ಸಹಜ ಸ್ಥಿತಿಯತ್ತ ಜಮಖಂಡಿ
Team Udayavani, May 18, 2020, 1:42 PM IST
ಜಮಖಂಡಿ: ಕಳೆದ 54 ದಿನಗಳಿಂದ ಕೋವಿಡ್ ಹೊಡೆತದಿಂದ ನಲುಗಿದ್ದ ಜಮಖಂಡಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಗರ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡ 10 ಜನರಲ್ಲಿ 9 ಜನರು ಗುಣಮುಖರಾಗಿದ್ದು ಮನೆಗೆ ಮರಳಿದ್ದಾರೆ.
ನಗರದಲ್ಲಿ ಏ. 15ರಿಂದ 29ರವರೆಗೆ 10 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಸ್ಥಗಿತಗೊಂಡಿದ್ದ ತರಕಾರಿ ವ್ಯಾಪಾರ ರವಿವಾರ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ವಹಿವಾಟು ನಡೆಯಿತು. ಎಂದಿನಂತೆ ಮಾರುಕಟ್ಟೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದರು. ಸಾವಿರಾರು ಜನರ ಆಗಮನದಿಂದ ಜನದಟ್ಟಣೆ ಹೆಚ್ಚಾಗುವ ಮೂಲಕ ರಸ್ತೆ ಸಂಚಾರ ಅಡಚಣೆಗೊಂಡಿತು.
ಕಳೆದ ಎರಡು ತಿಂಗಳಿಂದ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಕೋವಿಡ್ ಭೀತಿ ಹಾಗೂ ಸೋಂಕಿತರ ಪ್ರದೇಶ ಸೀಲ್ಡೌನ್ ಮಾಡಲಾದ ಸ್ಥಳಗಳಾದ ನಗರದ ಹನುಮಾನ ಚೌಕ್, ಅರ್ಬನ್ ಬ್ಯಾಂಕ್, ಅಂಚೆ ಕಚೇರಿ ರಸ್ತೆ, ಕಿರಾಣಿ ಮಾರ್ಕೆಟ್, ಅಶೋಕ ಸರ್ಕಲ್, ಕೋರ್ಟ್ ರೋಡ್ ಜನದಟ್ಟಣೆಯಿಂದ ಕೂಡಿತ್ತು. ಕಿರಾಣಿ, ಬಟ್ಟೆ, ಮೊಬೈಲ್, ಇಲೆಕ್ಟ್ರಿಕಲ್ ಅಂಗಡಿ ಸಹಿತ ನೂರಾರು ಅಂಗಡಿಗಳು ವಹಿವಾಟು ನಡೆಸಿದವು. ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಸಹ ಧರಿಸದೆ ಸಂಚಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.