ಆನೆ ಚದುರಿಸಲು ಮೊಳೆ, ಬೆಂಕಿಯುಂಡೆ ಬಳಕೆ: ವರದಿ ಸಲ್ಲಿಸಿದ ರಾಜ್ಯ
Team Udayavani, Aug 21, 2018, 7:50 AM IST
ನವದೆಹಲಿ: ಆನೆಗಳನ್ನು ಬೆದರಿಸಿ ಓಡಿಸಲು ಮೊಳೆಗಳು ಮತ್ತು ಬೆಂಕಿ ಉಂಡೆಗಳನ್ನು ಬಳಸುವುದನ್ನು ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ಸುಪ್ರೀಂಕೋರ್ಟ್ಗೆ ಕರ್ನಾಟಕ ಸರ್ಕಾರ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಆನೆಗಳನ್ನು ಓಡಿಸುವುದಕ್ಕಾಗಿ ಮೊಳೆಗಳು ಹಾಗೂ ಬೆಂಕಿ ಉಂಡೆಗಳನ್ನು ಬಳಸುವುದು ಘೋರ ಕೃತ್ಯವಾಗಿದ್ದು, ಇಂತಹ ಕ್ರಮಗಳನ್ನು ರಾಜ್ಯ ಸರ್ಕಾರ ತಡೆಯಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
ಕರ್ನಾಟಕ, ಪ.ಬಂಗಾಳ, ಜಾರ್ಖಂಡ್ ಹಾಗೂ ಒಡಿಶಾದಂತಹ ರಾಜ್ಯಗಳಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂಬ ದೂರಿನ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೆ ರಾಜ್ಯಗಳು ಈ ಸಂಬಂಧ ವಿವರ ನೀಡುವಂತೆಯೂ ಸೂಚಿಸಿತ್ತು.ಮೊಳೆಗಳ ಬಳಕೆ ಸಂಪೂರ್ಣ ಸ್ಥಗಿತಗೊಳಿಸಲು ಇನ್ನೂ ಆರು ತಿಂಗಳು ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರ ವರದಿ ನೀಡಿದ್ದು, ಆದಷ್ಟು ಶೀಘ್ರ ಈ ಸಮಸ್ಯೆಯನ್ನು ನಿವಾರಿಸಬೇಕು.
ಆರು ತಿಂಗಳ ಕಾಲಾವಧಿ ಹೆಚ್ಚಾಯಿತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇನ್ನೊಂದೆಡೆ ಇತರ ರಾಜ್ಯಗಳು ತಕ್ಷಣದಿಂದಲೇ ಈ ಕ್ರಮವನ್ನು ಕೈಬಿಡಲಾಗುತ್ತದೆ ಎಂದು ವರದಿ ನೀಡಿವೆ.