ಶುದ್ಧ ನೀರು, ಆರೋಗ್ಯಕ್ಕಾಗಿ ಬೈಕ್ ರ್ಯಾಲಿ
Team Udayavani, Mar 31, 2017, 11:53 AM IST
ಯಲಹಂಕ: “ಶುದ್ಧ ನೀರು ಉತ್ತಮ ಆರೋಗ್ಯ’ಕ್ಕಾಗಿ ಭಾರತೀಯ ಮಾನವ ಹಕ್ಕುಗಳ ಜಾಗೃತಿ ಸೇನೆಯ ಕಾರ್ಯಕರ್ತರು ಗುರುವಾರ ಯಲಹಂಕ ನಗರ, ಹೆಸರಘಟ್ಟ, ರಾಜಾನುಕುಂಟೆ ಜಾಲ ಹೋಬಳಿಗಳ ಹಳ್ಳಿಗಳ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು.
ಭಾರತೀಯ ಮಾನವ ಹಕ್ಕುಗಳ ಜಾಗೃತಿ ಸೇನೆಯ ರಾಜಾಧ್ಯಕ್ಷ ಶಿವಕುಮಾರ್ ರ್ಯಾಲಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು “”ಶುದ್ಧ ನೀರು ಮತ್ತು ಉತ್ತಮ ಆರೋಗ್ಯ ಹೊಂದಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಎಲ್ಲರೂ ಬಯಲು ಬಹಿìದೆಸೆಯನ್ನು ಬಿಟ್ಟು ಕಡ್ಡಾಯವಾಗಿ ಶೌಚಾಲಯ ಬಳಸಬೇಕು,” ಎಂದು ಹೇಳಿದರು.
ಜಾಗೃತಿ ಸೇನೆಯ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ ಮಾತನಾಡಿ “ಮಳೆಯಿಲ್ಲದೆ ಅಂರ್ತಜಲ ಮಟ್ಟ ಕುಸಿದಿದ್ದು ಕುಡಿಯಲು ಶುದ್ಧ ನೀರು ಸಿಗದಂತಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲು ಸರ್ಕಾರ ಮುಂದಾಗಬೇಕು,”ಎಂದು ಒತ್ತಾಯಿಸಿದರು.
ಕರ್ನಲ್ ರಾಮದಾಸ್, ಸಂಘಟನೆ ರಾಜ್ಯ ಯುವ ಅಧ್ಯಕ್ಷರಾದ ರಜನೀಶ್ಆರ್ಯನ್, ಕಾನೂನು ಸಲಹೆಗಾರರಾದ ಮುರುಳಿ ಕುಮಾರ್, ಯಲಹಂಕ ಕ್ಷೇತ್ರದ ಅಧ್ಯಕ್ಷರಾದ ವೆಂಕಟರಾಜು ಸೇರಿದಂತೆ ನೂರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.