2018ರಲ್ಲಿ ಸೈನಿಕರೊಬ್ಬರು ಸೇವಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದಿದ್ದರು. ಆಗ ಇತರ ಮಾಜಿ ಸೈನಿಕರು, ಸಮಾಜಮುಖಿ ಚಿಂತನೆಯ ಇತರ ನೌಕರರು, ಹಿರಿಯರು ಕೂಡಿಕೊಂಡು ಗ್ರಾಮದಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲು ಮುಂದಾದರು. ಒಬ್ಬರಿಗೇ ಸನ್ಮಾನ ಮಾಡುವ ಬದಲು, ಈವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದವರೆಲ್ಲರಿಗೂ ಗೌರವಿಸಲು ಸಲಹೆ ಬಂತು.
ಆಗ “ಸೈನಿಕರಿಗೆ ಸಲಾಂ’ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಇಡೀ ಊರಿನ ಜನರೆಲ್ಲ ಬಂದು, ಒಂದಾಗಿ ಪಾಲ್ಗೊಂಡಿದ್ದರು. ಆಗ ಹುಟ್ಟಿಕೊಂಡಿದ್ದೇ “ಏಮ್ ಆಫ್ ಲಿಂಗಾಪುರ (ಎಸ್.ಕೆ)’ ಎಂಬ ಮುಂದಾಲೋಚನೆಯ ಗ್ರೂಪ್.
ವಾಟ್ಸಾಪ್ನಲ್ಲೇ ಚರ್ಚೆ: ಇಂದು ಸಾಮಾಜಿಕ ಜಾಲತಾಣಗಳ ಸದ್ಭಳಕೆಗಿಂತ ದುರ್ಬಳಕೆಯೇ ಹೆಚ್ಚು. ತಮ್ಮೂರಿನ ಉದ್ಧಾರಕ್ಕಾಗಿ ನೌಕರರು-ಮಾಜಿ ಸೈನಿಕರು ಕೂಡಿಕೊಂಡು ರಚಿಸಿದ್ದು “ಏಮ್ (ಗುರಿ) ಆಫ್ ಲಿಂಗಾಪುರ ವಾಟ್ಸಾಪ್ ಗ್ರೂಪ್’. ಈಗ ಇಂದು ಇಡೀ ಊರು ಒಂದಾಗಲು, ಸಮಾಜಮುಖಿ ಕಾರ್ಯ ಕೈಗೊಳ್ಳಲು ನೆರವಾಗಿದೆ ಎಂಬುದು ವಿಶೇಷ.
ಇಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯ ಹಬ್ಬದ ದಿನಗಳನ್ನು ಜಾತಿ-ಮತ-ಪಕ್ಷ ಬೇಧ ಬಿಟ್ಟು ಒಟ್ಟಾಗಿ ಮಾಡುತ್ತಾರೆ. ಊರಿನಲ್ಲಿ ಯಾವುದೇ ಕೆಲಸ ಆಗಬೇಕಾದರೂ ಒಟ್ಟಾಗಿ ನಿಲ್ಲುತ್ತಾರೆ. ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಪಾಠ ಮಾಡುತ್ತಾರೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಇಡಿ ಸಹಿತ ವಿವಿಧ ತರಗತಿಯ ಟಾಪರ್ಗಳಿಗೆ ಊರಲ್ಲಿ ಸನ್ಮಾನ ಮಾಡಿ, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿಸುತ್ತಾರೆ. ದುಶ್ಚಟ ಬಿಡಿಸುವ, ಗ್ರಾಮವನ್ನು ಸ್ವಚ್ಛತೆ ಇಡುವ, ಸರ್ಕಾರಿ
ಸೌಲಭ್ಯಗಳನ್ನು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಿಸಲು ನೆರವಾಗುತ್ತಾರೆ. ಇದೆಲ್ಲದರ ಮಧ್ಯೆ ನಮ್ಮ ಗ್ರಾಮೀಣ ಸಂಸ್ಕೃತಿ ಉಳಿಸಲು ಹಿರಿಯರಿಂದ ಪಟಗಾ (ರುಮಾಲು) ಸುತ್ತುವ ಸ್ಪರ್ಧೆ, ಸೇನೆಗೆ ಆಯ್ಕೆಯಾಗಲು ಅಲ್ಲಿನ ಮಾದರಿಯಲ್ಲೇ ತರಬೇತಿ, ಓಟದ ಸ್ಪರ್ಧೆಯನ್ನೂ ನಡೆಸುತ್ತಾರೆ. ಹೀಗಾಗಿ ಇಡೀ ಊರಿನಲ್ಲೀಗ ಒಗ್ಗಟ್ಟಿನ ಜತೆಗೆ ಸೌಹಾರ್ದತೆ ಮನೆ
ಮಾಡುವ ಜತೆಗೆ ಮಾದರಿಯಾಗಿದೆ.
