ಆಲಮಟ್ಟಿ ಜಲಾಶಯ ಎತ್ತರಿಸಿ: ಸಿದ್ದು
Team Udayavani, Apr 23, 2022, 4:31 PM IST
ಬಾಗಲಕೋಟೆ: ಆಲಮಟ್ಟಿ ಜಲಾಶಯವನ್ನು ಎತ್ತರಿಸಿ ನಮಗೆ ದೊರೆಯುವ ಹೆಚ್ಚುವರಿ ನೀರು ಬಳಕೆಗೆ ನ್ಯಾಯಾಧೀಕರಣ ಅನುಮತಿ ನೀಡಿದೆ. ಆದರೆ, 12 ವರ್ಷದಿಂದ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಕೂಡಲೇ ಅಧಿಸೂಚನೆ ಹೊರಡಿಸುವಂತೆ ಒತ್ತಾಯ ಮಾಡುವ ಜತೆಗೆ ನಮಗೆ ದೊರೆತ ನೀರು ಬಳಕೆಗೆ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಕೆರೂರ ಏತ ನೀರಾವರಿ ಯೋಜನೆಯ ಭೂಮಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮ್ಮಿಶ್ರ ಸರಕಾರ ಇದ್ದಾಗ ಮಂಜೂರಾಗಿದ್ದ ಈ ಯೋಜನೆಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ಪಡೆಯುವುದು ಕೊರೊನಾದಿಂದ ವಿಳಂಬವಾಯಿತು. ಆ ಸಮಯ ಕೂಡಿ ಬಂದಿದೆ. ನೆಲ, ಜಲ, ಭಾಷೆ ಹಾಗೂ ಗಡಿಗಳ ಬಗ್ಗೆ ವಿಚಾರ ಬಂದಾಗ ಯಾವುದೇ ರಾಜಕಾರಣ ಬಯಲಿಗಿಟ್ಟು ಅಭಿವೃದ್ದಿಯತ್ತ ಗಮನ ಕೊಡಬೇಕು ಎಂದರು.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ 519 ರಿಂದ 524 ಮೀಟರ್ ಎತ್ತರಗೊಳಿಸಿದಾಗ ಈ ಭಾಗಕ್ಕೆ ಹೆಚ್ಚಿನ ನೀರಾವರಿ ಸಾಧ್ಯವಾಗುತ್ತದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಜಲಾಶಯ ಎತ್ತರ ಹಾಗೂ ಸಂತ್ರಸ್ಥರಿಗೆ ಪುನರ್ ವಸತಿ ಕಲ್ಪಿಸುವ ಬಗ್ಗೆ ಅಧೀಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು. ಕೆರೂರ ಏತ ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋದ ಸೋಮನಕೊಪ್ಪ, ಕಾನಾಪುರ, ಹಂಸನೂರ ಹಾಗೂ ತೆಗ್ಗಿ ಗ್ರಾಮ ಸೇರಿಸಬೇಕು. ಈ ಭಾಗದಲ್ಲಿರುವ ಎಲ್ಲ ಕೆರೆ ತುಂಬುವ ಕಾರ್ಯವಾಗಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆ ಕೂಗು ಈಗ ಸಾಕಾರಗೊಳ್ಳುತ್ತಿದೆ. ಇದಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ. ಉತ್ತರ ಕರ್ನಾಟಕದ ಮಗ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದರಿಂದ ನಮ್ಮ ಭಾಗಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ಪ್ರಸಕ್ತ ಬಜೆಟ್ನಲ್ಲಿ ನವಲಿಗೆ 1 ಸಾವಿರ, ಮಹದಾಯಿಗೆ 1 ಸಾವಿರ ಹಾಗೂ ಯುಕೆಪಿಗೆ 5 ಸಾವಿರ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ನೀರಾವರಿಯಾದರೆ ಕೈಗಾರಿಕೆಗಳು ಬೆಳೆದು ರೈತರ ಸಂಕಷ್ಟ ಹಾಗೂ ನಿರುದ್ಯೋಗ ಸಮಸ್ಯೆಗೆ ಕೊನೆಯಾಗಲಿದೆ. ಬಾದಾಮಿ ಪ್ರವಾಸಿ ಕೇಂದ್ರವಾಗಿದ್ದರಿಂದ ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಬಾಗಲಕೋಟೆಯ ಕುಡಚಿ ರೈಲು ಮಾರ್ಗ ಕಾರಣಾಂತರಗಳಿಂದ ಕೇವಲ 33 ಕಿ.ಮೀಗೆ ಕುಂಟಿತಗೊಂಡಿದ್ದು, ಭೂಸ್ವಾಧೀನಕ್ಕೆ ಮುಖ್ಯಮಂತ್ರಿಗಳು 30 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪ್ರಕಾಶ ರಾಠೊಡ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶಸಿಂಗ್, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿವಕುಮಾರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಎಚ್.ಸುರೇಶ, ಪ್ರಮುಖರಾದ ಹೊಳಬಸು ಶೆಟ್ಟರ, ಮೊಮ್ಮಟಗೇರಿ ಗ್ರಾಪಂ ಅಧ್ಯಕ್ಷ ಪುಂಡಲೀಕ ಘಟ್ನೂರ, ಕೆರೂರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.
