ಮೆಟ್ರೋಗೆ ಕಲ್ಲು ತೂರಾಟಗಾರರ ಕಾಟ
Team Udayavani, Aug 3, 2019, 3:06 AM IST
ಬೆಂಗಳೂರು: ನಗರದ ಹೊರವಲಯದಲ್ಲಿ ಬಂದುನಿಲ್ಲುವ ಸಾಮಾನ್ಯ ರೈಲ್ವೆಗಳ ಮೇಲೆ ನಡೆಯುವಂತೆಯೇ “ನಮ್ಮ ಮೆಟ್ರೋ’ ಮೇಲೂ ಈಗ ಕಲ್ಲೆಸೆತ ಆಗುತ್ತಿದ್ದು, ಈಗಾಗಲೇ ಇದರಿಂದ ಎರಡು ಮೆಟ್ರೋ ರೈಲುಗಳು ಜಖಂಗೊಂಡಿವೆ. ಇದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ನಿದ್ದೆಗೆಡಿಸಿದೆ.
ಸುರಂಗದಿಂದ ಎತ್ತರಿಸಿದ ಮಾರ್ಗ ಪ್ರವೇಶಿಸುವ ಜಾಗಗಳಲ್ಲಿ ಕಿಡಿಗೇಡಿಗಳು ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ಪ್ರವೇಶಿಸುವ ಮಾರ್ಗದಲ್ಲಿ ಈ ಕಲ್ಲುತೂರಾಟ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಬಿಎಂಆರ್ಸಿಎಲ್ನಿಂದ ದೂರು ಕೂಡ ದಾಖಲಾಗಿರುವುದು ತಡವಾಗಿ ಬೆಳಕಿಗೆಬಂದಿದೆ.
ಸಾಮಾನ್ಯವಾಗಿ ನಾಯಂಡಹಳ್ಳಿ, ಕೆಂಗೇರಿಯಂತಹ ರೈಲು ನಿಲ್ದಾಣಗಳಲ್ಲಿ ಈ ರೀತಿಯ ಪ್ರಕರಣಗಳು ಕಂಡುಬರುತ್ತಿದ್ದವು. ಈ ಕಲ್ಲುತೂರಾಟಕ್ಕೆ ಚಾಲಕರು ಗುರಿಯಾಗಿದ್ದೂ ಇದೆ. ಆದರೆ, ಈಗ ನಗರದ ಹೃದಯಭಾಗದಲ್ಲೇ ಪ್ರಯಾಣಿಕರಿಂದ ತುಂಬಿತುಳುಕುವ ಮೆಟ್ರೋ ರೈಲುಗಳ ಮೇಲೆ ಹೀಗೆ ಕಲ್ಲುತೂರಾಟದ ಪ್ರಕರಣಗಳು ದಾಖಲಾಗುತ್ತಿರುವುದು ಈ ಉಪಟಳದ ತೀವ್ರತೆಯನ್ನು ಸೂಚಿಸುತ್ತದೆ. ದೂರು ನೀಡಿದ ನಂತರ ಕೆಲ ದಿನಗಳು ಈ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಶುರುವಾಗಿದೆ. ಇದು ದೊಡ್ಡ ತಲೆನೋವಾಗಿದೆ.
