ಬಡ್ತಿ ಮೀಸಲಾತಿ: ಅಧಿವೇಶನದಲ್ಲಿ ಕಾಯ್ದೆ ರೂಪಿಸಲು ಚಿಂತನೆ
Team Udayavani, Sep 12, 2017, 6:20 AM IST
ಬೆಂಗಳೂರು: ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಎದುರಾಗಿರುಗ ಕಂಟಕ ನಿವಾರಣೆಗೆ ನವೆಂಬರ್ನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ಕಾಯ್ದೆ ರದ್ದುಪಡಿಸಿರುವ ಆದೇಶ ಪಾಲನೆಗೆ ಡಿಸೆಂಬರ್ 31 ಗುಡುವು ನೀಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಸಿಕ್ಕಂತಾಗಿದ್ದು, ಅಷ್ಟರಲ್ಲಿ ವಿಶೇಷ ಕಾಯ್ದೆ ರೂಪಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಸುಪ್ರೀಂಕೋರ್ಟ್ಗೆ ಸಲ್ಲಿಸುವ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದೆ.
ಪ್ರಸ್ತುತ ಆ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆ ರಾಜ್ಯಪಾಲರ ಬಳಿಯಿದ್ದು ಸ್ಪಷ್ಟನೆ ಕೋರಿದ್ದಾರೆ. ಮತ್ತೂಮ್ಮೆ ಸ್ಪಷ್ಟನೆ ನೀಡುವುದು. ಸರ್ಕಾರದ ಸ್ಪಷ್ಟನೆಗೆ ಸಮ್ಮತಿ ಸೂಚಿಸಿ ಒಪ್ಪಿದರೆ ಅದನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸುವುದು.
ಇಲ್ಲವಾದರೆ ನವೆಂಬರ್ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಾಯ್ದೆ ರೂಪಿಸಿ ಸಲ್ಲಿಸುವುದು. ಅಷ್ಟರ ನಂತರವೂ ಸುಪ್ರೀಂಕೋರ್ಟ್ ಒಪ್ಪದಿದ್ದರೆ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿ ಆದೇಶ ಪಾಲನೆ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಸ್ಪಷ್ಟನೆಯ ನಂತರವೂ ವಿಳಂಬ ಮಾಡಬಹುದು ಅಥವಾ ರಾಷ್ಟ್ರಪತಿಗೆ ಕಳುಹಿಸಬಹುದು. ಆದರೆ, ತಿರಸ್ಕಾರ ಮಾಡಲು ಬರುವುದಿಲ್ಲ ಎಂದು ಹೇಳಲಾಗಿದೆ.
ಗುಡುವು ಏನು?
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು 10 ಇಲಾಖೆಗಳ ಪಟ್ಟಿ ಸಿದ್ಧಪಡಿಸಿದ್ದು ಇನ್ನೂ 22 ಇಲಾಖೆಗಳ ಪಟ್ಟಿ ಸಿದ್ಧಪಡಿಸಬೇಕಿದೆ. ಇದಕ್ಕಾಗಿ 9 ತಿಂಗಳು ಕಾಲಾವಕಾಶ ಕೊಡುವಂತೆ ಕೋರಿತ್ತು. ಆದರೆ, ಫೆಬ್ರವರಿ 9 ರಂದು ಆದೇಶ ನೀಡಿ ಮೇ 31 ರೊಳಗೆ ಪಟ್ಟಿ ಸಿದ್ಧಪಡಿಸಿ ಎಂದರೂ ಯಾಕೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ 10 ಇಲಾಖೆಗಳಲ್ಲಿ ಸಿದ್ಧಪಡಿಸಿರುವ ಪಟ್ಟಿ ಅಕ್ಟೋಬರ್ 31 ಕ್ಕೆ ಬಿಡುಗಡೆ ಮಾಡಿ. ನಂತರ ಉಳಿದ 22 ಇಲಾಖೆಗಳ ಪಟ್ಟಿ ನವೆಂಬರ್ 30 ರೊಳಗೆ ಸಿದ್ಧಪಡಿಸಿ ಡಿಸೆಂಬರ್ 31 ರೊಳಿಗೆ ಜಾರಿಗೊಳಿಸಿ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಈ ಸಂಬಂಧ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆ ಮುಂದಿನ ವರ್ಷ ಜನವರಿ 15 ಕ್ಕೆ ಮುಂದೂಡಲಾಗಿದೆ. ಹೀಗಾಗಿ, ಸರ್ಕಾರ ಅಷ್ಟರೊಳಗೆ ಒಂದೋ ಆದೇಶ ಪಾಲನೆ ಮಾಡಬೇಕು, ಇಲ್ಲವೋ ಇನ್ನೊಂದು ಪ್ರಯತ್ನ ಎಂಬಂತೆ ಕಾಯ್ದೆ ರೂಪಿಸಬೇಕಿದೆ.