ಬೇಸಿಗೆಯಲ್ಲಿ ನೀರಿನ ಕೊರತೆಯಿಲ್ಲ : ನ್ಯಾಮಗೌಡ
Team Udayavani, Feb 25, 2021, 4:02 PM IST
ಜಮಖಂಡಿ: ಕೃಷ್ಣಾ ನದಿಯ ಆಲಮಟ್ಟಿಯ ಹಿನ್ನೀರಿನಿಂದ ಎತ್ತುವ ಮೂಲಕ ಚಿಕ್ಕಪಡಸಲಗಿ ಶ್ರಮಬಿಂದು ಸಾಗರದ ಹಿಂಭಾಗದ ಅಂದಾಜು 30 ಗ್ರಾಮಗಳ 70 ಸಾವಿರಕ್ಕೂ ಹೆಚ್ಚು ಎಕ್ಕರೆ ಜಮೀನುಗಳಿಗೆ ನೀರು ಲಭಿಸಲಿದೆ. ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಕೃಷ್ಣಾತೀರ ರೈತ ಸಂಘದ ಕಾರ್ಯದರ್ಶಿ, ಶಾಸಕ ಆನಂದ ನ್ಯಾಮಗೌಡ ಹೇಳಿದರು.
ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರ ಬ್ಯಾರೇಜ್ಗೆ ಕೃಷ್ಣಾನದಿ ಆಲಮಟ್ಟಿ ಹಿನ್ನೀರು ಎತ್ತಿ ಹಾಕುವ ಮಹತ್ವದ ಯೋಜನೆಗೆ ಚಾಲನೆ ನೀಡಿ, ದಿ| ಸಿದ್ದು ನ್ಯಾಮಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮುಂದಿನ ದಿನ ಬೇಸಿಗೆ ಕಾಲದಲ್ಲಿ ರೈತರು, ಗ್ರಾಮಸ್ಥರು ನೀರನ್ನು ಸಮ ಪ್ರಮಾಣವಾಗಿ ಉಪಯೋಗಿಸಬೇಕು. ಕಳೆದ ಎರಡು ದಶಮಾನದ ಹಿಂದೆ ನಿರ್ಮಿಸಿದ ಬ್ಯಾರೇಜ್ 30 ಸಾವಿರ ಎಕರೆ ಜಮೀನುಗಳಿಗೆ ಉಪಯೋಗ ಆದರೆ ಇಂದಿನ ದಿನಮಾನದಲ್ಲಿ 70 ಸಾವಿರಕ್ಕೂ ಹೆಚ್ಚು ಎಕರೆ ಜಮೀನುಗಳು ನೀರಾವರಿಯಾಗಿದೆ. ದಿ| ಸಿದ್ದು ನ್ಯಾಮಗೌಡರು ಕೃಷ್ಣಾನದಿ ಹಿನ್ನೀರನ್ನು ಎತ್ತಿ ಹಾಕುವ ಮೂಲಕ ನದಿ ತುಂಬುವ ಯೋಜನೆ ಪ್ರಾರಂಭಿಸಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಕಲ್ಲಪ್ಪ ಗಿರಡಿ, ನಾಗಪ್ಪ ಹೆಗಡೆ, ಬಸವರಾಜ ನ್ಯಾಮಗೌಡ, ಎ.ಎಸ್. ಕುರಣಿ ಸಹಿತ ನೂರಾರು ರೈತರು ಇದ್ದರು.