ಎಸ್ಡಿಪಿ ಅನುದಾನ ಬಳಕೆಗೆ ಮುಂದಿನ ಮೂರು ವರ್ಷದ ಪ್ಲಾನ್ ಕೊಡಿ- ಸಚಿವ ನಾರಾಯಣಗೌಡ
Team Udayavani, Feb 16, 2021, 5:05 PM IST
ಬೆಂಗಳೂರು : ಇಚ್ಚಾಶಕ್ತಿ ಕೊರತೆಯಿಂದ ಎಷ್ಟು ಕೋಟಿ ಅನುದಾನ ನೀಡಿದ್ದರೂ ಅಭಿವೃದ್ಧಿ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ ಎನ್ನುವುದಕ್ಕೆ ವಿಶೇಷ ಅಭಿವೃದ್ಧಿ ಯೋಜನೆ ಉತ್ತಮ ಉದಾಹರಣೆ. ಕಳೆದ ಹನ್ನೆರಡು ವರ್ಷಗಳಲ್ಲಿ 37,124.35 ಕೋಟಿ ರೂ. ಅನುದಾನ ನೀಡಿದರೂ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಿಲ್ಲ. ನಂಜುಂಡಪ್ಪ ವರದಿಯಂತೆ ಅನುದಾನವೂ ಹಂಚಿಕೆಯಾಗಿಲ್ಲ. ಹೀಗಾಗಿ 12 ವರ್ಷಗಳಲ್ಲಿ ಹಿಂದುಳಿದ ತಾಲೂಕುಗಳು ಅದೇ ಸ್ಥಿತಿಯಲ್ಲೇ ಇವೆ. ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಗಮನಕ್ಕೆ ಬಂದಿದೆ.
ಹನ್ನೆರಡು ವರ್ಷಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ವಿಕಾಸ ಸೌಧದಲ್ಲಿ ಸಚಿವರ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ. ಇದುವರೆಗೆ ಕೇವಲ ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಸಭೆ ನಡೆದಿತ್ತು. ನಂಜುಂಡಪ್ಪ ವರದಿ ಪ್ರಕಾರ ಶಿಕ್ಷಣ, ಆರೋಗ್ಯ, ಉದ್ದಿಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಆದರೆ ಈ ವಲಯಗಳಿಗೆ ಸರಿಯಾದ ರೀತಿಯಲ್ಲಿ ಅನುದಾನ ಹಂಚಿಕೆಯೇ ಆಗಿಲ್ಲ. ಡಾ. ನಂಜುಂಡಪ್ಪ ವರದಿಯಂತೆ ರಾಜ್ಯದ 176 ತಾಲೂಕುಗಳ ಪೈಕಿ 114 ತಾಲೂಕು ಹಿಂದುಳಿದಿವೆ. 2018 ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನೀಡಿದ ವರದಿಪ್ರಕಾರ 12 ವರ್ಷ ಕಳೆದರೂ ಇನ್ನೂ 96 ತಾಲೂಕುಗಳು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲೇ ಇವೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಕಿಅಂಶಗಳನ್ನ ಗಮನಸಿದ ಸಚಿವರು ಸಾವಿರಾರು ಕೋಟಿ ರೂಪಾಯಿ ಅನುದಾನ ಬಳಸಿದರೂ ಯಾವುದೇ ರೀತಿಯ ಅಭಿವೃದ್ಧಿ ಆಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ತಾಲೂಕುಗಳ ಶಾಲೆ, ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಲೈಬ್ರರಿ, ಶೌಚಾಲಯ, ತರಗತಿ ಕೊಠಡಿ, ಲ್ಯಾಬ್, ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯೇ ಹೆಚ್ಚಾಗಿದೆ.
ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ: ಧೋನಿ ದಾಖಲೆ ಸರಿಗಟ್ಟಿದ ವಿರಾಟ್
2007-08 ರಿಂದ ಇದುವರೆಗೆ 37,124.35 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅದರಲ್ಲಿ 27,346.32 ಕೋಟಿ ಅನುದಾನ ಬಳಕೆಯಾಗಿದೆ. ಆದಾಗ್ಯೂ ಹಿಂದುಳಿದ ತಾಲೂಕುಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಮೌಲ್ಯಮಾಪನ ಪ್ರಾಧಿಕಾರದ ಪ್ರಕಾರ ಬೆಂಗಳೂರು ವಿಭಾಗದಲ್ಲಿ 8 ತಾಲೂಕುಗಳು, ಬೆಳಗಾವಿ ವಿಭಾಗದ 3, ಕಲಬುರ್ಗಿ ವಿಭಾಗದ 18 ತಾಲೂಕುಗಳು ಸೇರಿದಂತೆ ಒಟ್ಟು 29 ತಾಲೂಕುಗಳು ಅತ್ಯಂತ ಹಿಂದುಳಿದಿವೆ. 24 ತಾಲೂಕುಗಳು ಅತಿ ಹಿಂದುಳಿದಿದ್ದು, 43 ತಾಲೂಕುಗಳು ಹಿಂದುಳಿದಿವೆ.
