116 ದಿನಗಳ ಬಳಿಕ ನಲಪಾಡ್ ಬಿಡುಗಡೆ
Team Udayavani, Jun 15, 2018, 6:15 AM IST
ಬೆಂಗಳೂರು:ಉದ್ಯಮಿ ಪುತ್ರ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಆರೋಪ ಪ್ರಕರಣದಲ್ಲಿ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ಗೆ ಗುರುವಾರ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಹೀಗಾಗಿ ಪ್ರಕರಣ ಸಂಬಂಧ ಕಳೆದ 116 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಲಪಾಡ್ಗೆ ಬಿಡುಗಡೆ ಭಾಗ್ಯ ದೊರೆತಿದೆ.
ಜಾಮೀನು ಕೋರಿ ಎರಡನೇ ಬಾರಿ ಹೈಕೋರ್ಟ್ ಮೊರೆಹೋಗಿದ್ದ ನಲಪಾಡ್ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ಗುರುವಾರ ಷರತ್ತುಬದ್ಧ ಜಾಮೀನು ನೀಡಿ ತೀರ್ಪು ನೀಡಿದೆ.
ಎರಡು ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ, ವಿಚಾರಣೆಗೆ ಕೋರ್ಟ್ ಸಮನ್ಸ್ ಮಾಡಿದಾಗ ಹಾಜರಾಗಬೇಕು. ಪ್ರಕರಣದ ಸಾಕ್ಷ್ಯ ನಾಶ ಪಡಿಸಬಾರದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಆಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಬಾರದು. ಅಧೀನ ನ್ಯಾಯಾಲಯದ ಅನುಮತಿಯಿಲ್ಲದೆ ನಗರ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತುಗಳನ್ನು ನಲಪಾಡ್ಗೆ ನ್ಯಾಯಪೀಠ ವಿಧಿಸಿದೆ. ಮೊಹಮದ್ ನಲಪಾಡ್ ಪರವಾಗಿ ಹಿರಿಯ ವಕೀಲ ಬಿ.ವಿ ಆಚಾರ್ಯ ಹಾಗೂ ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಅಭಿಯೋಜಕರಾಗಿ ಶ್ಯಾಮ್ಸುಂದರ್ ವಾದಿಸಿದ್ದರು.