ನಗರದಲ್ಲಿ ಹೆಚ್ಚಾದ ಹಾವುಗಳ ಹಾವಳಿ
Team Udayavani, Jun 13, 2019, 3:09 AM IST
ಬೆಂಗಳೂರು: “ಮತ್ತೆ ಬಂತು ಮಳೆಗಾಲ ಜತೆಗೆ ಕ್ರಿಮಿ-ಕೀಟ, ವಿಷಜಂತುಗಳೂ ಬಂತು ಎಂಬಂತಾಗಿದೆ ರಾಜಧಾನಿ ಸ್ಥಿತಿ. ಮನೆ ಮುಂದಿನ ಕೈತೋಟ, ನಿಲ್ಲಿಸಿರುವ ಬೈಕ್, ಕಾರು, ಚಪ್ಪಲಿ ಸ್ಟಾಂಡ್, ಶೂ, ವಾಷಿಂಗ್ ಮಷೀನ್, ಕೊನೆಗೆ ಶೌಚಾಲಯದ ಟಬ್ಗಳಲ್ಲೂ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಭಯ ಸೃಷ್ಟಿಸಿವೆ.
ಕಳೆದ ಬಾರಿಗೆ ಹೋಲಿಸಿದರೆ ಮಳೆಗಾಲಕ್ಕೂ ಮೊದಲೇ ಹಾವು ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. 15 ದಿನಗಳಿಂದ ನಗರದ ವಿವಿಧೆಡೆಯಿಂದ ಬಿಬಿಎಂಪಿ ಸಹಾಯವಾಣಿಗೆ ಹಾವುಗಳು ಕಾಣಿಸಿಕೊಂಡಿರುವ ಕುರಿತು ನಿತ್ಯ 50ರಿಂದ 60 ಕರೆಗಳು ಬರುತ್ತಿದ್ದು, ಅರಣ್ಯ ಘಟಕದ ವನ್ಯಜೀವಿ ಸಂರಕ್ಷರ ತಂಡ ದಿನಕ್ಕೆ 15 ರಿಂದ 20 ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಗಳಿಗೆ ಬಿಟ್ಟುಬರುತ್ತಿದ್ದಾರೆ.
ಸಾಮಾನ್ಯ ದಿನಕ್ಕೆ ಹೋಲಿಸಿದರೆ ಐದುಪಟ್ಟು ಹೆಚ್ಚು ಕರೆಗಳು ಬರುತ್ತಿವೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. ಮಳೆಗಾಲದಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಹಜ. ಬೇಸಿಗೆ ಸಂದರ್ಭದಲ್ಲಿ ಹುತ್ತ ಹಾಗೂ ಬಿಲಗಳಿಂದ ಹೊರ ಬೀಳುವ ಹಾವುಗಳು ತಂಪಾದ ವಾತಾವರಣ ಇರುವ ಕಡೆ ಹೋಗುತ್ತವೆ. ಹಾಗೇ, ಮಳೆಗಾಲದಲ್ಲಿ ಬೆಚ್ಚನೆಯ ಸ್ಥಳ, ನೀರು ಆಹಾರದ ಮೂಲಗಳನ್ನು ಹುಡುಕುತ್ತವೆ.
ಬೆಂಗಳೂರಿನಲ್ಲಿ ಎರಡು ವಾರಗಳಲ್ಲಿ ಐದಾರು ದಿನ ಭಾರೀ ಮಳೆಯಾಗಿದ್ದು, ಮಳೆ ನೀರಿನಿಂದ ರಾಜಕಾಲುವೆ, ಮೋರಿ, ಒಳಚರಂಡಿಗಳು ತುಂಬಿವೆ. ಹೀಗಾಗಿ, ಅವುಗಳಲ್ಲಿ ವಾಸಿಸುತ್ತಿದ್ದ, ಹಾವುಗಳು ಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಅದರಲ್ಲೂ ವೈಟ್ಟಾಪಿಂಗ್, ಟೆಂಡರ್ ಶ್ಯೂರ್ ಕಾಮಗಾರಿಗಳಿಂದ ಕಾಂಕ್ರೀಟ್ ರಸ್ತೆಗಳು ಹೆಚ್ಚಾಗಿದ್ದು, ಕುಡಿಯುವ ನೀರು, ಆಹಾರ ಸಿಗದೆ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾವುಗಳು ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದು ವನಪಾಲಕರ ಅಭಿಪ್ರಾಯ.