ಗದೆ-ಕತ್ತಿ ಮನೆಯಲ್ಲಿ ಇರಬಾರದು: ಕೆರೂರ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಭಾಗದ ರೈತರು ಬೆಳ್ಳಿಯ ಗದೆ ಹಾಗೂ ಕಂಬಳಿ ನೀಡಿ ಸನ್ಮಾನಿಸಿದರು. ಈ ವೇಳೆ ಸಿಎಂ ಬೊಮ್ಮಾಯಿ ಅವರು ತಮ್ಮ ಭಾಷಣದ ವೇಳೆ ಗದೆ ಮತ್ತು ಕತ್ತಿ ಮನೆಯಲ್ಲಿ ಇರಬಾರದು. ಅವು ಒಂದಂಕ್ಕೊಂದು ಜಗಳಾಡುತ್ತವೆ. ನಾನು ಎಲ್ಲೇ ಸನ್ಮಾನಗೊಂಡರೂ ಗದೆ ಮತ್ತು ಕತ್ತಿ ಮನೆಗೆ ತಗೆದುಕೊಂಡು ಹೋಗಲ್ಲ. ಇಂದು ನೀಡಿದ ಗದೆಯನ್ನು ಕೆರೂರಿನ ಹನಮಂತ ದೇವರ ಗುಡಿಗೆ ನೀಡುವೆ ಎಂದು ತಿಳಿಸಿದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ, ಪಕ್ಷಭೇದ ಮಾಡಲ್ಲ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಇಂದು ಹಲವಾರು ಅಭಿವೃದ್ಧಿ ಕೆಲಸ ನಡೆದಿವೆ. ರೈತರ ಭೂಮಿಗೆ ನೀರು ಕೊಡುವುದು ನಮ್ಮ ಗುರಿ. ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ, ರಾಜಕೀಯ ಪಕ್ಷಗಳು ರೈತನಿಗೆ ಸೇರಿವೆ. ಕೆರೂರ ಏತ ನೀರಾವರಿ ಯೋಜನೆಯ 2 ಹಂತಕ್ಕೂ ಶೀಘ್ರವೇ ಅನುಮೋದನೆ ನೀಡಲಾಗುವುದು. –ಬಸವರಾಜ ಬೊಮ್ಮಾಯಿ, ಸಿಎಂ
ಬಾದಾಮಿ ಭಾಗದ ಎಂಎಲ್ಬಿಸಿ ಕಾಲುವೆಗಳು ಮುಳ್ಳು-ಕಂಟಿಯಿಂದ ತುಂಬಿವೆ. ಅವುಗಳ ದುರಸ್ತಿಯಾಗಬೇಕು. ಅಲ್ಲದೇ ಬಾದಾಮಿ ಮತ್ತು ಕಟಗೇರಿ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದು, ಈಡೇರಿಲ್ಲ. ಈ ಕುರಿತೂ ಮುಖ್ಯಮಂತ್ರಿಗಳು ಗಮನ ಹರಿಸಬೇಕು. ನಾನು ಮುಖ್ಯಮಂತ್ರಿಗಳೊಂದಿಗೆ ಖಾರವಾಗಿ ಮಾತನಾಡಿದಾಗ ಕುಡಚಿ ರೈಲ್ವೆ ಮಾರ್ಗದ ಭೂಸ್ವಾಧೀನಕ್ಕೆ 30 ಕೋಟಿ ಅನುದಾನ ನೀಡಿದ್ದು. ಜಿಲ್ಲೆಯ ಜನರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. –ಪಿ.ಸಿ. ಗದ್ದಿಗೌಡರ, ಸಂಸದ
