ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Team Udayavani, May 15, 2022, 1:50 PM IST
ಬೆಂಗಳೂರು: ಥಣಿಸಂದ್ರ ರೈಲ್ವೆ ಮೇಲ್ಸೇ ತುವೆ ಬಳಿ ಬಿಬಿಎಂಪಿ ಕಸದ ಲಾರಿ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಾದಗಿರಿಯ ಸುರಪುರ ಮೂಲದ ದೇವಣ್ಣ (25) ಮೃತಪಟ್ಟವರು.
ಬಿಬಿಎಂಪಿ ಕಸದ ಲಾರಿ ಚಾಲಕ ದಿನೇಶ್ ನಾಯ್ಕ (40) ನನ್ನು ಬಂಧಿಸಲಾಗಿದೆ. ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ದೇವಣ್ಣ, “ಶನಿವಾರ ಸಂಜೆ ನಾಗವಾರದಿಂದ ಹೆಗಡೆ ನಗರದ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ ಹಿಂದಿನಿಂದ ಬೈಕ್ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರ ವಿಶ್ವನಾಥ್ಗೆ ಸೇರಿದ ಲಾರಿಯಾಗಿದ್ದು, ಮಹದೇವಪುರ ವಾರ್ಡ್ ನಲ್ಲಿ ಕಸ ಸಂಗ್ರಹ ಮಾಡಿದ್ದರು.
2 ತಿಂಗಳಲ್ಲಿ ನಾಲ್ವರು ಬಲಿ: ಕಳೆದ 2 ತಿಂಗಳಲ್ಲಿ ಪಾಲಿಕೆ ಲಾರಿಗೆ ನಾಲ್ವರು ಬಲಿಯಾಗಿದ್ದಾರೆ. ಮಾ.21ರಂದು ಹೆಬ್ಟಾಳದ ಬಳಿ ಕಸದ ಲಾರಿ ಹರಿದು ಅಕ್ಷಯ ಎಂಬ ವಿದ್ಯಾರ್ಥಿನಿ ಸಾವು. ಮಾ.31ರಂದು ಬಾಗಲೂರು ಥಣಿ ಸಂದ್ರ ಮುಖ್ಯ ರಸ್ತೆಯಲ್ಲಿ ರಾಮಯ್ಯ ಎಂಬುವವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು. ಏ.18ರಂದು ನಾಯಂಡಹಳ್ಳಿ ಜಂಕ್ಷನ್ ಬಳಿ ಬ್ಯಾಂಕ್ ಉದ್ಯೋಗಿ ಪದ್ಮಿನಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಕಸದ ಲಾರಿ ಹರಿದು ಸ್ಥಳ ದಲ್ಲೇ ಸಾವನ್ನಪ್ಪಿದ್ದರು.
ಪಾಲಿಕೆ ವಾಹನ ಚಾಲಕರಿಗೆ ದೈಹಿಕ ಪರೀಕ್ಷೆ
ಬೆಂಗಳೂರು: ಪಾಲಿಕೆಯ ಎಲ್ಲ ವಾಹನ ಚಾಲಕರ ಫಿಟ್ ನೆಸ್ ಪ್ರಮಾಣ ಪತ್ರದ ತಪಾಸಣೆ ನಡೆಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.
ಈ ಬಗ್ಗೆ ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಥಣಿಸಂದ್ರದ ರೈಲ್ವೆ ಗೈಟ್ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಂತಾಪ ಸೂಚಿಸಿದ್ದಾರೆ.
ಈ ವಾಹನ ಗುತ್ತಿಗೆದಾರರಿಗೆ ಸೇರಿದ್ದಾಗಿದೆ ಎಂದಿದ್ದಾರೆ.ಇಂತಹ ಅಪಘಾತಗಳನ್ನು ತಪ್ಪಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ಪಾಲಿಕೆಯಿಂದ ಕಾರ್ಯನಿರ್ವಹಿಸುತ್ತಿರುವ 558 ಕಾಂಪ್ಯಾಕ್ಟ್ ವಾಹನಗಳ ಚಾಲಕರಿಗೆ ಹಂತ ಹಂತವಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ.
ಜತೆಗೆ ಈಗಾಗಲೇ 388 ಚಾಲಕರ ತರಬೇತಿ ಪೂರ್ಣಗೊಂಡಿದ್ದು, ಇತರ ಚಾಲಕರ ಪರವಾನಗಿ ಮತ್ತು ದೈಹಿಕ ಪರೀಕ್ಷೆ ಸೇರಿದಂತೆ ಇತರ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.