ಎಲ್ಲೆಲ್ಲಿ ಹಾವು ಪತ್ತೆ?: ನಗರದ ಬ್ಯಾಟರಾಯನಪುರ, ಜೆ.ಪಿ.ನಗರ, ನಾಗರಬಾವಿ, ರಾಜರಾಜೇಶ್ವರಿನಗರ, ವೈಟ್ಫಿಲ್ಡ್, ಹಲಸೂರು, ಹೆಬ್ಟಾಳ, ಎಲೆಕ್ಟ್ರಾನಿಕ್ ಸಿಟಿ ಭಾಗಗಳಿಂದ ಹೆಚ್ಚು ಹಾವು ಕಾಣಿಸಿಕೊಂಡ ಕುರಿತು ಕರೆ ಬರುತ್ತಿವೆ. ಇದರ ಜತೆಗೆ ನಗರದ ಇತರ ಪ್ರದೇಶಗಳಲ್ಲೂ ಹಾವುಗಳು ಕಾಣಿಸಿಕೊಂಡ ಬಗ್ಗೆ ಮಾಹಿತಿಯಿದೆ. ನಾಗರಹಾವುಗಳೇ ಹೆಚ್ಚು ಪತ್ತೆಯಾಗಿದ್ದು, ಉಳಿದಂತೆ ಕೊಳಕಮಂಡಲ, ಹುರಿ ಮಂಡಲ, ಕೆರೆ/ನೀರಾವು ಹೆಚ್ಚಾಗಿವೆ. ಕಳೆದ ತಿಂಗಳು ನ್ಯಾಯಾಂಗ ಬಡವಣೆಯಲ್ಲಿ ವಿಶೇಷವಾಗಿ ಬಿಳಿ ನಾಗರಹಾವು ಕಾಣಿಸಿಕೊಂಡಿತ್ತು.
ಹಿಡಿದ ಹಾವುಗಳನ್ನು ಬೆಂಗಳೂರು ಸುತ್ತಲ ಅರಣ್ಯ ಪ್ರದೇಶಗಳಿಗೆ ಬಿಟ್ಟುಬರುತ್ತೇವೆ. ಹಾವು ಹಿಡಿದಾಗ ಹಾವಿಗೆ ಗಾಯವಾಗಿದ್ದರೆ ಚಿಕಿತ್ಸೆ ನೀಡಿ ಆ ನಂತರ ಅರಣ್ಯಕ್ಕೆ ಬಿಡಲಾಗುತ್ತದೆ. ಇನ್ನು ಮಳೆಗಾಲ ಹಾವುಗಳ ಸಂತಾನೋತ್ಪತ್ತಿಗೆ ಸೂಕ್ತ ಕಾಲವಾಗಿದ್ದು, ಜೂನ್ ತಿಂಗಳಲ್ಲಿ ಬೆಚ್ಚನೆಯ ಪ್ರದೇಶ ಹುಡುಕಿ ಮೊಟ್ಟೆ ಇಡುತ್ತವೆ. ಹಾವು ಪತ್ತೆ ಪ್ರಕರಣದಲ್ಲಿ ಮರಿಗಳ ಸಂಖ್ಯೆಯೇ ಹೆಚ್ಚಿದೆ. ಹಾವಿನ ಮರಿಗಳಿಗೆ ಓಡಾಟ ಮಾರ್ಗದ ಅರಿವಿಲ್ಲದೇ, ಇದ್ದ ಜಾಗದಿಂದ ಆಹಾರದ ಹುಡುಕುತ್ತಾ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ವನಪಾಲಕ ಪ್ರಸನ್ನ.
ಮರಿಗಳೆಂದು ಅಸಡ್ಡೆ ಬೇಡ: ಮನೆ ಹಾಗೂ ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾವಿನ ಮರಿಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಚಿಕ್ಕ ಮರಿಯಲ್ಲವೇ ಎಂದು ಜನ ಅವುಗಳನ್ನು ಹಿಡಿಯಲು ಹೋಗುತ್ತಾರೆ. ಆದರೆ, ಮರಿಗಳು ಕೂಡ ಪ್ರೌಢ ಹಾವಿನಷ್ಟೇ ವಿಷಕಾರುತ್ತವೆ. ಚಿಕ್ಕ ಮರಿಯಲ್ಲಿಯೂ 5 ಜನರನ್ನು ಸಾವಿಗೀಡು ಮಾಡಬಲ್ಲಷ್ಟು ವಿಷ ಇರುತ್ತದೆ. ಹೀಗಾಗಿ, ಹಾವಿನ ಮರಿ ಎಂದು ಹಿಡಿಯಲು ಹೋಗಿ ಅನಾಹುತ ಮಾಡಿಕೊಳ್ಳದಂತೆ ಪ್ರಸನ್ನ ಕಿವಿಮಾತು ಹೇಳಿದರು.
ಹಾವು ಬಾರದಿರಲು ಏನು ಮಾಡಬೇಕು?: ಹಾವಿನ ಆಹಾರವಾದ ಇಲಿ, ಕಪ್ಪೆಗಳು ಮನೆಯ ಸುತ್ತಮುತ್ತ ಇರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮನೆಯ ಸುತ್ತ ಸ್ವಚ್ಛತೆಗೆ ಗಮನ ಹರಿಸಬೇಕು. ಮನೆಯಿಂದ ಸಂಪರ್ಕ ಪಡೆದಿರುವ ತ್ಯಾಜ್ಯ ಪೈಪುಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ, ಮನೆ ಸಮೀಪ ಒಳಚರಂಡಿ, ರಾಜಕಾಲುವೆ ಇದ್ದರೆ ಮನೆ ಕಿಟಕಿ, ವೆಂಟಿಲೇಟರ್ಗಳಿಗೂ ಜಾಲರಿ ಅಳವಡಿಸಬೇಕು.