ಆದ್ಯತಾ ವಲಯಕ್ಕೆ ಮರೀಚಿಕೆಯಾದ ಅನುದಾನ :
ಶಿಕ್ಷಣಕ್ಕೆ – 5%
ಆರೋಗ್ಯ- 5%
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- 1.6%
ಕೃಷಿ- 6.05%
ಉದ್ಯಮ- 0.89%
ಡಾ. ನಂಜುಂಡಪ್ಪ ವರದಿಯಂತೆ ಆದ್ಯತಾ ವಲಯಕ್ಕೆ ಹೆಚ್ಚಿನ ಅನುದಾನ ಬಳಕೆಯಾಗಬೇಕಿತ್ತು. ಆದ್ರೆ ಸೂಕ್ತ ನಿಯಮಾವಳಿ ಇಲ್ಲದ ಕಾರಣ ಅನುದಾನ ಮರೀಚಿಕೆಯಾಗಿದೆ. ಆದ್ಯತೆ ಮೇರೆಗೆ ಹಂಚಿಕೆಯಾದ ಅನುದಾನದ ಶೇ. 50 ರಷ್ಟಾದರೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಈ ಐದು ಪ್ರಮುಖ ವಿಭಾಗಕ್ಕೆ ಬಳಸಬೇಕಾಗಿತ್ತು. ಆದರೆ ಅನುದಾನ ಬಳಕೆಗೆ ಸ್ಪಷ್ಟ ನಿಯಮ ಇಲ್ಲದ ಕಾರಣ ಪ್ರಮುಖ ಐದು ವಿಭಾಗಕ್ಕೆ ಬಳಕೆ ಆಗಲೆ ಇಲ್ಲ. 2007-08 ರಿಂದ ಮುಂದಿನ 8 ವರ್ಷದಲ್ಲಿ ಪ್ರವಾಸೋಧ್ಯಮಕ್ಕೆ 2 ಸಾವಿರ ಕೋಟಿ ರೂ. ಶಿಫಾರಸ್ಸು ಮಾಡಲಾಗಿತ್ತು 599 ಕೋಟಿ ರೂ. ಮಾತ್ರ ಅನುದಾನ ಹಂಚಿಕೆಯಾಗಿದೆ. ಕೊಳಚೆ ನಿರ್ಮೂಲನೆ, ಉತ್ತರ ಕರ್ನಾಟಕಕ್ಕೆ ನಗರ ನೀರು ಸರಬರಾಜು ಬೋರ್ಡ್ ಸ್ಥಾಪನೆಗೆ 3 ಸಾವಿರ ಕೋಟಿ ರೂ. ಶಿಫಾರಸ್ಸಾಗಿತ್ತು. ಆದರೆ ಅನುದಾನವೇ ಹಂಚಿಕೆಯಾಗಿಲ್ಲ. ಕ್ರೀಡೆಗೆ 25 ಕೋಟಿ ರೂ. ನೀಡುವಂತೆ ವರದಿ ಶಿಫಾರಸ್ಸು ಮಾಡಿದ್ದು ಕಡತದಲ್ಲೇ ಉಳಿದಿದೆ.
ವಸತಿ, ಜಲಸಂಪನ್ಮೂಲ, ಸಣ್ಣ ನೀರಾವರಿಗೆ ಹೆಚ್ಚಿನ ಅನುದಾನ :
ಹಿಂದುಳಿದ ತಾಲೂಕುಗಳಲ್ಲಿ ವಸತಿ, ಗ್ರಾಮೀಣ ಗೃಹ ನಿರ್ಮಾಣ, ಜಲಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯಡಿ ಹೆಚ್ಚಿನ ಅನುದಾನ ಬಳಕೆಯಾಗಿದೆ. ಈ ಇಲಾಖೆಗಳಡಿ 11 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಬಳಕೆಯಾಗಿದೆ.
