ಅನುದಾನ ಬಡ್ಡಿಸಹಿತ ವಾಪಸ್ ಕೇಳಿದ ಕೇಂದ್ರ
Team Udayavani, Mar 12, 2019, 6:36 AM IST
ಬೆಂಗಳೂರು: ಕೊಟ್ಟ ಅನುದಾನ ಬಳಸಿಕೊಳ್ಳದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಬಡ್ಡಿಸಹಿತ ಹಣ ಹಿಂಪಾವತಿಸುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಸಂಬಂಧ “ಫೇಮ್ ಇಂಡಿಯಾ’ ಯೋಜನೆ ರೂಪಿಸಲಾಗಿತ್ತು.
ಇದರಡಿ ವಿವಿಧ ರಾಜ್ಯಗಳ ಮಹಾನಗರ ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ರೂಪದಲ್ಲಿ ಅನುದಾನ ನೀಡಲಾಗಿತ್ತು. ಇದೇ ಮಾರ್ಚ್ 31ಕ್ಕೆ ಆ ಯೋಜನೆ ಅವಧಿ ಪೂರ್ಣಗೊಳ್ಳುತ್ತಿದೆ. ಆದರೆ, ಬಿಎಂಟಿಸಿ ಇದುವರೆಗೆ ಹಣ ಬಳಸಿಲ್ಲ. ಆದ್ದರಿಂದ ಅದನ್ನು ಬಡ್ಡಿಸಹಿತ ವಾಪಸ್ ನೀಡುವಂತೆ ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವಾಲಯವು ರಾಜ್ಯ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಗಳ ನಿರ್ದೇಶಕರ ಮೂಲಕ ಬಿಎಂಟಿಸಿಗೆ ಸೂಚನೆ ನೀಡಿದೆ.
ಫೇಮ್ ಇಂಡಿಯಾ ಯೋಜನೆ ಅಡಿ 80 ಬಸ್ಗಳನ್ನು ರಸ್ತೆಗಿಳಿಸಲು ಕೇಂದ್ರವು ಬಸ್ಗಳ ಪೂರೈಕೆಗೆ 14.95 ಕೋಟಿ ಹಾಗೂ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಪೂರಕ ಸೌಲಭ್ಯಗಳನ್ನು ಕಲ್ಪಿಸಲು 3.73 ಕೋಟಿ ಒಳಗೊಂಡಂತೆ ಒಟ್ಟಾರೆ ಸುಮಾರು 18.68 ಕೋಟಿ ರೂ. ನೀಡಿತ್ತು. ಈವರೆಗೆ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಬೇಕೇ ಅಥವಾ ಗುತ್ತಿಗೆ ರೂಪದಲ್ಲಿ ಪಡೆದು ಸೇವೆ ಕಲ್ಪಿಸಬೇಕೇ ಎನ್ನುವುದೇ ಅಂತಿಮವಾಗಿಲ್ಲ.
