ರಬಕವಿ-ಬನಹಟ್ಟಿ: ಎಸ್ಎಸ್ಎಲ್ಸಿ ವರೆಗೆ ಶಿಕ್ಷಣ ಕನ್ನಡ ಮಾಧ್ಯಮದಲ್ಲಿರಲಿ: ಜಯವಂತ ಕಾಡದೇವರ
Team Udayavani, Nov 6, 2022, 5:04 PM IST
ರಬಕವಿ-ಬನಹಟ್ಟಿ: ಕನ್ನಡದೇಳ್ಗೆಗೆ ಕನ್ನಡ ಮಾಧ್ಯಮದಲ್ಲಿ ಕನಿಷ್ಠ ಎಸ್ಎಸ್ಎಲ್ಸಿವರೆಗೆ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ. 1956 ರಿಂದ ಇಲ್ಲಿಯವರೆಗೆ ಎಲ್ಲ ಸರ್ಕಾರಗಳ ಇಚ್ಛಾ ಶಕ್ತಿಯ ಕೊರತೆಯೇ ಕನ್ನಡ ಭಾಷೆಯ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ ಎಂದು ರಬಕವಿ ಬನಹಟ್ಟಿ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಯವಂತ ಕಾಡದೇವರ ತಿಳಿಸಿದರು.
ಅವರು ಭಾನುವಾರ ರಾಮಪುರದ ದಾನೇಶ್ವರಿ ಸಮುದಾಯ ಭವನದಲ್ಲಿ ನಡೆದ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಎಸ್ಎಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಸಿಎನ್ಆರ್ ರಾವ್, ಡಾ. ಸ.ಜ. ನಾಗಲೋಟಿ ಮಠ, ರಿಸರ್ವ್ ಬ್ಯಾಂಕಿನಲ್ಲಿ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿ ರಬಕವಿಯ ಬಕ್ಕನ್ನವರ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದವರು. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮನೆಯಲ್ಲಿಯ ಹಿರಿಯರು ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮೊಬೈಲ್ ಬಳಕೆ ಓದಿಗೆ ಮಾರಕವಾಗಿದೆ ಎಂಬ ಮಾತು ಕೇಳಿ ಬರುತ್ತದೆ. ಓದಿದವರು ಉತ್ತನ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಉನ್ನತ ಸಾಧನೆಯನ್ನು ಮಾಡಿದ್ದಾರೆ. ಕನ್ನಡದ ಉಳಿವೆಗಾಗಿ ಪುಸ್ತಕಗಳ ಜೊತೆಗೆ ಪತ್ರಿಕೆಗಳನ್ನು ಓದಿದರೂ ಕೂಡಾ ಸಾಕಷ್ಟು ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ. ಪತ್ರಿಕೆಗಳು ಜ್ಞಾನದ ಸಂಗಾತಿಗಳಾಗಿವೆ ಎಂದು ತಿಳಿಸಿದರು.