Theft of gold jewellery: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಚಿನ್ನಾಭರಣ ಕಳವು
Team Udayavani, Jan 6, 2024, 11:39 AM IST
ಬೆಂಗಳೂರು: ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವಾಗಿದೆ.
ಸಾಫ್ಟ್ ವೇರ್ ಎಂಜಿನಿಯರ್ ಕಿಶೋರ್ ಎಂಬುವವರ ಪತ್ನಿ ಡಿ.25ರಂದು ಚಿಕಿತ್ಸೆಗಾಗಿ ಸರ್ಜಾಪುರ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡಿ.27ರಂದು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯುವಾಗ ಚಿನ್ನಾಭರಣಗಳು ಮೈಮೇಲಿದ್ದವು. ಆದರೆ, ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಹೊರಬಂದಾಗ ಚಿನ್ನದ ಮಾಂಗಲ್ಯ ಸರ, ಚಿನ್ನದ ಸರ ಸೇರಿ 72 ಗ್ರಾಂ ಚಿನ್ನಾಭರಣ ಮೈ ಮೇಲೆ ಇರಲಿಲ್ಲ. ಇದೀಗ ಕಿಶೋರ್ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿದೇಶದಿಂದ 1.29 ಕೋಟಿ ರೂ. ಚಿನ್ನ ಅಕ್ರಮ ಸಾಗಾಟ; 12 ಮಂದಿ ಬಂಧನ:
ಬೆಂಗಳೂರು: ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ 12 ಪ್ರಯಾಣಿ ಕರಲ್ಲಿ ದಾಖಲೆ ಇಲ್ಲದ 1.29 ಕೋಟಿ ರೂ. ನ ಚಿನ್ನಾಭರಣ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿ ಗಳು ಇವರನ್ನು ಬಂಧಿಸಿ 2 ಕೆ.ಜಿ. 86 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ಜ.4ರಂದು ಮಸ್ಕಟ್ ಮತ್ತು ಮದೀನಾದಿಂದ ಕೆಐಎಬಿಗೆ ಬಂದಿದ್ದ 11 ಮಹಿಳೆಯರು ಹಾಗೂ ಓರ್ವ ಪುರುಷನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅಕ್ರಮ ವಾಗಿ ಚಿನ್ನ ಸಾಗಾಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.