ಸುದೀರ್ಘ ರಜೆ ಮೇಲೆ ತೆರಳಿದ ಶಾಲಿನಿ ರಜನೀಶ್
Team Udayavani, Mar 16, 2018, 10:10 AM IST
ಬೆಂಗಳೂರು: ಎಸೆಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷಾ ಹೊತ್ತಿನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸುದೀರ್ಘ ರಜೆ ಪಡೆದಿರುವುದು ಆಡಳಿತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸಚಿವ ತನ್ವೀರ್ ಸೇಠ್ ಹಾಗೂ ಶಾಲಿನಿ ರಜನೀಶ್ ನಡುವೆ ಸಮನ್ವಯ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಸಚಿವರು ಶಾಲಿನಿ ರಜನೀಶ್ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಘಟನಾವಳಿಗಳ ಬೆನ್ನಲ್ಲೇ ಶಾಲಿನಿ ರಜನೀಶ್ ಸುದೀರ್ಘ ರಜೆ ಪಡೆದಿದ್ದಾರೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಶಾಲಿನಿ ರಜನೀಶ್ ಅವರನ್ನು ವರ್ಗಾವಣೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಚ್ಚುವರಿ ಪ್ರಭಾರ ಜವಾಬ್ದಾರಿ ವಹಿಸಬೇಕು ಎಂದು ಕೋರಿ ಫೆ.24ರಂದು ತನ್ವೀರ್ ಸೇಠ್ ಅವರು, ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಆದರೆ ಅದರ ಬಗ್ಗೆ ಸರಕಾರ ಈವರೆಗೆ ಕ್ರಮ ಕೈಗೊಂಡಿಲ್ಲ.
ಶಾಲಿನಿ ರಜನೀಶ್ ಅವರು ಇಲಾಖೆಗೆ ನಿಯೋಜನೆಗೊಂಡಾಗಿನಿಂದಲೂ ಆಡಳಿತಾತ್ಮಕ ವಿಚಾರದಲ್ಲಿ ಸಚಿವರ ನಡುವೆ ಸಮನ್ವಯದ ಕೊರತೆ ಇತ್ತು. ಇದು ಅಧಿಕಾರಿಗಳ ಸಭೆಯಲ್ಲೂ ಆಗಾಗ್ಗೆ ಕಂಡುಬಂದಿತ್ತು. ಶಿಕ್ಷಕರ ವರ್ಗಾವಣೆಯಲ್ಲೂ ಇದು ಬಹಿರಂಗವಾಗಿತ್ತು.