ಹಲವು ರೋಗ ಪತ್ತೆಗೆ ಅಂಗೈ ಲ್ಯಾಬ್
Team Udayavani, Dec 2, 2018, 6:00 AM IST
ಬೆಂಗಳೂರು: ಎಚ್1ಎನ್1, ಡೆಂಗ್ಯೂಯಂತಹ ಸಾಂಕ್ರಾಮಿಕ ರೋಗಗಳನ್ನು ಶೀಘ್ರ ಪತ್ತೆ ಮಾಡುವ ಉಪಕರಣಗಳನ್ನು ಬೆಂಗಳೂರಿನ ಸ್ಟಾರ್ಟ್ಆಪ್ ಅಭಿವೃದ್ಧಿಪಡಿಸಿದ್ದು, ಇದರಿಂದ ದಿನಗಟ್ಟಲೆ ಎಚ್1ಎನ್1 ಮತ್ತಿತರ ರೋಗಗಳ ಪತ್ತೆ ಫಲಿತಾಂಶಕ್ಕಾಗಿ ಕಾಯುವುದು ತಪ್ಪಲಿದೆ.
ರಾಜ್ಯದಲ್ಲಿ ಎಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕಾಯಿಲೆ ಪತ್ತೆಗೆ ಬೆಂಗಳೂರು ಹಾಗೂ ಮಣಿಪಾಲದಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳಿವೆ. ಇತರೆ ಜಿಲ್ಲೆಗಳ ರೋಗಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಈ ಎರಡೇ ಕೇಂದ್ರಗಳಿಗೆ ತರಬೇಕಾದ ಅನಿವಾರ್ಯತೆಯಿದೆ. ಪರೀಕ್ಷೆಯ ವರದಿ ರೋಗಿ ಕೈಸೇರಲು ವಾರವಾಗುತ್ತಿದೆ. ಎಚ್1ಎನ್1 ಕಾಯಿಲೆ ದೃಢೀಕರಣ ವರದಿ ಕೈಸೇರುವ ವರೆಗೆ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಾಯಿಲೆ ತೀವ್ರಗೊಂದು ಕೆಲವೊಮ್ಮೆ ಅಸುನೀಗುವ ಸಾಧ್ಯೆತೆಯಿರುತ್ತದೆ. ಇನ್ನು ಕೆಲವು ಪ್ರರಣಗಳಲ್ಲಿ ರೋಗಿ ಸಾವನ್ನಪ್ಪಿದ ಬಳಿಕ ಎಚ್1ಎನ್1 ದೃಢಪಟ್ಟಿರುವ ವರದಿಗಳು ಬಂದಿರುವ ಉದಾಹರಣೆಗಳು ಇವೆ.
ಅದಕ್ಕೆ ಪರಿಹಾರವೆಂಬಂತೆ ಕೆಲವೇ ಗಂಟೆಗಳಲ್ಲಿ ಎಚ್1ಎನ್1, ಡೆಂ à, ಮಲೇರಿಯಾ ಸೇರಿದಂತೆ ಹಲವು ಕಾಯಿಲೆಗಳನ್ನು ಪತ್ತೆ ಮಾಡುವಂತಹ ಉಪಕರಣ ( ಲೋ ಕಾಸ್ಟ್ ಡಯಾಗ್ನಸಿಸ್ ಸಿಸ್ಟಮ್)ಗಳನ್ನು ಷಣ್ಮುಖ ಹೆಸರಿನ ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದೆ. ರೋಗ ಶೀಘ್ರ ಪತ್ತೆಯಾಗಿ ವರದಿ ಬರುವುದರಿಂದ ವೈದ್ಯರು ಸೂಕ್ತ ಚಿಕಿತ್ಸೆಗೆ ಮುಂದಾಗಲಿದ್ದು, ರೋಗಗಳು ಪ್ರಾಣಾಪಾಯದಿಂದ ಪಾರಾಗಲಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಕ್ಸಮ್ಮಿಟ್ನಲ್ಲಿ ಈ ವಿಷಯ ಅನಾವರಣಗೊಂಡಿದೆ.