ಹಾವು ಕಚ್ಚಿದರೆ ಏನು ಮಾಡಬೇಕು?: ಕಚ್ಚಿದ ಕೂಡಲೇ ಯಾವುದೇ ಮನೆ ಔಷಧ ಮಾಡದೇ, ಹಾವು ಕಚ್ಚಿದ ಜಾಗವನ್ನು ಸೊಂಕು ನಿವಾರಕ ಹಾಗೂ ನೀರಿನಿಂದ ತೊಳೆಯಬೇಕು. ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಒತ್ತಡಕ್ಕೆ ಒಳಗಾಗದಂತೆ, ದೇಹದ ರಕ್ತ ಪರಿಚಲನೆ ಹೆಚ್ಚಾಗದಂತೆ, ನಿದ್ರೆಗೆ ಜಾರದಂತೆ ನಿಗಾವಹಿಸಿ ಶೀಘ್ರವೇ ಆಸ್ಪತ್ರೆಗೆ ಕರೆದೊಯ್ಯಬೇಕು.
9 ವನಪಾಲಕರಿಗೆ 3 ವರ್ಷದಿಂದ ಗೌರವಧನವಿಲ್ಲ: ಹಾವು ಕಾಣಿಸಿಕೊಂಡ ಬಗ್ಗೆ ಬಿಬಿಎಂಪಿ ಸಹಾಯವಾಣಿಗೆ ಸಾಕಷ್ಟು ದೂರು ಬರುತ್ತಿವೆ. ಆದರೆ, ಎಲ್ಲಾ ಪ್ರಕರಣಗಳಲ್ಲೂ ಸ್ಥಳಕ್ಕೆ ತೆರಳಲು ವನಪಾಲಕರಿಗೆ ಆಗುತ್ತಿಲ್ಲ. ಕಾರಣ 198 ವಾರ್ಡ್ಗಳ ಬಿಬಿಎಂಪಿ ಅರಣ್ಯ ಘಟಕದ ವನ್ಯಜೀವಿ ಸಂರಕ್ಷಣಾ ವಿಭಾಗದಲ್ಲಿರುವುದು ಕೇವಲ 9 ಸಿಬ್ಬಂದಿ ಮಾತ್ರ. ಇವರೆಲ್ಲರೂ ಗುತ್ತಿಗೆ ನೌಕರರಾಗಿದ್ದು, ಗೌರವಧನ ಪಡೆಯುತ್ತಾರೆ. ಆದರೆ ಮೂರು ವರ್ಷಗಳಿಂದ ಇವರಿಗೆ ಗೌರವಧನವನ್ನೇ ನೀಡಿಲ್ಲ!. ಅರಣ್ಯ ಘಟಕದಲ್ಲಿ ಸಿಬ್ಬಂದಿಗೆ ಗೌರವಧನವೂ ಇಲ್ಲ, ಸೂಕ್ತ ಸಲಕರಣೆಗಳೂ ಇಲ್ಲ. ವನ್ಯಜೀವಿಗಳ ಮೇಲೆ ನಮಗಿರುವ ಕಾಳಜಿಯಿಂದಷ್ಟೇ ಕೆಲಸ ಮಾಡುತ್ತಿದ್ದೇವೆ ಎಂದು ಹೆಸರು ಹೇಳಲಿಚ್ಚಿಸದ ವನಪಾಲಕರೊಬ್ಬರು ತಿಳಿಸಿದರು.
ನಕಲಿ ವನಪಾಲಕರ ಹಾವಳಿ: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಗರದಲ್ಲಿ ನಕಲಿ ಪರವಾನಗಿ ಪತ್ರ ಸೃಷ್ಟಿಸಿ ಹಾವು ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ. ಹಾವು ಹಿಡಿಯುವವರು ತರಬೇತಿ ಪಡೆದು ಪ್ರಧಾನಮುಖ್ಯ ವನ್ಯ ಸಂರಕ್ಷಣಾಧಿಕಾರಿಯಿಂದ ಪರವಾನಗಿ ಪತ್ರ ಪಡೆಯಬೇಕು. ಆದರೆ, ಕೆಲವರು ನಕಲಿ ಪರವಾಗಿ ಪತ್ರ ತೋರಿಸಿ ಹಾವು ಹಿಡಿದು ಕಳ್ಳಸಾಗಣೆ ಮಾಡುತ್ತಿದ್ದಾರೆ. ವಾಮಾಚಾರ-ಮೌಡ್ಯ ಚಟುವಟಿಕೆಗಳಿಗೆ ಹಾಗೂ ಹೊರ ರಾಜ್ಯ, ವಿದೇಶಗಳಲ್ಲಿ ಹಾವುಗಳಿಗೆ ಬೇಡಿಕೆ ಹೆಚ್ಚಿದ್ದು, ಈ ನಕಲಿ ವನ್ಯಪಾಲಕರು ನಗರದಲ್ಲಿ ಹಾವು ಹಿಡಿದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಸಾರ್ವಜನಿಕರು ಅಸಲಿ ಪರವಾನಗಿ ಪತ್ರ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