ಮಳೆಗೆ ಸೋರುತ್ತಿರುವ ಕುಳಗೇರಿ ಕ್ರಾಸ್ ಪೊಲೀಸ್ ಠಾಣೆ!
Team Udayavani, Jul 25, 2023, 8:44 PM IST
ಕುಳಗೇರಿ ಕ್ರಾಸ್: ಬಾಗಲಕೋಟೆ ಮಳೆ ಬಂದರೆ ಸಾಕು ಇಲ್ಲಿಯ ಪೊಲೀಸರಿಗೆ ಇದೊಂದು ಭಯ
ಶುರುವಾಗುತ್ತೆ…ಪೊಲೀಸರಿಗೆ ಏನು ಭಯ ಅಂತಿರ? ಹೌದು ಅರ್ಧ ಶತಮಾನದ ಹಳೆಯ ಕಟ್ಟಡ ಇಂದು ಬೀಳುವುದೋ…ನಾಳೆ ಬೀಳುತ್ತೋ…ಎಂಬ ಭಯದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಫಳಫಳ.. ಉದುರುತ್ತಿರುವ ಮೇಲ್ಛಾವಣಿ ನೋಡುತ್ತ ಕುರ್ಚಿಗಳ ಮೇಲೆ ಕುಳಿತು ಕೆಲಸ ಮಾಡುತ್ತಿರುವ ಪೊಲೀಸರ ಸ್ಥಿತಿ ಹೇಳತೀರದ್ದಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಲ್ಲಿಯ ಪೊಲೀಸ್ ಉಪಠಾಣೆ ಕಟ್ಟಡವನ್ನು 1970ರಲ್ಲೇ ನಿರ್ಮಿಸಲಾಗಿದೆ. ಅರ್ಧ ಶತಮಾನ ದಾಟಿದ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ.
ಮಳೆ ಬಂದರೆ ಸಾಕು ಕಟ್ಟಡದ ಎಲ್ಲ ಕೊಠಡಿಗಳು ಸ್ವಲ್ಪವೂ ಜಾಗ ಬಿಡದೆ ಎಲ್ಲ ಕಡೆ ತಟ..ತಟ…ಸೋರುತ್ತದೆ. ಠಾಣೆಯಲ್ಲಿ ಕುಳಿತು ಪೊಲೀಸರಿಗೆ ಕೆಲಸ ಮಾಡುವಷ್ಟು ಜಾಗ ಇಲ್ಲದಂತಾಗಿದೆ.
ಈ ಪೊಲೀಸ್ ಉಪ ಠಾಣೆಗೆ 1977ರಲ್ಲಿ ಬೆಂಗಳೂರು ಕ.ರಾ ಡಿಜಿಪಿ ಹಾಗೂ ಐಜಿಪಿ ಮತ್ತು ಬೆಳಗಾವಿ ಉತ್ತರ
ವಲಯ ಐಜಿಪಿ ಸಹ 1987ರಲ್ಲಿ ಭೇಟಿ ಕೊಟ್ಟಿದ್ದಾರೆ. ಎಸ್.ಪಿ ಎ.ಎಸ್.ಪಿ ಡಿ.ಎಸ್.ಪಿ ಸಿಪಿಐ ಪಿಎಸ್ಐ ಮೇಲಿಂದ ಮೇಲೆ ಭೇಟಿ ಕೊಟ್ಟಿದ್ದಾರೆ. ಆದರೆ ಈ ಕಟ್ಟಡ ಜಿರ್ಣೋದ್ದಾರವಾಗಲಿ ಉಪಠಾಣೆಯಭಿವೃದ್ಧಿಯಾಗಲಿ ಅರ್ಧ
ಶತಕ ಕಳೆದರೂ ಯಾರು ಸಹ ಗಮನ ಹರಿಸಿಲ್ಲದಂತೆ ಕಾಣುತ್ತಿದೆ.
ಸುಮಾರು 20ಕ್ಕೂ ಹೆಚ್ಚು ಗ್ರಾಮಗಳನ್ನ ಹೊಂದಿದ ಈ ಪೊಲೀಸ್ ಉಪಠಾಣೆಯಲ್ಲಿ ಓರ್ವ ಎಎಸ್ಐ,
ಹವಾಲ್ದಾರ ಹಾಗೂ ಮೂರು ಪಿಸಿ ಸೇರಿ ಒಟ್ಟು ಐದು ಜನ ಕಾರ್ಯನಿರ್ವಹಿಸುತ್ತಿದ್ದಾರೆ. 2001ರಲ್ಲಿ ದಾನಿಗಳ ಸಹಾಯದಿಂದ ಪೊಲೀಸರು ವಿಶ್ರಾಂತಿ ಪಡೆಯಲು ಹೆಚ್ಚುವರಿಯಾಗಿ ಪತ್ರಾಸಿನ ಒಂದು ಕೊಠಡಿ ನಿರ್ಮಿಸಿಕೊಂಡಿದ್ದಾರೆ.
ಸೋರುತ್ತಿರುವ ಕಟ್ಟಡದ ಮೇಲ್ಛಾವಣಿಗೆ ಟಾರ್ಪಾಲ್ ಹೊದಿಸಿವ ಕಾರ್ಯ ಪೊಲೀಸರಿಂದ ನಡೆಯಿತು. ಶಿಥಿಲಗೊಂಡ ಕಟ್ಟಡ ರಕ್ಷಿಸುವುದರ ಜೊತೆಗೆ ಆರಕ್ಷಕರು ತಮ್ಮ ರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಶಿಥಿಲಗೊಂಡ ಕಟ್ಟಡ ಕುರಿತು ನನ್ನ ಗಮನಕ್ಕೆ ತಂದಿಲ್ಲ. ಸದ್ಯ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ರಿಪೇರಿ ಮಾಡಿಸಿಕೊಡುತ್ತೆನೆ. ನಂತರ ಮೇಲಾಧಿಕಾರಿಗಳಿಗೆ ತಿಳಿಸಿ ಎಸ್ಟಿಮೇಂಟ್ ಮಾಡಿ ಹೊಸ ಕಟ್ಟಡ ನಿರ್ಮಿಸಲು ಪ್ರಯತ್ನಿಸುತ್ತೆನೆ.
-ಬಾದಾಮಿ ಸಿಪಿಐ ಟಿ ಡಿ ಧೂಳಖೇಡ
-ಮಹಾಂತಯ್ಯ ಹಿರೇಮಠ ಕುಳಗೇರಿ ಕ್ರಾಸ್