ಇದರಿಂದ ರಾಜ್ಯದಲ್ಲಿ ಯೋಜನೆ ಕಗ್ಗಂಟಾಗಿದೆ. ಇದರ ಮಧ್ಯೆ ಎಲೆಕ್ಟ್ರಿಕ್ ಬಸ್ ಸೇವೆಗಳಿಂದ ಜನ ವಂಚಿತರಾಗುತ್ತಿದ್ದಾರೆ. ಮತ್ತೂಂದೆಡೆ ಯೋಜನೆ ಅವಧಿಯೂ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಣ ಹಿಂಪಾವತಿಗೆ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿಂದೆಯೇ ಅಂದರೆ 2018ರ ಡಿಸೆಂಬರ್ನಲ್ಲಿ ಮುಂದಿನ ಮೂರು ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳಿಸಿ, ಅನುದಾನವನ್ನು ವಿನಿಯೋಗಿಸಬೇಕು. ಇಲ್ಲವಾದರೆ ಹಣ ಹಿಂಪಾವತಿಸಬೇಕು ಎಂದು ಸಚಿವಾಲಯ ಹೇಳಿತ್ತು. ಆದರೆ, ಈವರೆಗೆ ಬಿಎಂಟಿಸಿಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಈ ಮಧ್ಯೆ “ಎಲೆಕ್ಟ್ರಿಕ್ ಬಸ್ ಖರೀದಿ ಯೋಜನೆ’ ವಿವಾದದ ಕೇಂದ್ರಬಿಂದು ಆಗಿದೆ. ಮೊದಲು 60 ಎಸಿ (12 ಮೀ. ಉದ್ದ) ಹಾಗೂ 20 ನಾನ್ಎಸಿ (9 ಮೀ. ಉದ್ದ) ಸೇರಿದಂತೆ 80 ಬಸ್ಗಳ ಖರೀದಿಗೆ ಬಿಎಂಟಿಸಿ ಈ ಹಿಂದೆ ಟೆಂಡರ್ ಕರೆದಿತ್ತು. ಅತ್ಯಂತ ಕಡಿಮೆ ದರದಲ್ಲಿ ಬಸ್ಗಳ ಪೂರೈಕೆಗೆ ಮುಂದೆ ಬಂದ ಗೋಲ್ಡ್ಸ್ಟೋನ್ ಕಂಪನಿಗೆ ಕಾರ್ಯಾದೇಶ ನೀಡಲು ಉದ್ದೇಶಿಸಲಾಗಿತ್ತು.
ಅಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದೇ ಮಾದರಿಯಲ್ಲಿ ಮತ್ತೆ 500 ಬಸ್ಗಳ ಟೆಂಡರ್ಗೆ ಸಿದ್ಧತೆ ಕೂಡ ನಡೆಸಿತ್ತು. ಆದರೆ, ತದನಂತರದಲ್ಲಿ ಸರ್ಕಾರ ಬದಲಾಯಿತು. ಅದರೊಂದಿಗೆ ಈ ವಿಚಾರದಲ್ಲಿ ಅಭಿಪ್ರಾಯಗಳೂ ಬದಲಾದವು. “ಖರೀದಿಯೇ ಸೂಕ್ತ’ ಎಂಬ ಒತ್ತಾಯ ಕೇಳಿಬಂದಿತು. ಈ ಸಂಬಂಧದ ಮುಸುಕಿನ ಗುದ್ದಾಟದಲ್ಲಿ ಯೋಜನೆ ತಟಸ್ಥವಾಯಿತು.
ಈಗಾಗಲೇ ಹೈದರಾಬಾದ್, ಅಹಮದಾಬಾದ್, ಮುಂಬೈ ಎಲೆಕ್ಟ್ರಿಕ್ ಬಸ್ಗಳ ಖರೀದಿ ಅಥವಾ ಗುತ್ತಿಗೆಯಲ್ಲಿ ಸಾಕಷ್ಟು ಮುಂದೆಹೋಗಿವೆ. ಕೆಲವೆಡೆ ಈಗಾಗಲೇ ಬಸ್ಗಳು ರಸ್ತೆಗೂ ಇಳಿದಿವೆ. ಆದರೆ, ಬೆಂಗಳೂರಿಗೆ ಈ ವಿಚಾರದಲ್ಲಿ ಹಿನ್ನಡೆ ಆಗಿದೆ. ವಿಚಿತ್ರವೆಂದರೆ ಇಡೀ ದೇಶದಲ್ಲಿ ಎಲೆಕ್ಟ್ರಿಕ್ ಬಸ್ ಆರಂಭಿಸುವ ಪ್ರಕ್ರಿಯೆಗೆ ಅಂದು ಮುನ್ನುಡಿ ಬರೆದಿದ್ದೇ ಬಿಎಂಟಿಸಿ. ಈಗ ಅದೇ ಸಂಸ್ಥೆ ಎಲ್ಲಕ್ಕಿಂತ ಹಿಂದೆ ಉಳಿದಿದೆ.
