Bengaluru: ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದ ಲಾರಿ; ಚಾಲಕ ಸ್ಥಳದಲ್ಲೇ ಸಾವು
Team Udayavani, Mar 26, 2024, 10:42 AM IST
ಬೆಂಗಳೂರು: ಅತಿ ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಾಹೀದ್ ಖಾನ್(40) ಮೃತ ಸವಾರ. ಮಧ್ಯಪ್ರದೇಶದ ಗ್ವಾಲಿಯರ್ನಿಂದ ಸಾಹೀದ್ ಖಾನ್ ಭಾನುವಾರ ರಾತ್ರಿ 10 ಗಂಟೆಗೆ ಸರಕು ಸಾಗಣೆಯ ಲಾರಿ ಚಲಾಯಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಬಳ್ಳಾರಿ ರಸ್ತೆಯ ರಾಯಲ್ ಓಕ್ ಶೋ ರೂಮ್ ಮುಂಭಾಗ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಪಿಲ್ಲರ್ಗಳನ್ನು ನಿರ್ಮಿಸಲಾಗಿತ್ತು.
ಇದೇ ರಸ್ತೆಯಲ್ಲಿ ಬಂದ ಸಾಹೀದ್ ಖಾನ್ ತಿರುವಿನಲ್ಲಿ ಲಾರಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ನಿರ್ಮಾಣದ ಹಂತದ ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದಿದ್ದು, ಲಾರಿ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಹೀಗಾಗಿ ಸಾಹೀದ್ ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ಲಿನರ್ಗೆ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮೃತ ಲಾರಿ ಚಾಲಕ ಸಾಹೀದ್ ಖಾನ್ ವಿರುದ್ಧ ಅತಿ ವೇಗ ಮತ್ತು ನಿರ್ಲಕ್ಷ್ಯ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.