ಮಾದರಿ ಗ್ರಾಮ
ಲಿಂಗಾಪುರ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಅಲ್ಲಿನ ಒಗ್ಗಟ್ಟು, ಸಂಘಟನೆ, ಗ್ರಾಮದ ಬಗ್ಗೆ ಕಾಳಜಿ, ದೇಶಭಕ್ತಿ ಎಲ್ಲವೂ ವಿಶೇಷವಾಗಿದೆ. ಅವರ ಕಾರ್ಯ ಬಹಳ ಇಷ್ಟವಾಯಿತು. ಎಲ್ಲ ಗ್ರಾಮಗಳಲ್ಲೂ ಇಂತಹ ನಿಸ್ವಾರ್ಥರು ಇದ್ದರೆ, ಗ್ರಾಮಗಳು ಮಾದರಿಯಾಗುತ್ತವೆ.
ಜಯಮಾಲಾ ದೊಡ್ಡಮನಿ, ಅಧೀಕ್ಷಕಿ, ಬಾಲಕಿಯರ ಬಾಲ ಭವನ, ಬಾಗಲಕೋಟೆ
ಏಮ್ ಆಫ್ ನಮ್ಮೂರು
ಲಿಂಗಾಪುರ ಎಸ್.ಕೆ. ಎಂಬ ಪುಟ್ಟ ಊರಿನಲ್ಲಿ ಶೇ.95ರಷ್ಟು ಶಿಕ್ಷಣವಂತರು ಹಾಗೂ ವಿವಿಧ ಇಲಾಖೆ-ಖಾಸಗಿ ನೌಕರರು ಇದ್ದೇವೆ. ನಮ್ಮೂರಿನ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ-ರೈತರಿಗೆ ವಿವಿಧ ರೀತಿಯ ತರಬೇತಿ, ಹಳೆಯ ಸಂಸ್ಕೃತಿ ಉಳಿಸಲು ಸ್ಪರ್ಧೆಗಳು, ಸೇನೆಗೆ ಯುವಕರನ್ನು ತಯಾರಿಸಲು, ಸೇನಾ ನೇಮಕಾತಿ ಮಾದರಿಯಯಲ್ಲೇ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ “ಏಮ್ ಆಫ್ ಲಿಂಗಾಪುರ ಎಸ್. ಕೆ’ ಎಂಬ ವಾಟ್ಸ್ಆ್ಯಪ್ ಗ್ರೂಪ್ ಮಾಡಿದ್ದು, ಅದರಲ್ಲೇ ಚರ್ಚಿಸಿ, ಗ್ರಾಮದಲ್ಲಿ ಅನುಷ್ಠಾನ ಮಾಡುತ್ತೇವೆ.
ಇದಕ್ಕೆ ಎಲ್ಲ ಹಿರಿಯರು-ಕಿರಿಯರು ಒಟ್ಟಾಗಿ ಸಹಕಾರ ಕೊಡುತ್ತಿದ್ದಾರೆ. ನಮ್ಮ ಸಂಘಟನೆ ನೋಂದಣಿ ಮಾಡಿಸಿಲ್ಲ. ಹಾಗೆ ಮಾಡಿದರೆ ಅಧ್ಯಕ್ಷರು-ಪದಾಧಿಕಾರಿಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಎಲ್ಲರೂ ಒಂದೇ-ಎಲ್ಲರೂ ಸದಸ್ಯರೇ. ನಾವೆಲ್ಲ ನಮ್ಮೂರಿಗಾಗಿ ಈ ಕಾರ್ಯ ಮಾಡುತ್ತಿದ್ದೇವೆ.
ರಾಮಣ್ಣ ಅಲಕನೂರ, ಮಾಜಿ ಸೈನಿಕರು
*ಶ್ರೀಶೈಲ ಕೆ. ಬಿರಾದಾರ