ನ್ಯಾಯಾಂಗದ ಮುಂದೆ ಹೊಸ ಸವಾಲುಗಳು
Team Udayavani, Jan 13, 2020, 3:07 AM IST
ಬೆಂಗಳೂರು: ಇಂಟರ್ನೆಟ್, ಧ್ವನಿ ವರ್ಧಕಗಳ ಬಳಕೆಯಂಥ ಹೊಸ ವ್ಯಾಖ್ಯೆಗಳನ್ನು ಸಂವಿಧಾನ ಕೊಡಮಾಡಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ’ದ ಭಾಗವಾಗಿ ಪರಿಗಣಿಸಬಹುದೇ ಎಂಬುದನ್ನು ನಿರ್ಧರಿಸಬೇಕಾದ ಹೊಸ ಸವಾಲುಗಳು ನ್ಯಾಯಾಂಗದ ಮುಂದಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಎ.ಎಸ್.ಬೋಬ್ಡೆ ಅಭಿಪ್ರಾಯಪಟ್ಟರು. ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ಜಿಕೆವಿಕೆ ಡಾ. ಬಾಬುರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 19ನೇ ದೈವಾರ್ಷಿಕ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
“ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕಕ್ಕೆ ನಿರ್ಬಂಧ ಹೇರಿದ್ದರ ವಿಚಾರವಾಗಿ ನಾವು (ಸುಪ್ರೀಂಕೋರ್ಟ್) ಇಂಟರ್ನೆಟ್ ಬಳಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಹೇಳಿದ್ದೇವೆ. ಇಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಉದಾಹರಣೆಗೆ ಧ್ವನಿವರ್ಧಕ ಬಳಸಿ ಮದುವೆ ಮಂಟಪಗಳಲ್ಲಿ ಜೋರು ಧ್ವನಿಯಲ್ಲಿ ಮ್ಯೂಸಿಕ್ ಕೇಳುವುದು, ಮಂದಿರ, ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸಲಾಗುತ್ತದೆ. ಹಾಗಾಗಿ, ಧ್ವನಿ ವರ್ಧ ಕಗಳ ಬಳಕೆಯನ್ನು ಸಂವಿಧಾನ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸಬಹುದೇ ಎಂಬ ಬಗ್ಗೆ ನಿರ್ಧರಿಸಬೇಕಾಗಿದೆ ಎಂದರು.
ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಇಲ್ಲದ ವಿಶೇಷತೆ ನ್ಯಾಯಾಂಗ ಮತ್ತು ನ್ಯಾಯಾಧೀಶರಿಗಿದೆ. ಶಾಸಕಾಂಗ ಕಾನೂನು ರಚಿಸಿದರೆ, ಕಾರ್ಯಾಂಗ ನಿಯಮಗಳನ್ನು ರೂಪಿಸುತ್ತದೆ. ಆದರೆ, ನ್ಯಾಯಾಧೀಶರು ಸಂದರ್ಭ-ಸನ್ನಿವೇಶಗಳಿಗೆ ಅನುಗುಣವಾಗಿ ಕಾನೂನಿನಡಿ ತೀರ್ಪು ನೀಡಿ ನ್ಯಾಯ ಒದಗಿಸುತ್ತಾರೆ. ಅಕ್ಷರ ರೂಪದಲ್ಲಿರುವ ಸಂವಿಧಾನದ ತತ್ವಗಳನ್ನು ವಾಸ್ತವ ರೂಪಕ್ಕೆ ತರುವ ಜವಾಬ್ದಾರಿಯನ್ನು ನ್ಯಾಯಾಧೀಶರು ನಿರ್ವಹಿಸುತ್ತಾರೆ. ತಮ್ಮ ಈ ವೈಶಿಷ್ಟéತೆಯನ್ನು ನ್ಯಾಯಾಧೀಶರು ಮನಗಾಣಬೇಕು ಎಂದು ನ್ಯಾ.ಬೋಬ್ಡೆ ಕಿವಿಮಾತು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾ. ಎ.ಎಸ್.ಓಕಾ ಮಾತನಾಡಿ, ಅನುದಾನದ ಮೂಲಕ ಸಾರ್ವಜನಿಕರ ತೆರಿಗೆ ಹಣ ಪಡೆಯುತ್ತಿರುವ ನಾವುಗಳು (ಜಡ್ಜ್) ಜನರ ಮುಂದೆ ಉತ್ತರದಾಯಿಗಳು ಎಂಬುದನ್ನು ಮರೆಯಬಾರದು. ಇನ್ನೂ ಮುಂದೆ ಅಧೀನ ನ್ಯಾಯಾಲಯ, ಕೆಳಹಂತದ ನ್ಯಾಯಾಲಯಗಳ ಬದಲು ವಿಚಾರಣಾ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಎಂದು ಸಂಬೋಧಿಸುವಂತೆ ಸೂಚನೆ ಜಾರಿಗೊಳಿಸಲಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನ್ಯಾಯಾಂಗದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ. ನ್ಯಾಯಾಂಗ ಅಧಿಕಾರಿಗಳ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸಲಾಗುವುದು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ನೆರವು ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ನೀಡಿದ ನೆರವನ್ನು ಸರ್ಕಾರ ಮರೆಯುವಂತಿಲ್ಲ ಎಂದರು.
ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ್, ಅಬ್ದುಲ್ ನಜೀರ್, ಎ.ಎಸ್.ಬೋಪಣ್ಣ ಮಾತನಾಡಿದರು. ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಪ್ರಧಾನ ಕಾರ್ಯದರ್ಶಿ ಎ.ಸೋಮಶೇಖರ್ ಮತ್ತಿತರರಿದ್ದರು.
“ಭೂದೇವಿಯ ಮುಕುಟದ ನವಮಣಿ’: ಸಿಜೆಐ: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ “ಭೂದೇವಿಯ ಮುಕುಟದ ನವಮಣಿಯೆ’ ಸಾಲನ್ನು ಕನ್ನಡದಲ್ಲಿ ಓದಿದ ಸಿಜೆಐ ನ್ಯಾ.ಬೋಬ್ಡೆ, “ಬೆಂಗಳೂರನ್ನು ನಾನು “ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಎಂದಷ್ಟೇ ಕರೆಯಲು ಬಯಸುವುದಿಲ್ಲ. ಏಕೆಂದರೆ, ಈ ನಾಡು ಬಹಳ ಪುರಾತನ ನಾಗರಿಕತೆ ಹೊಂದಿದ್ದು, ಇದು ಭಾರತೀಯ ಸಂಸ್ಕೃತಿಯ ಪ್ರಧಾನ ಕೇಂದ್ರ. ಕರ್ನಾಟಕ ಅನೇಕ ಖ್ಯಾತನಾಮ ಹಾಗೂ ಪ್ರತಿಭಾವಂತ ನ್ಯಾಯಾಧೀಶರನ್ನು ದೇಶಕ್ಕೆ ನೀಡಿದೆ. ಕಾನೂನು ಪಂಡಿತರನ್ನು ಕೊಟ್ಟಿದೆ. ಸಿವಿಲ್ ನ್ಯಾಯದ ಹಲವು ಮಹತ್ವದ ತೀರ್ಪುಗಳು ಕರ್ನಾಟಕದಿಂದ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿಯೇ ಅವರು ಭಾಷಣ ಮಾಡಿದ್ದು ಗಮನ ಸೆಳೆಯಿತು.
ವ್ಯಾಜ್ಯಗಳನ್ನು ಮಧ್ಯಸ್ಥಿಕೆ, ರಾಜಿ-ಸಂಧಾನಗಳ ಮೂಲಕ ಇತ್ಯರ್ಥಪಡಿಸುವ ಅವಕಾಶ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕೆಲವೊಮ್ಮೆ ಬಳಸಿದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಅಯೋಧ್ಯೆ ವಿವಾದದಲ್ಲಿ ಅದರ ಅನುಭವ ಕಂಡಿದ್ದೇವೆ. ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಯಬಹುದು ಎಂದು ಭಾವಿಸಲಾಗಿತ್ತು. ಆದರೆ, ಅದು ಆಗಲಿಲ್ಲ. ಮಧ್ಯಸ್ಥಿಕೆ, ರಾಜಿ-ಸಂಧಾನ ಕಾಲದ ಬೇಡಿಕೆ ಆಗಿದೆ.
-ನ್ಯಾ.ಎ.ಎಸ್.ಬೋಬ್ಡೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