ರೈತರ ಮಕ್ಕಳೂ ಉದ್ಯಮಿಗಳಾಗಬೇಕು. ಅದಕ್ಕೂ ಮುಂಚೆ ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರ ಭೂಮಿಗೆ ನೀರು ಕೊಡಬೇಕು. ಹೀಗಾಗಿ ಕೆರೂರ ಏತ ನೀರಾವರಿ ಯೋಜನೆಯಡಿ ಭಾಗದ ನೀರಾವರಿ ವಂಚಿತ ಭೂಮಿಗೆ ನೀರು ಕೊಡಲಾಗುತ್ತಿದೆ. ಈ ಭಾಗದಲ್ಲಿ 2 ಸಾವಿರ ಎಕರೆ ಉಪಯೋಗವಿಲ್ಲದ ಭೂಮಿ ವಶಪಡಿಸಿಕೊಂಡು ಇಲ್ಲಿ ಕೈಗಾರಿಕೆ ವಲಯ ನಿರ್ಮಿಸಲಾಗುವುದು. ಆ ಮೂಲಕ 10 ಸಾವಿರ ಜನರಿಗೆ ಉದ್ಯೋಗ ಕೊಡುವ ಗುರಿ ಇದೆ. ಅಲ್ಲದೇ ವಿಶ್ವ ಮಟ್ಟದಲ್ಲಿ ಗಮನ ಸೆಳೆದ ಬಾದಾಮಿ ತಾಲೂಕಿನ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಚಿಂತನೆಯೂ ಇದೆ. -ಮುರುಗೇಶ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
ರೈತರ ನೀರು, ಗೊಬ್ಬರ ಹಾಗೂ ಬೆಳೆದ ಬೆಳೆಗೆ ಯೋಗ್ಯ ಬೆಲೆ ಕೊಟ್ಟರೆ ಅವರು ಮತ್ತೇನೂ ಕೇಳಲ್ಲ. ರಾಜಕೀಯವೂ ಅವರಿಗೆ ಬೇಕಾಗಿಲ್ಲ. ದುಡಿಯುವ ಕೈಗೆ ಕೈಲಸ ಕೊಡಬೇಕು. ರೈತರು ಬೆಳೆದ ಬೆಳೆಗೆ ಮುಂಚಿತವಾಗಿಯೇ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಆಗ ರೈತರು ಯಾವ ಬೆಳೆ ಎಷ್ಟು ಬೆಳೆಯಬೇಕೆಂದು ನಿರ್ಧಾರ ಮಾಡುತ್ತಾರೆ. ರಾಗಿ ವಿಷಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. 15 ಲಕ್ಷ ಮೆ. ಟನ್ ರಾಗಿ ಬೆಳೆದಿದ್ದು, ಕೇಂದ್ರ ಸರ್ಕಾರ ಕೇವಲ 2 ಲಕ್ಷ ಮೆ. ಟನ್ ಖರೀದಿಸಲು ಅನುಮತಿ ಕೊಟ್ಟಿದೆ. ಇದರಿಂದ ರೈತರ ಅನ್ಯಾಯವಾಗಲಿದೆ. ಎಲ್ಲಾ ರಾಗಿ ಖರೀದಿ ಮಾಡಬೇಕು. ಸಿದ್ದರಾಮಯ್ಯ, ಮಾಜಿ ಸಿಎಂ