Fraud: ಜೀವ ವಿಮೆ ಹೆಸರಲ್ಲಿ 4.51ಕೋಟಿ ರೂ. ವಂಚನೆ
Team Udayavani, Mar 27, 2024, 11:15 AM IST
ಬೆಂಗಳೂರು: ಪ್ರತಿಷ್ಠಿತ ವಿಮಾ ಕಂಪನಿಗಳ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿ, ಜೀವ ವಿಮೆ ಮಾಡಿಸಿಕೊಡುವುದಾಗಿ ನಂಬಿಸಿ ಹತ್ತಾರು ಜನರಿಂದ 4.51 ಕೋಟಿ ರೂ. ಪಡೆದು ವಂಚಿಸಿದ್ದ ಆರೋಪದಡಿ ಉತ್ತರ ಪ್ರದೇಶ ಮೂಲದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ಮನೋಜ್ ಸಿಂಗ್ ಅಲಿಯಾಸ್ ಮನ್ವೀರ್ ಸಿಂಗ್ (40) ಬಂಧಿತ. ಆರೋಪಿ ದೇಶದ ಹಲವು ರಾಜ್ಯಗಳ ಜನರನ್ನು ವಂಚಿಸಿದ್ದ. ಈತನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಕೃತ್ಯದ ಬಗ್ಗೆ ನಗರದ ವಿವಿಧ ಸೈಬರ್ ಕ್ರೈಂ ಠಾಣೆಗಳಲ್ಲಿ 34 ಪ್ರಕರಣಗಳು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಾಗ 4.51 ಕೋಟಿ ರೂ. ವಂಚನೆ ಆಗಿರುವುದು ಗೊತ್ತಾಗಿದೆ. ಪ್ರತಿಷ್ಠಿತ ಖಾಸಗಿ ವಿಮಾ ಕಂಪನಿಗಳ ಹೆಸರಿನಲ್ಲಿ ಆರೋಪಿ ಸಾರ್ವಜನಿಕರನ್ನು ವಂಚನೆ ಮಾಡಿರುವುದು ಪತ್ತೆಯಾಗಿದೆ ಎಂದು ಆಯುಕ್ತರು ಹೇಳಿದರು.
ಯುಟ್ಯೂಬ್ ನೋಡಿ ಕೃತ್ಯ: ಆರೋಪಿ ಮನೋಜ್ಸಿಂಗ್, ಬಿಎಸ್ಸಿ ಪದವೀಧರನಾಗಿದ್ದು, ನೋಯ್ಡಾ ದಲ್ಲಿರುವ ಕಂಪನಿಯೊಂದರಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದ. ವೇತನ ಕಡಿಮೆ ಇದ್ದಿದ್ದರಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಹೆಚ್ಚು ಹಣ ಸಂಪಾದಿಸಬೇಕೆಂದು ಜೀವ ವಿಮೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ನೋಡಿದ್ದ. ಆಗ ಗ್ರಾಹಕರನ್ನು ಹೇಗೆ ಸಂಪರ್ಕಿಸಬೇಕು? ಅವರ ಜತೆ ಹೇಗೆ ಮಾತನಾಡಬೇಕು? ಜೀವ ವಿಮೆ ನಕಲಿ ದಾಖಲೆ ಸೃಷ್ಟಿ ಹೇಗೆ? ಎಂಬುದನ್ನು ವಿಡಿಯೋ ಕರಗತ ಮಾಡಿಕೊಂಡಿದ್ದ.
ಬಳಿಕ ಸಾರ್ವಜನಿಕರಿಗೆ ಕರೆ ಅಥವಾ ನೇರವಾಗಿ ಭೇಟಿಯಾಗಿ ವಂಚಿಸುತ್ತಿದ್ದ. ಇತ್ತೀಚೆಗೆ ಪ್ರತಿಷ್ಠಿತ ವಿಮಾ ಕಂಪನಿಯ ಹೆಸರು ಹೇಳಿಕೊಂಡು ಆರೋಪಿ ನಗರದ ವ್ಯಕ್ತಿಯೊಬ್ಬರಿಗೆ ದೂರುದಾರರಿಗೆ ಕರೆ ಮಾಡಿದ್ದು, ಅದನ್ನು
ನಂಬಿದ ದೂರುದಾರರು ಆರೋಪಿಗೆ 15 ಲಕ್ಷ ರೂ. ಮೌಲ್ಯದ ಚೆಕ್ ಹಾಗೂ ಇತರೆ ದಾಖಲೆಗಳನ್ನು ನೀಡಿದ್ದರು. ಆದರೆ, ದೂರುದಾರರಿಗೆ ಮಾಸಿಕ ಬರಬೇಕಾದ ಲಾಭದ ಹಣ ಬಂದಿರಲಿಲ್ಲ. ಬಳಿಕ ಆರೋಪಿ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್x ಆಫ್ ಆಗಿತ್ತು. ನಂತರ ವಂಚನೆಯಾಗಿರುವುದು ಗೊತ್ತಾಗಿ ದೂರು ನೀಡಿದ್ದರು.
ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಪಾಲಿಸಿಗಳಿಗೆ ಬೇಕಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ ಮತ್ತು ಚೆಕ್ಗಳನ್ನು ಪಡೆಯಲು ಸ್ಥಳೀಯ ವ್ಯಕ್ತಿಯೊಬ್ಬನನ್ನು ನೇಮಿಸಿಕೊಂಡಿದ್ದ. ಆತ ಸಂಗ್ರಹಿಸಿದ ದಾಖಲೆಗಳು ಹಾಗೂ ಚೆಕ್ಗಳನ್ನು ಕೊರಿಯರ್ ಮೂಲಕ ಆರೋಪಿಗೆ ಕಳುಹಿಸುತ್ತಿದ್ದ. ಚೆಕ್ಗಳನ್ನು ಆರೋಪಿ ತನ್ನ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡಿಕೊಂಡು, ಎಟಿಎಂ ಮೂಲಕ ಹಣ ಪಡೆದುಕೊಳ್ಳುತ್ತಿದ್ದ ಎಂದು ಆಯುಕ್ತರು ಹೇಳಿದರು.
ಕಿಸಾನ್ ಸೇವಾ ಕೇಂದ್ರ ನಿರ್ವಹಣೆ :
ಬಂಧಿತ ವಂಚನೆಯಿಂದ ಬಂದ ಹಣದಲ್ಲಿ ತನ್ನೂರಿನಲ್ಲಿ ಕಿಸಾನ್ ಸೇವಾ ಕೇಂದ್ರ ತೆರೆದಿದ್ದ. ಕೃಷಿ ಉಪಕರಣ ಹಾಗೂ ರಸಗೊಬ್ಬರ ಮಾರುತ್ತಿದ್ದ. ಆರೋಪಿ ವಂಚನೆ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಅಲ್ಲದೆ, ಪ್ರತಿಷ್ಠಿತ ವಿಮಾ ಕಂಪನಿಗಳ ಹೆಸರಿನಲ್ಲಿ ನಕಲಿ ಜಾಲತಾಣಗಳನ್ನೇ ಸೃಷ್ಟಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.