ರೈಲು ಸಂಚಾರಕ್ಕೆ ಈಗ ಕಿಡಿಗೇಡಿಗಳಿಂದ ಕಲ್ಲು ತೂರಾಟಗಾರರ ಕಾಟ ಎದುರಾಗಿದೆ. ಸಂಪಿಗೆ ರಸ್ತೆ ಮತ್ತು ಕೆಂಪೇಗೌಡ ಮಾರ್ಗದ ನಡುವೆ ಮೆಟ್ರೊ ರೈಲು ಸಂಚರಿಸುವ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪ್ರಯಾಣಿಕರ ಬೋಗಿಗಳ ಎರಡು ಗಾಜುಗಳು ಜಖಂಗೊಂಡಿದ್ದವು. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಕೂಡ ಶ್ರೀರಾಂಪುರ ಬಳಿ ಕಿಡಿಗೇಡಿಗಳು ಮೆಟ್ರೊ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆ ವೇಳೆ ಕೂಡ ರೈಲ್ವೆ ಗಾಜುಗಳಿಗೆ ಹಾನಿಯುಂಟಾಗಿತ್ತು. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಂಪುರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಲ್ಲುತೂರಾಟ ಕಡಿಮೆಯಾಗಿತ್ತು. ಇದೀಗ ಮತ್ತೆ ಹೆಚ್ಚಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಮೆಟ್ರೊ ರೈಲಿನತ್ತ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂಬುವುದು ತಿಳಿದಿಲ್ಲ. ಶ್ರೀರಾಂಪುರ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು: ಈ ಹಿಂದೆ ಮೆಟ್ರೊ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ಗಂಭೀರವಾಗಿ ತೆಗೆದು ಕೊಂಡಿದ್ದ ಶ್ರೀರಾಮಂಪುರ ಪೊಲೀಸರು ಸಂಪಿಗೆ ರಸ್ತೆ ಮತ್ತು ಕೆಂಪೇಗೌಡ ಮಾರ್ಗದ ನಡುವೆ ಸಂಚರಿಸುವ ಮೆಟ್ರೊ ರೈಲಿನ ಮೇಲೆ ತೀವ್ರ ನಿಗಾವಹಿಸಿದ್ದರು. ಸಂಜೆ ಮತ್ತು ರಾತ್ರಿಯ ವರೆಗೂ ಗಸ್ತು ತಿರುಗಿ ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಹಲವು ದಿನಗಳ ಕಾಲ ಪೊಲೀಸರು ಗಸ್ತು ತಿರುಗುತ್ತಿದ್ದ ಹಿನ್ನೆಲೆಯಲ್ಲಿ ಎಚ್ಚರಗೊಂಡಿದ್ದ ಕಿಡಿಗೇಡಿಗಳು ಮೆಟ್ರೊ ರೈಲಿನತ್ತ ಕಲ್ಲು ತೂರಾಟ ನಡೆಸುವುದನ್ನು ನಿಲ್ಲಿಸಿದ್ದರು.
ಶ್ರೀರಾಂಪುರದಲ್ಲಿ ಮಾತ್ರ ಇಂತಹ ಘಟನೆ: ನಗರದ ನಾಲ್ಕೂ (ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ವರೆಗೆ, ನಾಗಸಂದ್ರದಿಂದ ಯಲಚೇನಹಳ್ಳಿ ವರೆಗೆ ) ದಿಕ್ಕುಗಳಲ್ಲಿ ಮೆಟ್ರೊ ರೈಲು ಸಂಚರಿಸುತ್ತಿದೆ. ಆದರೆ ಎಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿಲ್ಲ. ಕೇವಲ ಶ್ರೀರಾಂಪುರ ಭಾಗದಲ್ಲಿ ಮಾತ್ರ ಮೆಟ್ರೊ ರೈಲಿನ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ. ಹೀಗಾಗಿ, ಈ ಬಗ್ಗೆ ನಿಗಾವಹಿಸುವ ಅಗತ್ಯವಿದೆ ಎಂದು ಮೆಟ್ರೊ ರೈಲು ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತೆಗೆ ಆದ್ಯತೆ: ಮುಂಜಾನೆಯಿಂದ ರಾತ್ರಿವರೆಗೂ ಹಲವು ಸಂಖ್ಯೆಯಲ್ಲಿ ಮೆಟ್ರೋದಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಾರೆ. ಆದರೆ ಕಲ್ಲು ತೂರಾಟದಂತಹ ಘಟನೆಗಳು ಆಗಾಗ್ಗೆ ಮರುಕಳಿಸುವುದರಿಂದ ಪ್ರಯಾಣಿಕರು ಕೂಡ ಆತಂಕಗೊಳ್ಳುತ್ತಾರೆ. ಪ್ರಯಾಣಿಕರಿಗೆ ಸುರಕ್ಷತೆ ನೀಡುವುದು ಮೆಟ್ರೊ ರೈಲ್ವೆಯ ಮೊದಲ ಆದ್ಯತೆಯಾಗಿದೆ. ಆ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಶ್ರೀರಾಂಪುರ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮೆಟ್ರೊ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಆ ಹಿನ್ನೆಲೆಯಲ್ಲಿ ಮೆಟ್ರೊ ರೈಲಿನ ಎರಡು ಗಾಜುಗಳಿಗೆ ಹಾನಿ ಉಂಟಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸರಿಗೆ ದೂರು ನೀಡಲಾಗಿದೆ.
-ಯಶವಂತ್ ಚವಾಣ್, ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