ಕುಟುಂಬಕ್ಕೊಬ್ಬರಿಗೆ ಮಾತ್ರ ಸಾಲ ಮನ್ನಾ
Team Udayavani, Aug 15, 2018, 6:00 AM IST
ಬೆಂಗಳೂರು: ಸಹಕಾರಿ ಬ್ಯಾಂಕ್ಗಳಿಂದ ಅಲ್ಪಾವಧಿ ಸಾಲ ಪಡೆದ ರೈತರ ಪ್ರತಿ ಕುಟುಂಬದ ಒಬ್ಬರಿಗೆ ಒಂದು ಲಕ್ಷ ರೂ.ವರೆಗಿನ ಚಾಲ್ತಿ ಸಾಲ ಮನ್ನಾ ಮಾಡುವುದಾಗಿ ಸರಕಾರ ಆದೇಶ ಹೊರಡಿಸಿದೆ. ಅಲ್ಲದೆ 2019ರ ಮಾ. 31ರೊಳಗೆ ಸುಸ್ತಿ ಬಡ್ಡಿ, 1 ಲಕ್ಷ ರೂ. ಮೇಲಿನ ಮೊತ್ತ ವನ್ನು ಪಾವತಿಸಿದರೆ ಮಾತ್ರ ಸಾಲ ಮನ್ನಾ ಲಾಭ ದೊರೆಯಲಿದೆ ಎಂದು ಸಹಕಾರಿ ಇಲಾಖೆ ಆದೇಶದಲ್ಲಿ ತಿಳಿಸಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲ ಮನ್ನಾ ಅನ್ವಯ ಎಂಬ ಷರತ್ತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ತೆಗೆದು ಹಾಕಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿ ದ್ದರು. ಆದರೆ ಈಗ ಆದೇಶದಲ್ಲಿ ರೈತರ ಪ್ರತಿ ಕುಟುಂಬದ 1 ಲಕ್ಷ ರೂ. ಮಾತ್ರ ಎಂದು ಹೇಳಲಾಗಿದೆ.
ಈ ಯೋಜನೆ ಲಾಭ ಪಡೆಯಲು ಕೆಲವು ಷರತ್ತುಗಳನ್ನೂ ಹಾಕಲಾಗಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್, ಪಿಕಾರ್ಟ್ ಬ್ಯಾಂಕ್ಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ಜು. 10, 2018ಕ್ಕೆ ಹೊಂದಿರುವ ಹೊರ ಬಾಕಿ ಸಾಲಕ್ಕೆ ಮಾತ್ರ ಅನ್ವಯವಾಗಲಿದೆ. 2018ರ ಜು. 10ಕ್ಕೆ ಇರುವ ಸಾಲದ ಹೊರಬಾಕಿಯಲ್ಲಿ ಒಂದು ರೈತ ಕುಟುಂಬಕ್ಕೆ ಗರಿಷ್ಠ ಒಂದು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಲಾಗು ವುದು. ಸಾಲ ಪಡೆದ ರೈತರು ಮೃತಪಟ್ಟಿ ದ್ದಲ್ಲಿ ಅಂತಹ ರೈತರ ವಾರಸುದಾರ ರಿಗೂ ಸಾಲ ಸೌಲಭ್ಯ ದೊರೆಯುತ್ತದೆ.
ಸಾಲ ಮನ್ನಾ ಯೋಜನೆ ಲಾಭ ಪಡೆಯಲು ರೈತರು 1 ಲಕ್ಷ ರೂ. ಗಿಂತ ಮೇಲಿನ ಮೊತ್ತವನ್ನು ಮರುಪಾವತಿ ಮಾಡಬೇಕು. ಜು. 10ಕ್ಕೆ ಹೊರಬಾಕಿ ಇರುವ ಮೊತ್ತವನ್ನು ಸರಕಾರದ ಆದೇಶ ಜಾರಿಯಾಗುವ ಮೊದಲೇ ಪೂರ್ಣ ಮರು ಪಾವತಿಸಿದಲ್ಲಿ ಮನ್ನಾ ಆಗಬೇಕಿರುವ ಮೊತ್ತವನ್ನು ರೈತರ ಖಾತೆಗೆ ಜಮಾ ನೀಡಲಾಗುವುದು ಎಂದು ತಿಳಿಸಲಾಗಿದೆ.