ಕೈ ಮುಗಿಯುತ್ತೇನೆ, ಡಿಕೆಶಿ ಬಗ್ಗೆ ಕೇಳಬೇಡಿ: ಕಾರಜೋಳ
Team Udayavani, Sep 6, 2019, 5:08 AM IST
ಬಾಗಲಕೋಟೆ: ‘ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಕೆಲ ಶಬ್ದ ಬಳಸಿರುತ್ತೇನೆ. ಆದರೆ, ಕನಕಪುರ ಬಂಡೆಗೆ ಡಿಕ್ಕಿ ಹೊಡೆದ ಕಾರಜೋಳ ಎಂದು ಬಿಂಬಿಸಿದರೆ ನನ್ನ ಗತಿ ಏನು? ಅಂತಹ ವಿವಾದದ ಯಾವುದೇ ವಿಷಯ ಕೇಳಬೇಡಿ. ನಾನು ಹೇಳುವುದೇ ಬೇರೆ, ಮಾಧ್ಯಮದವರು ಬಿಂಬಿಸುವುದೇ ಬೇರೆ. ನಿಮ್ಮ ಕೈ ಮುಗಿಯುತ್ತೇನೆ, ಡಿಕೆಶಿ ಬಗ್ಗೆ ಏನೂ ಕೇಳ ಬೇಡಿ’ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ಈಗ ಕೆಲಸವಿಲ್ಲ. ಹೀಗಾಗಿ, ಸಿದ್ದ ರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮಧ್ಯಂತರ ಚುನಾವಣೆ ಜಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದಿಲ್ಲ. ಬಿಜೆಪಿ ಸರ್ಕಾರ ಪೂರ್ಣ ಅವಧಿ ಮುಗಿಸುತ್ತದೆ. ಕಾಂಗ್ರೆಸ್ನವರಿಗೆ ಉಳಿದಿರೋದು ಪ್ರತಿ ಭಟನೆ, ಬಿಜೆಪಿಯನ್ನು ಟೀಕೆ ಮಾಡುವುದು ಬಿಟ್ಟರೆ ಬೇರೆ ಕೆಲಸವಿಲ್ಲ ಎಂದರು. ಬಿಜೆಪಿ ಹರಿಯುವ ನೀರು. ಯಾರಾ ದಾರೂ ಬಿಜೆಪಿ ತತ್ವ-ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ಸ್ವಾಗತ ಕೋರುತ್ತೇನೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಯಾರೇ ಬಂದರೂ ಸ್ವಾಗತ ಎಂದರು.