ಪ್ರವಾಹ ಪರಿಸ್ಥಿತಿ ಮುಂದುವರಿಕೆ, ಭಾರಿ ಮಳೆ ಸಾಧ್ಯತೆ
Team Udayavani, Jul 17, 2018, 6:00 AM IST
ಬೆಂಗಳೂರು: ರಾಜ್ಯದಲ್ಲಿ ಸೋಮವಾರವೂ ವರುಣನ ಅಬ್ಬರ ಮುಂದುವರಿದಿದೆ. ಮಲೆನಾಡು, ಕರಾವಳಿ, ಕಾವೇರಿ ಕಣಿವೆ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಬಹುತೇಕ ಜಲಾಶಯಗಳು ಭರ್ತಿಯಾಗಿದೆ.
ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಅಣೆಕಟ್ಟು ಸಂಪೂರ್ಣ
ಭರ್ತಿಯಾಗಿರುವುದರಿಂದ ಹಾಲಿ ಜಲಾಶಯದಿಂದ 82 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ ಜಲಾಶಯ ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ.
ಸೋಮವಾರ ಬೆಳಗ್ಗೆಯಿಂದ 82 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಜಲಾಶಯದಲ್ಲಿ 123.05 ಅಡಿಗೆ ನೀರಿನ ಮಟ್ಟ ಕಾಯ್ದುಕೊಳ್ಳಲಾಗಿದೆ. ಜಲಾಶಯಕ್ಕೆ 65,777 ಕ್ಯೂಸೆಕ್ ನೀರು ಹರಿದುಬರುತ್ತಿರುವುದರಿಂದ 81,930 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ನದಿಗೆ 79,319 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ತೆಪ್ಪಗಳ ಮೂಲಕ ರಕ್ಷಣೆ: ಕಾವೇರಿ ಜಲಾಶಯದಿಂದ ನದಿಗಳಿಗೆ ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟಿರುವ ಪರಿಣಾಮ ಪ್ರವಾಹಕ್ಕೆ ಸಿಲುಕಿ ಗೌತಮ ಮಠದಲ್ಲಿ ಆಶ್ರಯ ಪಡೆಯುತ್ತಿದ್ದ ಯುವಕನನ್ನು ಸೋಮವಾರ ತೆಪ್ಪಗಳ ಮೂಲಕ ಸುರಕ್ಷಿತವಾಗಿ ಕರೆತರಲಾಯಿತು.
ಪಾಂಡವಪುರ ತಾಲೂಕಿನ ಜಯಂತಿನಗರದ ಚೇತನ್ (22) ಪ್ರವಾಹಕ್ಕೆ ಸಿಲುಕಿ ನದಿಯ ತಟದಲ್ಲಿರುವ ಗೌತಮ ಕ್ಷೇತ್ರದ ಮಠದಲ್ಲಿ ಕಳೆದ ಎರಡು ದಿನಗಳ ಕಾಲ ಆಶ್ರಯ ಪಡೆದಿದ್ದನು ಎನ್ನಲಾಗಿದೆ.
ಪ್ರಸಿದಟಛಿ ರಂಗನತಿಟ್ಟು ಪಕ್ಷಿಧಾಮದ ಬಹುತೇಕ ನಡುಗಡ್ಡೆಗಳು ಜಲಾವೃತಗೊಂಡಿವೆ. ಜಲಚರ ಪಕ್ಷಿಗಳು ಸಂಕಷ್ಟ ಸ್ಥಿತಿ ಎದುರಿಸುತ್ತಿವೆ. ಹಕ್ಕಿಗಳ ಗೂಡುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಒಂದೆಡೆ ಪ್ರಸಿದಟಛಿ ಪ್ರವಾಸಿ ತಾಣ ಕೆಆರ್ಎಸ್ನ ಬೃಂದಾವನ ಮತ್ತು ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಶ್ರೀರಂಗಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಸ್ನಾನ ಘಟ್ಟ ಬಳಿಯ ಕಾವೇರಿ ನದಿ ತಟದಲ್ಲಿದ್ದ ದೇವಸ್ಥಾನಗಳು, ಪಶ್ಚಿಮವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದಾಟಛಿ ಕೇಂದ್ರಗಳು ಜಲಾವೃತವಾಗಿವೆ. ಚೆಕ್ ಪೋಸ್ಟ್ ಬಳಿಯ ಸಾಯಿಮಂದಿರಕ್ಕೆ ಪ್ರವಾಹದ ನೀರು ನುಗ್ಗಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂ ಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ವೆಸ್ಲಿ ಸೇತುವೆ ಕಾವೇರಿ ರಭಸಕ್ಕೆ ಸೋಮವಾರ ಕುಸಿತಗೊಂಡಿದೆ.
