“ಎದೆಹಾಲು ಬ್ಯಾಂಕ್’ ಸ್ಥಾಪನೆ ಮತ್ತಷ್ಟು ವಿಳಂಬ
Team Udayavani, Aug 5, 2019, 3:08 AM IST
ಬೆಂಗಳೂರು: ಅಪೌಷ್ಟಿಕತೆಯಿಂದ ತಾಯಂದಿರಲ್ಲಿ ಎದೆಹಾಲಿನ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಉಚಿತ “ಎದೆಹಾಲು ಬ್ಯಾಂಕ್’ ತೆರೆಯುವ ಯೋಜನೆ ರೂಪುಗೊಂಡು ಎರಡು ವರ್ಷಗಳಾದರೂ ಅನುಷ್ಠಾನಗೊಂಡಿಲ್ಲ.
ವಾಣಿವಿಲಾಸ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಸರ್ಕಾರಿ ಆಸ್ಪತ್ರೆಯ “ಎದೆ ಹಾಲಿನ ಬ್ಯಾಂಕ್’ ಸ್ಥಾಪನೆ ನಿಗದಿಯಂತೆ ಕಳೆದ ತಿಂಗಳೇ ಆರಂಭವಾಗಬೇಕಿತ್ತು. ಆದರೆ, ಎದೆ ಹಾಲಿನ ಪರೀಕ್ಷೆ ನಡೆಸಲು “ಮಿಲ್ಕ್ ಅನಲೈಜರ್” ಯಂತ್ರೋಪಕರಣದ ಕೊರತೆಯಿಂದಾಗಿ ಇನ್ನೂ ಮೂರ್ನಾಲ್ಕು ತಿಂಗಳು ತಡವಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಮಗು ಜನಿಸಿದ ಗಂಟೆಯೊಳಗೆ ಎದೆ ಹಾಲು ಕುಡಿಸುವುದು ಪ್ರಮುಖ ಪ್ರಕ್ರಿಯೆ. ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ ಪ್ರಕಾರ ಇತ್ತೀಚಿನ ತಿಂಗಳುಗಳಲ್ಲಿ ಶೇ.7ರಷ್ಟು ಮಕ್ಕಳಿಗೆ ಎದೆ ಹಾಲಿನ ಕೊರತೆ ಉಂಟಾಗುತ್ತಿದೆ. ಅದಕ್ಕೆ ಕಾರಣ ಅಪೌಷ್ಟಿಕತೆಯಿಂದ ತಾಯಂದಿರಲ್ಲಿ ಎದೆಹಾಲಿನ ಕೊರತೆ ಉಂಟಾಗುತ್ತಿದೆ. ಶಿಶು ಮರಣಕ್ಕೆ ತಾಯಿ ಎದೆ ಹಾಲಿನ ಕೊರತೆಯೂ ಪ್ರಮುಖ ಕಾರಣವಾಗಿದೆ.
ತಾಯಿ ಎದೆ ಹಾಲು ಕೊರತೆಯಾದಾಗ ಮಕ್ಕಳಿಗೆ ಹಸುವಿನ ಹಾಲು ನೀಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುವ ಆತಂಕವೂ ಇದೆ. ಹೀಗಾಗಿ, ಇದನ್ನು ತಪ್ಪಿಸಿ ಅಗತ್ಯ ಇರುವ ಮಕ್ಕಳಿಗೆ ಎದೆ ಹಾಲು ಪೂರೈಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. 2 ವರ್ಷಗಳ ಹಿಂದೆ ಅದಕ್ಕೆ ಪ್ರಕ್ರಿಯೆ ಪ್ರಾರಂಭವಾಗಿದ್ದರೂ ಇದುವರೆಗೂ ಆರಂಭವಾಗಿಲ್ಲ.
