ಪಾರ್ಕಿಂಗ್ ವಿಚಾರಕ್ಕೆ ಯುವಕನ ಥಳಿಸಿದ ನಟ
Team Udayavani, Sep 30, 2019, 11:19 AM IST
ಬೆಂಗಳೂರು: ವಾಹನ ನಿಲುಗಡೆ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಚಿತ್ರನಟ ನಿಹಾಲ್ ರಜಪೂತ್ ಹಾಗೂ ಮತ್ತಿತರರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮತ್ತೂಂದೆಡೆ ಪ್ರಕರಣವನ್ನು ಮಾತುಕತೆ ಮೂಲಕ ಬಗೆಹರಿಸಲು ವೈಯಾಲಿಕಾವಲ್ ಪೊಲೀಸರು ಯತ್ನಿಸಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಹಲ್ಲೆಗೊಳಗಾಗಿದ್ದ ಹರ್ಷಾ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದ ಬಳಿಕ ನಿಹಾಲ್ ಮತ್ತಿರರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸೆ.19ರಂದು ಆರ್.ವಿ. ರಸ್ತೆಯಲ್ಲಿ ಘಟನೆ ನಡೆದಿದ್ದು. ಆರ್.ವಿ. ಲೇಔಟ್ ನಿವಾಸಿ ಹರ್ಷಾ ಸ್ವರೂಪ್ ಎಂಬವರು ನೀಡಿರುವ ದೂರಿನ ಅನ್ವಯ, ನಿಹಾಲ್ ರಜಪೂತ್, ರಿಷಿಕಾ, ದರ್ಶನ್ ಹಾಗೂ ಇತರೆ ಏಳು ಅಪರಿಚಿತರ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಆರೋಪಗಳ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತೂಂದೆಡೆ ರಿಷಿಕಾ ಅವರು ನೀಡಿರುವ ಪ್ರತಿದೂರು ಆಧರಿಸಿ ಹರ್ಷಾ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆ.19ರಂದು ಮಧ್ಯಾಹ್ನ ಬೈಕ್ ನಿಲುಗಡೆ ವಿಚಾರದಲ್ಲಿ ವಾಹನ ನಿಲುಗಡೆ ಜಾಗಕ್ಕಾಗಿ ಹರ್ಷಾ ಮತ್ತು ರಿಷಿಕಾ ನಡುವೆ ಜಗಳ ನಡೆದಿತ್ತು. ಇದಾದ ಬಳಿಕ ರಿಷಿಕಾ ಸ್ನೇಹಿತ ನಿಹಾಲ್ ಹರ್ಷಾಗೆ ಕರೆ ಮಾಡಿ, ನಾನೊಬ್ಬ ಚಿತ್ರ ನಟ ಎಂದು ಪರಿಚಯಿಸಿಕೊಂಡು, ಬೆದರಿಕೆ ಹಾಕಿದ್ದ. ರಾತ್ರಿ 8.40ರ ಸುಮಾರಿಗೆ ಮನೆಯ ಬಳಿ ಬಂದು ಹಲ್ಲೆ ನಡೆಸಿದ ಎಂದು ಹರ್ಷಾ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳ ಪರ: ಸೆ.19ರಂದು ಹಲ್ಲೆಗೊಳಗಾಗಿ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಾದರೂ ವೈಯಾಲಿಕಾವಲ್ ಪೊಲೀಸರು ದೂರು ಸ್ವೀಕರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಆರೋಪಿಗಳ ಪರ ನಿಂತಿದ್ದರು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದೆ. ಅವರು ಸೂಚನೆ ನೀಡಿದ ಬಳಿಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಹೇಳಿಕೆ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದರು. ಆದರೆ, ಕೊಲೆಯತ್ನ ನಡೆಸಿರುವುದನ್ನು ಪ್ರಕರಣ ದಾಖಲಿಸುವಾಗ ಕೈ ಬಿಟ್ಟಿದ್ದಾರೆ. ಈ ವಿಚಾರವನ್ನೂ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇನೆ ಎಂದು ಹರ್ಷಾ ಹೇಳಿದ್ದಾರೆ.