ಬಿಎಸ್ವೈ-ಈಶ್ವರಪ್ಪ 5 ನಿಮಿಷದಲ್ಲಿ ಒಂದಾಗ್ತಾರೆ: ನಿರಾಣಿ
Team Udayavani, Jan 12, 2017, 3:45 AM IST
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಇಬ್ಬರೂ ಲವ- ಕುಶ ಇದ್ದಂತೆ. ರಾಯಣ್ಣ ಬ್ರಿಗೇಡ್ ವಿಷಯದಲ್ಲಿ ಸಣ್ಣ ವ್ಯತ್ಯಾಸಗಳು ಇರಬಹುದು. ಆದರೆ, ಅವರಿಬ್ಬರೂ ಐದೇ ನಿಮಿಷದಲ್ಲಿ ಒಂದಾಗುತ್ತಾರೆ ಎಂದು ಮಾಜಿ ಶಾಸಕ ಮುರುಗೇಶ ನಿರಾಣಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ವೈ- ಈಶ್ವರಪ್ಪ ಮಧ್ಯೆ ಭಿನ್ನಮತ ಇಲ್ಲ. ಕೆಲ ವ್ಯತ್ಯಾಸಗಳು ಇರಬಹುದು. ಆ ಕುರಿತು ನಾನು ಮಾತನಾಡಲಾರೆ. ಅವರನ್ನು ಒಂದು ಮಾಡಲು ಕೇಂದ್ರದ ನಾಯಕರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಚುನಾವಣೆಗೆ ಇನ್ನೂ 15 ತಿಂಗಳು ಕಾಲಾವಕಾಶವಿದೆ. ಅಷ್ಟರಲ್ಲಿ ಒಂದಾಗಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಮುಂದಾಗುತ್ತಾರೆ. ಅವರಿಬ್ಬರು ಒಂದೇ ಜಿಲ್ಲೆಯವರು, ಒಂದೇ ಪಕ್ಷದಿಂದ ರಾಜಕೀಯಕ್ಕೆ ಬಂದವರು. ಕೇವಲ ಐದೇ ನಿಮಿಷದಲ್ಲಿ ಅವರು ಒಂದಾಗುತ್ತಾರೆ ಎಂದರು.
ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಮುಂಚೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡಿರುತ್ತಾರೆ. ಅದಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.