ಒಂಬತ್ತು ಕೊಟ್ಟು ಒಂದು ಬಿಟ್ಟರು: ವಾಣಿವಿಲಾಸ ಆಸ್ಪತ್ರೆಯಲ್ಲಿ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಬಿಡುಗಡೆಗೆ ಮುಂದಾಗಿತ್ತು. ಈ ವೇಳೆ ಕರ್ನಾಟಕ ಆ್ಯಂಟಿ ಬಯೋಟಿಕ್ಸ್ ಮತ್ತು ಫಾರ್ಮಾಸಿಟಿಕಲ್ಸ್ ಲಿಮಿಟೆಡ್ (ಕೆಎಪಿಎಲ್) ದಾನಿಗಳಾಗಿ ಮುಂದೆ ಬಂದು 50 ಲಕ್ಷ ರೂ.ಮೌಲ್ಯದ ಯಂತ್ರೋಪಕರಣಗಳನ್ನು ಆಸ್ಪತ್ರೆ ನೀಡಿದರು.
ಅದರಲ್ಲಿ ಬ್ಯಾಂಕ್ ಆರಂಭಕ್ಕೆ ಬೇಕಾದ ಪಾಶ್ಚರೀಕರಿಸಲು ಪ್ಯಾಶ್ಚರೈಸರ್ ಯಂತ್ರ, ಹಾಲು ಶೇಖರಣೆ ಮಾಡುವ ಡಿಫ್ರಿಜರ್ ಮತ್ತು ಫ್ರೀಜರ್, ಎದೆಹಾಲು ಸಂಗ್ರಹ ಬ್ರೆಸ್ಟ್ ಪಂಪ್ ಮತ್ತು ಬಾಟಲ್ಗಳು ಸೇರಿದಂತೆ 10 ಪರಿಕರಗಳಲ್ಲಿ ಒಟ್ಟು ಒಂಬತ್ತು ಪರಿಕರಣಗಳನ್ನು ಪೂರೈಸಿದೆ. ಆದರೆ, ಎದೆ ಹಾಲನ್ನು ವಿಂಗಡಿಸುವ ಮಿಲ್ಕ್ ಅನಲೈಜರ್ ಯಂತ್ರವನ್ನು ನೀಡಿಲ್ಲ. ಹೀಗಾಗಿ, ಬ್ಯಾಂಕ್ ಆರಂಭಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳುತ್ತಾರೆ.
ಟೆಂಡರ್ ಅಗತ್ಯ: ಬ್ಯಾಂಕ್ ಆರಂಭಕ್ಕೆ ಬಾಕಿ ಉಳಿದಿರುವ ಮಿಲ್ಕ್ ಅನಲೈಜರ್ ಯಂತ್ರವನ್ನು ಕೆಎಪಿಎಲ್ ನೀಡಿದ ಹಿನ್ನೆಲೆಯಲ್ಲಿ ಖರೀದಿಸಲು ಅನುಮತಿ ಕೋರಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕಾರಿಗಳಿಗೆ ಕಳೆದ ತಿಂಗಳು ಪತ್ರ ಬರೆಯಲಾಗಿದೆ. ಈಗ ಅಧಿಕಾರಿಗಳು ಆಸ್ಪತ್ರೆಯ ಅನುದಾನದಲ್ಲಿಯೇ ಯಂತ್ರವನ್ನು ಖರೀದಿಸಲು ಸೂಚನೆ ನೀಡಿದ್ದಾರೆ. ಸದ್ಯ ಟೆಂಡರ್ ಕರೆದರೂ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡೂವರೆ ತಿಂಗಳು ಬೇಕಾಗುತ್ತದೆ ಎಂದು ತಿಳಿಸುತ್ತಾರೆ.
ಎದೆಹಾಲಿನ ಬ್ಯಾಂಕ್ ಮುನ್ನಡೆಸಲು ತಜ್ಞ ವೈದ್ಯರು, ಸಿಬ್ಬಂದಿ ನೇಮಕ ಅವಶ್ಯಕ. ಆದರೆ, ಸರ್ಕಾರ ಹಾಗೂ ಇಲಾಖೆ ಮನವಿ ಮಾಡಿದ್ದರೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ವಾಣಿವಿಲಾಸ ಆಸ್ಪತ್ರೆಯ ವೈದ್ಯ, ಸಿಬ್ಬಂದಿಗಳೇ ಬ್ಯಾಂಕ್ನ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ವೈದ್ಯರಿಗೆ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ ಎಂದೂ ಹೇಳುತ್ತಾರೆ.