ನಿರ್ಧಾರ ಬದಲಾವಣೆ – ಅನುಮಾನ: ಎಲೆಕ್ಟ್ರಿಕ್ ಬಸ್ಗಳನ್ನು ಈ ಹಿಂದೆ ಗುತ್ತಿಗೆ ಪದ್ಧತಿಯಲ್ಲಿ ಪಡೆದು, ಕಾರ್ಯಾಚರಣೆ ಮಾಡುವುದಾಗಿ ಬಿಎಂಟಿಸಿ ಹೇಳಿತ್ತು. ಇದಕ್ಕೆ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಆಕ್ಷೇಪಿಸಿದಾಗ, ಈ ವಿನೂತನ ಮಾದರಿಯಿಂದ ಆಗುವ ಲಾಭಗಳ ಬಗ್ಗೆ ಬಿಎಂಟಿಸಿ ಮನದಟ್ಟು ಮಾಡಿಕೊಟ್ಟಿತ್ತು. ಬಸ್ ಖರೀದಿಯು ನಗರ ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಲಿದೆ.
ಈಗಾಗಲೇ ಸಂಸ್ಥೆಯು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅಂತಹದ್ದರಲ್ಲಿ ನೂರಾರು ಕೋಟಿ ರೂ. ಹೂಡಿಕೆ ಮಾಡುವುದು ಕಷ್ಟಸಾಧ್ಯ. ಹಾಗೊಂದು ವೇಳೆ, ಇಷ್ಟೊಂದು ಹಣ ಹೂಡಿಕೆ ಮಾಡಿ ಖರೀದಿಸಿದರೂ, ಮುಂದಿನ ದಿನಗಳಲ್ಲಿ ಈ ಮಾದರಿ ಬಸ್ಗಳು ಅಪ್ರಸ್ತುತವಾಗಬಹುದು. ಗುತ್ತಿಗೆ ಆಧಾರದಲ್ಲಿ ಇಂತಹ ಯಾವುದೇ “ರಿಸ್ಕ್’ ಇರುವುದಿಲ್ಲ. ನಿರ್ವಹಣಾ ವೆಚ್ಚವೂ ಬರುವುದಿಲ್ಲ.
ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ಖರೀದಿ ಮಾಡುವ ಬಸ್ಗಳ ಆಯಸ್ಸು ಇರುವುದೇ 9ರಿಂದ 10 ವರ್ಷ. ನಂತರ ಅವು ಗುಜರಿಗೇ ಸೇರುತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಗುತ್ತಿಗೆ ಮಾದರಿ ಅನುಸರಿಸುವುದು ಸೂಕ್ತ ಎಂಬ ವಾದವನ್ನು ಕೇಂದ್ರದ ಮುಂದಿಟ್ಟಿತ್ತು. ಇದಕ್ಕೆ ಅನುಮತಿಯೂ ದೊರಕಿತ್ತು.
ಆದರೆ, ನಂತರದಲ್ಲಿ ಏಕಾಏಕಿ ತನ್ನ ನಿಲುವು ಬದಲಿಸಿತು. “ಪ್ರಸ್ತುತ ಎಲೆಕ್ಟ್ರಿಕ್ ಬಸ್ಗಳನ್ನು ಲೀಸ್ನಲ್ಲಿ ತೆಗೆದುಕೊಂಡು ಸೇವೆ ಒದಗಿಸಲು ಟೆಂಡರ್ ಕರೆಯಲಾಗಿದೆ. ಆದರೆ, ಕೇವಲ ಒಂದೇ ಕಂಪನಿಗೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಅಲ್ಲದೆ, ಇನ್ನೂ ಕಡಿಮೆ ದರದಲ್ಲಿ ಸೇವೆ ಸಿಗುವ ಸಾಧ್ಯತೆ ಇದೆ’ ಎಂದು ಮರುಪರಿಶೀಲನೆಗೊಳಪಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