ಗ್ರಾಮೀಣ ಭಾಗದ ಜನರು ಯಾವುದೇ ಕಾಯಿಲೆಯ ಪರೀಕ್ಷೆಗಾಗಿ ಪಟ್ಟಣ ಪ್ರದೇಶಗಳಿಗೆ ಬರಬೇಕಿದೆ. ಪಟ್ಟಣ ಭಾಗಗಳಲ್ಲಿ ವ್ಯಕ್ತಿಯ ರಕ್ತ, ಗಂಟಲು ರಸ ಹಾಗೂ ಮೂತ್ರ ಮಾದರಿಗಳನ್ನು ಪಡೆದು ಪರೀಕ್ಷೆಗಾಗಿ ತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಒಟ್ಟಾರೆಯಾಗಿ ಮಾದರಿಗಳ ಪರೀಕ್ಷೆಗಳು ಕೈ ಸೇರಲು ಎರಡು-ಮೂರು ದಿನಗಳು ಬೇಕಾಗುತ್ತದೆ. ಪರಿಣಾಮ ಕಾಯಿಲೆ ಉಲ್ಬಣಗೊಳ್ಳುವ ಆತಂಕವಿರುತ್ತದೆ.
ಆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರನ್ನು ಗುರಿಯಾಗಿಸಿಕೊಂಡು ಈ ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದು, ರೋಗಿಯ ವಿವಿಧ ಮಾದರಿಗಳನ್ನು ಪಡೆದು ಕೆಲವೇ ಗಂಟೆಗಳಲ್ಲಿ ರೋಗಿಯ ಪರೀಕ್ಷಾ ವರದಿ ನೀಡಬಹುದಾಗಿದೆ. ಇದರಿಂದಾಗಿ ಯಾವ ಕಾಯಿಲೆಯಿದೆ ಎಂಬುದು ತಿಳಿಯಲಿದ್ದು, ಅಗತ್ಯ ಚಿಕಿತ್ಸೆಗೆ ಒಳಗಾಗಬಹುದಾಗಿದೆ.
ಅಂಗೈಯಲ್ಲಿಯೇ ಲ್ಯಾಬ್
ಸಾಮಾನ್ಯವಾಗಿ ಎಲ್ಲ ರೀತಿಯ ಕಾಯಿಲೆಗಳನ್ನು ಪತ್ತೆ ಮಾಡುವ ಯಂತ್ರೋಪಕರಣಗಳನ್ನು ಹೊಂದಿರುವಂತಹ ಒಂದು ಪಾಥ್-ಲ್ಯಾಬ್ ನಿರ್ಮಾಣಕ್ಕಾಗಿ ಕೋಟ್ಯಂತರ ರೂ. ವೆಚ್ಚವಾಗುತ್ತದೆ. ಆದರೆ, ಈ ಉಪಕರಣಗಳನ್ನು ಇರಿಸಲು ಯಾವುದೇ ಕಟ್ಟಡದ ಅಗತ್ಯವಿಲ್ಲ. ಬದಲಿಗೆ ಅಂಗೈ ಲ್ಯಾಬ್ ಇದಾಗಿದ್ದು, ಈ ಉಪಕರಣಗಳನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದ್ದು, ಒಟ್ಟಾರೆ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡುವಂತಹ ಯಂತ್ರಗಳಿಗೆ ಒಟ್ಟಾರೆಯಾಗಿ 15 ರಿಂದ 20 ಲಕ್ಷ ವೆಚ್ಚವಾಗಲಿದೆ ಎಂದು ಸಂಸ್ಥೆಯ ತಂತ್ರಜ್ಞ ಕಪಿಲ್ ತಿಳಿಸಿದ್ದಾರೆ.
ಬೆಳೆಯ ಕಾಯಿಲೆ ಪತ್ತೆ ಮಾಡಬಹುದು
ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವಂತಹ ಲ್ಯಾಂಪ್ (ಲೂಪ್ ಮೀಡಿಯೇಟೆಡ್ ಐಸೋಥರ್ಮಲ್ ಆಂಪ್ಲಿಫಿಕೇಷನ್) ಉಪಕರಣದಿಂದಾಗಿ ಕೃಷಿ ಬೆಳೆಗಳಿಗೆ ತಗುಲಿದ ಕಾಯಿಲೆಗಳನ್ನು ಪತ್ತೆ ಮಾಡಬಹುದಾಗಿದೆ. ಅತ್ಯಂತ ಚಿಕ್ಕದಾದ ಈ ಉಪಕರಣದಲ್ಲಿ ಬೆಳೆಯ ಡಿಎನ್ಎ ಪರೀಕ್ಷೆ ನಡೆಸಲಿದ್ದು, ಬೆಳೆ ಉತ್ತಮವಾಗಿದೆಯೇ ಅಥವಾ ಯಾವುದಾದರೂ ಕಾಯಿಲೆ ತಗುಲಿದೆ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮಗಳನ್ನು ರೈತರು ತೆಗೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಸುಜಿತ್ ವಿಜಯನ್ ತಿಳಿಸಿದರು.
– ವೆಂ. ಸುನೀಲ್ಕುಮಾರ್