ದಾನಿಗಳು ನೆರವು: ತಾಯಿ ಎದೆ ಹಾಲು ಕೇಂದ್ರ ಆರಂಭಿಸಲು ಕೊರತೆಯಾಗಿರುವ ಮಿಲ್ಕ್ ಅನಲೈಜರ್ ಯಂತ್ರವನ್ನು ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳ್ಳಲು ತಡವಾಗುತ್ತದೆ. ಈ ಯಂತ್ರಕ್ಕೆ ಸುಮಾರು 12 ಲಕ್ಷ ರೂ. ವೆಚ್ಚವಾಗಲಿದ್ದು, ಯಾವುದಾದರು ಸಂಸ್ಥೆಗಳು ಅಥವಾ ದಾನಿಗಳು ಮುಂದೆ ಬಂದು ಖರೀದಿಗೆ ನೆರವಾಗಬಹುದು ಎಂದು ಆಸ್ಪತ್ರೆ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಮನವಿ ಮಾಡಿದ್ದಾರೆ.
ಮಿಲ್ಕ್ ಅನಲೈಜರ್ ಯಂತ್ರದ ಕಾರ್ಯವೇನು?: ಅವಧಿ ಪೂರ್ವದಲ್ಲಿ ಜನಿಸಿ ಮಗು, ಅವಧಿ ಪೂರ್ಣಗೊಂಡು ಜನಿಸಿದ ಮಗು, ತಡವಾಗಿ ಜನಿಸಿದ ಮಗುವಿಗೆ ನೀಡುವ ಹಾಲಿನ ಪೋಷಕಾಂಶಗಳಲ್ಲಿ ವ್ಯತ್ಯಾಸವಿರುತ್ತದೆ. ಅದಕ್ಕನುಗುಣವಾಗಿ ಈ ಯಂತ್ರವು ಸಂಗ್ರಹಿಸಿದ ತಾಯಿ ಎದೆಹಾಲಿನಲ್ಲಿರುವ ಪ್ರೋಟಿನ್, ಕೊಬ್ಬು, ಲ್ಯಾಕ್ಟೋಸ್ ಸೇರಿದಂತೆ ಇತರೆ ಪೋಷಕಾಂಶಗಳನ್ನು ಅಳತೆ ಮಾಡುತ್ತದೆ. ಮಗು ಜನನದ ಆಧಾರದಲ್ಲಿ ಹಾಲನ್ನು ಪ್ರತ್ಯೇಕಿಸಲು ಅವಶ್ಯಕವಾಗಿದೆ ಎಂದು ವೈದ್ಯರು ತಿಳಿಸಿದರು.
ಎದೆ ಹಾಲು ಬ್ಯಾಂಕ್ ಸ್ಥಾಪಿಸಲು ಬೇಕಾದ ಬಹುತೇಕ ಪರಿಕರಗಳನ್ನು ಕರ್ನಾಟಕ ಆ್ಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸಿಟಿಕಲ್ಸ್ ಲಿಮಿಟೆಡ್ ನೀಡಿದ್ದು, ಬಾಕಿ ಉಳಿದಿರುವ ಮಿಲ್ಕ್ ಅನಲೈಜರ್ ಯಂತ್ರ ಖರೀದಿಸಲು ಟೆಂಡರ್ ಕರೆಯಬೇಕಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಮೂರು ತಿಂಗಳಾಗುತ್ತದೆ.
-ಡಾ.ಗೀತಾ ಶಿವಮೂರ್ತಿ, ವೈದ್ಯಕೀಯ ಅಧೀಕ್ಷಕಿ, ವಾಣಿವಿಲಾಸ ಆಸ್ಪತ್ರೆ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