ಆರೋಗ್ಯ ಇಲಾಖೆ ಶ್ಲಾಘಿಸಿದ ಸಿಎಂ
Team Udayavani, Jan 29, 2018, 6:20 AM IST
ಬೆಂಗಳೂರು: ಪಲ್ಸ್ ಪೋಲಿಯೋ ಹನಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಯಶಸ್ವಿಯಾಗಿ ನಡೆಸಿಕೊಂಡು
ಬಂದಿರುವುದರಿಂದಲೇ ನಮ್ಮ ರಾಜ್ಯ ಪೋಲಿಯೋ ಮುಕ್ತ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಇಲಾಖೆಯನ್ನು ಕೊಂಡಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಪಲ್ಸ್ ಪೋಲಿಯೋ ಹನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕವನ್ನು ಪೋಲಿಯೋ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ಮಕ್ಕಳು ಪೋಲಿಯೋದಿಂದ ಮುಕ್ತ ಆಗಬೇಕಾದರೆ ವರ್ಷದಲ್ಲಿ ಎರಡು ಬಾರಿ
ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ಪೋಲಿಯೋ ಲಸಿಕೆ ಆಂದೋಲನ ನಡೆಸುತ್ತಿದ್ದು, ಇದಕ್ಕಾಗಿ 32,437 ಕೇಂದ್ರಗಳನ್ನು ಸ್ಥಾಪಿಸಿದೆ. ಜತೆಗೆ 51,972 ತಂಡಗಳನ್ನು ರಚಿಸಿದ್ದು, 103944 ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಇದಲ್ಲದೆ, 65,546 ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದು, 941 ಸಂಚಾರಿ ತಂಡಗಳೂ ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರಿಸಿದರು.
ಒಂದರಿಂದ ಐದು ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಬೇಕು ಎಂಬುದು ನಮ್ಮ ಉದ್ದೇಶ. ಲಸಿಕೆ ಹಾಕಿಸುವುದರಿಂದ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಮಾ.11ರಂದು ಎರಡನೇ ಸುತ್ತಿನ ಕಾರ್ಯಕ್ರಮ ನಡೆಯಲಿದೆ. ಪಕ್ಕದ ರಾಜ್ಯ, ರಾಷ್ಟ್ರಗಳೂ ಪೋಲಿಯೋ ಮುಕ್ತ ಆಗಬೇಕು. ಇಲ್ಲದಿದ್ದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯ ಏಳು ವರ್ಷದಿಂದ ಪೋಲಿಯೋ ಮುಕ್ತವಾಗಿದ್ದರೂ ಲಸಿಕೆ ಹಾಕುವ ಕಾರ್ಯಕ್ರಮ ಸ್ಥಗಿತಗೊಳಿಸಿಲ್ಲ ಎಂದರು.