ಪ್ರತಿಯೊಂದು ಇಲಾಖೆಗೆ ಒದಗಿಸುವ ಅನುದಾನದಲ್ಲೇ ಎಸ್ ಡಿ ಪಿ ಗೆ ಅನುದಾನದ ನಿಗದಿಪಡಿಸಲಾಗುತ್ತಿದೆ. ಇದರಿಂದಾಗಿ ಎಲ್ಲ ತಾಲೂಕುಗಳ ಅಭಿವೃದ್ಧಿಗೆ ಅನುದಾನ ಬಳಸಿದಂತೆ ಇಲ್ಲೂ ಬಳಸಿದ್ದು ಬಿಟ್ಟರೆ ವಿಶೇಷ ಅನುದಾನದ ಸಮರ್ಪಕ ಬಳಕೆ ಆಗಲೇ ಇಲ್ಲ. 2007-08 ರಿಂದ ಮುಂದಿನ 8 ವರ್ಷಗಳ ವರೆಗೆ ಸಾಮಾನ್ಯ ಕಾರ್ಯಕ್ರಮಗಳಿಂದ 15 ಸಾವಿರ ಕೋಟಿ ರೂ. ಹಾಗೂ ಹೆಚ್ಚುವರಿಯಾಗಿ 16 ಸಾವಿರ ಕೋಟಿ ರೂ. ಹಣವನ್ನ ವಿಶೇಷ ಅಭಿವೃದ್ಧಿ ಯೋಜನೆ ಮೂಲಕ ಬಳಕೆ ಮಾಡಬೇಕು ಎಂಬ ಗುರಿ ಹೊಂದಲಾಗಿತ್ತು.
ಇದನ್ನೂ ಓದಿ : ಬೆಂಗಳೂರಿನ ದಿಶಾ ರವಿ ಬಂಧನ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಮೂರು ವರ್ಷದ ಪ್ಲಾನ್ ಸಿದ್ದಮಾಡಿ :
ಇನ್ನು ಮುಂದೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಹಂಚಿಕೆಯಾಗುವ ಅನುದಾನದ ಬಳಕೆಗೆ ಸ್ಪಷ್ಟ ನಿಯಮ ರೂಪಿಸಲು ಸಚಿವರು ಸೂಚಿಸಿದ್ದಾರೆ. ಅಲ್ಲದೆ ಮುಂದಿನ ಮೂರು ವರ್ಷಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉದ್ಯಮ ವಲಯ ಸೇರಿದಂತೆ ಹಿಂದುಳಿದ ತಾಲೂಕುಗಳಲ್ಲಿ ಏನೇನು ಕೆಲಸ ಆಗಬೇಕು, ಬೇಕಾಗುವ ಅನುದಾನವೆಷ್ಟು ಎನ್ನುವುದರ ಕ್ರಿಯಾಯೋಜನೆ ಸಿದ್ದಪಡಿಸಿ ನೀಡುವಂತೆ ಸಚಿವರು ಸೂಚಿಸಿದ್ದಾರೆ.
ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಣ್ಣನೀರಾವರಿ, ಉನ್ನತ ಶಿಕ್ಷಣ, ಇಂಧನ ಇಲಾಖೆ, ತೋಟಗಾರಿಕೆ ಸೇರಿಂದತೆ ಎಲ್ಲ 17 ಇಲಾಖೆಗಳ ಅಧಿಕಾರಿಗಳ ಜೊತೆ ವಿಶೇಷ ಅಭಿವೃದ್ಧಿ ಯೋಜನೆಯ ಸಂಬಂಧ ಸಚಿವರು ಸಭೆ ನಡೆಸಿದರು. ಎಸ್ಡಿಪಿ ಅಡಿಯಲ್ಲಿ ಹಂಚಿಕೆ ಆಗುವ ಅನುದಾನ ಸರಿಯಾಗಿ ಬಳಕೆಯಾಗಬೇಕು. ಸಾಮಾನ್ಯ ಅನುದಾನದಲ್ಲಿ ಈ ಅನುದಾನವನ್ನು ಸೇರಿಸುವಂತಿಲ್ಲ ಹಾಗೂ ಪ್ರತಿ ಇಲಾಖೆಗೆ ಹಂಚಿಕೆಯಾಗಿರುವ ಅನುದಾನ ಅಲ್ಲಿಯೇ ಸಮರ್ಪಕವಾಗಿ ವೆಚ್ಚವಾಗಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಎಲ್ಲ ಇಲಾಖೆ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!