ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆಶಿ ದಿಢೀರ್ ಭೇಟಿ
Team Udayavani, Jun 16, 2018, 11:35 AM IST
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ, ಮಿಂಟೋ, ನೆಫ್ರೋಲಾಜಿ ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಶೀಘ್ರವೇ ರೋಗಿಗಳ ನೋಂದಣಿ ಮತ್ತು ಬಿಲ್ಲಿಂಗ್ಗೆ ಕೇಂದ್ರೀಕೃತ ವ್ಯವಸ್ಥೆ ಜಾರಿಯಾಗಲಿದೆ.
ವಿಕ್ಟೋರಿಯಾ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಾಲ್ಕೈದು ಆಸ್ಪತ್ರೆಗಳಿವೆ. ಎಲ್ಲವೂ ಸರ್ಕಾರಿ ಆಸ್ಪತ್ರೆಗಳೇ ಆದರೂ ಚಿಕಿತ್ಸೆ ಪಡೆಯಬೇಕಾದರೆ ಪ್ರತ್ಯೇಕ ನೋಂದಣಿ ಮಾಡಬೇಕು.
ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು, ಬೆಂಗಳೂರು ವೈದ್ಯಕೀಯ ಕಾಲೇಜು ಅಡಿಯಲ್ಲಿ ಕೇಂದ್ರೀಕೃತ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗುವುದು. 20 ದಿನಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವ್ಯವಸ್ಥೆ ಜಾರಿ ನಂತರ ಒಂದು ಕಡೆ ನೋಂದಣಿ ಮಾಡಿಸಿ ಎಲ್ಲ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ ಎಂದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ವಾರ್ಡ್ ಪರಿಶೀಲಿಸಿದ ಬಳಿಕ ಟ್ರಾಮಾ ಸೆಂಟರ್ಗೆ ಭೇಟಿ ನೀಡಿದ ಸಚಿವರು, ಯಾವುದೇ ಕಾರ್ಪೊರೇಟ್ ಆಸ್ಪತ್ರೆಗಿಂತ ಕಡಿಮೆ ಇಲ್ಲದಂತೆ ಇಲ್ಲಿ ಚಿಕಿತ್ಸಾ ಸೌಲಭ್ಯವಿದೆ. ಈ ಸೇವೆಗಳು ಸರಳ ರೀತಿಯಲ್ಲಿ ರೋಗಿಗಳಿಗೆ ಸಿಗುವ ವ್ಯವಸ್ಥೆ ಆಗಬೇಕು ಎಂದರಲ್ಲದೆ, ಹೊರ ರೋಗಿಗಳಿಗೆ ವಿಶ್ರಾಂತಿ, ಪಾರ್ಕಿಂಗ್ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ವಾರ್ಡ್, ಲಾಡ್ಜ್ ಆಗಬಾರದು: ವಿಕ್ಟೋರಿಯಾ ಆಸ್ಪತ್ರೆ ಆವರಣ ವಾಣಿಜ್ಯ ಚಟುವಟಿಕೆ ಆಗರವಾಗುತ್ತಿದೆ. ಪ್ರತಿ ದಿನ 200-300 ರೂ. ನೀಡಿ ವಾರ್ಡ್ಗಳನ್ನು ಲಾಡ್ಜ್ ಮಾದರಿ ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಆಸ್ಪತ್ರೆಗಳ ವಾರ್ಡ್ಗಳು ರೋಗಿಗಳಿಗೆ ಮಾತ್ರ ಬಳಕೆಯಾಗಬೇಕು. ವಾರ್ಡ್ಗಳನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಆಸ್ಪತ್ರೆ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಒಂದೊಮ್ಮೆ ಇಂತಹ ಚಟುವಟಿಕೆಗಳು ಮುಂದುವರಿದರೆ ಸಹಿಸಲು ಸಾಧ್ಯವಿಲ್ಲ ಎಂದರು.
“ನಾನಿಲ್ಲಿ ತಪ್ಪು ಕಂಡುಹಿಡಿಯಲು ಬಂದಿಲ್ಲ. ಧನಾತ್ಮಕ ದೃಷ್ಟಿಕೋನ ಇಟ್ಟುಕೊಂಡು ಬಂದಿದ್ದೇನೆ. ತಪ್ಪುಗಳನ್ನು ಕಂಡುಹಿಡಿದು ಸರಿಪಡಿಸಲು ಬೇರೆಯವರನ್ನು ನೇಮಕ ಮಾಡಲಾಗುವುದು,’ ಎಂದು ಸಚಿವರು ಹೇಳಿದರು. ಇದೇ ವೇಳೆ ಸಚಿವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಾ.ಬಾಲಾಜಿ ಪೈ ಅವರಿಂದ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡರು.
ಸಚಿವರ ಭೇಟಿ ಬೆನ್ನಲ್ಲೇ ನಿರ್ಲಕ್ಷ್ಯ: ಸಚಿವ ಡಿ.ಕೆ.ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆ ಟ್ರಾಮಾ ಸೆಂಟರ್ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅರ್ಧ ಗಂಟೆಯಲ್ಲೇ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ತೋರಿದರೆಂಬ ಆರೋಪ ಕೇಳಿಬಂದಿದೆ.
ಕೆಂಗೇರಿ ಚೆಕ್ಪೋಸ್ಟ್ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ನಿಶಾಂತ್ (28) ಹಾಗೂ ಸ್ನೇಹಿತ ಅರುಣ್ಗೆ ಟಾಟಾ ಸುಮೋ ಡಿಕ್ಕಿ ಹೊಡೆದು ಇಬ್ಬರೂ ಗಾಯಗೊಂಡಿದ್ದರು. ಗಾಯಾಳುಗಳನ್ನು ಸಮೀಪದ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾದರೂ ಅಲ್ಲಿನ ವೈದ್ಯರು ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪೋಷಕರು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದರು. ಆ್ಯಂಬುಲೆನ್ಸ್ನಲ್ಲೇ ರಕ್ತಸ್ರಾವದಿಂದ ಗಾಯಾಳುಗಳು ನರಳುತ್ತಿದ್ದರೂ ಸಾಕಷ್ಟು ಹೊತ್ತು ವೈದ್ಯರು ಚಿಕಿತ್ಸೆ ನೀಡಲಿಲ್ಲ. ಕನಿಷ್ಠ ದಾಖಲಿಸಿಕೊಳ್ಳುವ ಸೌಜನ್ಯವನ್ನೂ ತೋರಲಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.