ಇಬ್ಬರು ನೀರುಪಾಲು: ಕನಕಪುರ ತಾಲೂಕಿನ ಪ್ರವಾಸಿ ತಾಣವಾದ ಮೇಕೆದಾಟುವಿನಲ್ಲಿಕಾಲುಜಾರಿ ಬೆಂಗಳೂರಿನ ಖಾಸಗಿ ಕಂಪನಿಯ ಇಬ್ಬರು ಇಂಜಿನಿಯರಿಂಗ್ ಉದ್ಯೋಗಿಗಳು ನೀರುಪಾಲದ ಘಟನೆ ಸಂಭವಿಸಿದೆ. ಶಮೀರ್ ರೆಹಮಾನ್(29), ಭವಾನಿ ಶಂಕರ್(29) ನೀರುಪಾಲಾದವರು ಎಂದು ತಿಳಿದುಬಂದಿದೆ.
ಸೇತುವೆ ಕುಸಿದು ಸಂಪರ್ಕ ಕಡಿತ
ಬೆಳಗಾವಿ ಜಿಲ್ಲೆ ತಿವೋಲಿ ಮತ್ತು ತಿವೋಲಿವಾಡಾ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬರುವ ಹಾಲತ್ರಿ ನದಿಗೆ ನಿರ್ಮಿಸಿರುವ ಸೇತುವೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕೊಚ್ಚಿ ಹೋಗಿದೆ.
ಸೋಮವಾರ ಬೆಳಗ್ಗೆ ಗ್ರಾಮದ ಜನರಿಗೆ ಸೇತುವೆ ಕೊಚ್ಚಿ ಹೋದ ಮಾಹಿತಿ ತಿಳಿದಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದ್ದು, ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಕೆಪಿಸಿಎಲ್ ಮೂಲಕ ಸೋಮವಾರದಿಂದ 45,000 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ವಿದ್ಯುತ್ ಉತ್ಪಾದನಾ ಘಟದ ಮೂಲಕ 25 ಸಾವಿರ ಕ್ಯೂಸೆಕ್, ಮಧ್ಯಾಹ್ನ ನಂತರ ಮತ್ತೆ 20 ಸಾವಿರ ಕ್ಯೂಸೆಕ್ ಸೇರಿ ಒಟ್ಟು 45 ಸಾವಿರ ಕ್ಯೂಸೆಕ್ ನೀರನ್ನು ಬಲ ಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಬಿಡಲಾ ಗುತ್ತಿದೆ. ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದ ಒಳಹರಿವು 45 ಸಾವಿರ ಕ್ಯೂಸೆಕ್ಗೆ ಹೆಚ್ಚಳವಾಗಿದೆ.
ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ವರದೆಯ ಒಡಲು ತುಂಬಿ ಹರಿಯುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ, ಭಾಶಿ, ಮೊಗವಳ್ಳಿ, ಅಜ್ಜರಣಿ ಭಾಗದ ಸುಮಾರು ನಾಲ್ಕು ನೂರಕ್ಕೂ ಎಕರೆ ಭತ್ತ, ಅಡಿಕೆ, ಅನಾನಸ್, ಶುಂಠಿ ಬೇಸಾಯ ಪ್ರದೇಶಗಳು ಜಲಾವೃತವಾಗಿದೆ. 3-4 ದಿನಗಳಿಂದ ನೀರಿನಲ್ಲೇ ಇರುವ ಬೆಳೆಗಳು ಇನ್ನೂ ನಾಲ್ಕಾರು ದಿನ ಉಳಿದರೆ ಕೊಳೆಯುವ ಸಾಧ್ಯತೆಗಳು ಹೆಚ್ಚಿವೆ. ಶಿವಮೊಗ್ಗ ಜಿಲ್ಲೆ ಆನಂದಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೋಮವಾರ ಮಧ್ಯಾಹ್ನ ಭಾರೀ ಬಿರುಗಾಳಿಗೆ ಬೃಹತ್ ಮರವೊಂದು ಧರೆಗುರುಳಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಮೂರ್ನಾಲ್ಕು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಇನ್ನೂ ಎರಡು ದಿನಗಳು ಈ ಮಳೆ ಮುಂದು ವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮನೆ ಗೋಡೆ ಕುಸಿದು ವ್ಯಕ್ತಿ ಸಾವು: ಮಳೆಯ ರಭಸಕ್ಕೆ ಮನೆ ಗೋಡೆ ಕುಸಿದು ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸೋಮಪ್ಪ ಭರಮಪ್ಪ ವರವಿ (55) ಮೃತಪಟ್ಟಿದ್ದಾರೆ.