ವಿಧಾನಸೌಧ ಮೇಲ್ಭಾಗದಲ್ಲಿ ಡ್ರೋನ್ ಹಾರಾಟ: ಇಬ್ಬರ ಸೆರೆ
Team Udayavani, Jul 30, 2023, 10:23 AM IST
ಬೆಂಗಳೂರು: ವಿಧಾನಸೌಧದ ಮೇಲ್ಭಾಗದಲ್ಲಿ ಕಾನೂನು ಬಾಹಿರವಾಗಿ ಡ್ರೋನ್ ಹಾರಾಟ ನಡೆಸಲು ಯತ್ನಿಸಿದ ಆರೋಪದ ಮೇಲೆ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಇಬ್ಬರನ್ನು ವಿಧಾನಸೌಧ ಪೊಲೀಸರು ಬಂಧಿಸಿ, ಬಳಿಕ ಠಾಣಾ ಜಾಮೀನು ಮೂಲಕ ಬಿಡುಗಡೆ ಮಾಡಿದ್ದಾರೆ.
ಅರುಣ್ ಮತ್ತು ಬಾಬು ಎಂಬುವರಿಗೆ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ನಡೆಸುತ್ತಿರುವ ಅರುಣ್ ಮತ್ತು ಬಾಬು, ಸಂಸ್ಥೆಯೊಂದರ 15 ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆಗೆ ಒಪ್ಪಿಕೊಂಡಿದ್ದರು. ಹೀಗಾಗಿ ಕಿರುಚಿತ್ರ ನಿರ್ಮಾಣ ಮಾಡಲು ವಿಧಾನಸೌಧದ ದೃಶ್ಯ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಜುಲೈ 28ರಂದು ಸಂಜೆ ನಸುಕಿನ 6 ಗಂಟೆ ಸುಮಾರಿಗೆ ವಿಧಾನಸೌಧದ ಪೂರ್ವ ದ್ವಾರದ ಅಂಬೇಡ್ಕರ್ ಪ್ರತಿಮೆ ಬಳಿ ಡ್ರೋನ್ ಹಾರಾಟಕ್ಕೆ ಯತ್ನಿಸಿದ್ದಾರೆ.
ಅದೇ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗಮನಿಸಿ ಕೂಡಲೇ ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತ-ಮುತ್ತ ಡ್ರೋನ್ ಹಾರಾಟ ನಿಷೇಧಿಸಿದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ತಪ್ಪಾಗಿದೆ ಎಂದು ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.