ವರದಕ್ಷಿಣೆ ರೂಪದಲ್ಲಿ 15 ಲಕ್ಷ ರೂ. ನೀಡದಿದ್ದರೆ ಫಸ್ಟ್ನೈಟ್ ಕ್ಯಾನ್ಸಲ್ ಎಂದ ಪತಿ.!
ಪತಿ, ಕುಟುಂಬಸ್ಥರ ವಿರುದ್ಧ ಬಿತ್ತು ಎಫ್ಐಆರ್
Team Udayavani, Jan 6, 2024, 11:46 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ವರದಕ್ಷಿಣೆ ರೂಪದಲ್ಲಿ 15 ಲಕ್ಷ ರೂ. ನೀಡದಿದ್ದರೆ ಫಸ್ಟ್ನೈಟ್ ಕ್ಯಾನ್ಸಲ್ ಎಂದ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವಿವಾಹಿತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೋಣನಕುಂಟೆ ನಿವಾಸಿ 27 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ಅವಿನಾಶ್ ವರ್ಮಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅವಿನಾಶ್ ಎಂಜಿನಿಯರ್ ಆಗಿದ್ದು, 2022 ಜೂ.6ನಲ್ಲಿ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದರು. ವಿವಾಹದ ವೇಳೆ ಆರೋಪಿಗಳು ವರದಕ್ಷಿಣೆ ಬೇಡ ಎಂದಿದ್ದರು. ಮಹಿಳೆ ವಿವಾಹವಾಗಿ ಪತಿ ಮನೆಗೆ ಹೋದ ದಿನವೇ ಆತನ ತಂದೆ ನಿನ್ನ ತವರು ಮನೆಯವರು ನನಗೆ 15 ಲಕ್ಷ ರೂ. ನೀಡುವುದಾಗಿ ಹೇಳಿದ್ದರು. ಅದನ್ನು ನೀಡಲಿಲ್ಲವೆಂದರೆ ನಾನು ಮೊದಲನೇ ರಾತ್ರಿ ಆಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಮಹಿಳೆ ಈ ವಿಚಾರವನ್ನು ಪಾಲಕರಿಗೆ ತಿಳಿಸಿದ್ದರು. ದುಡ್ಡು ಕೊಡಲು ಮಹಿಳೆಯ ಪಾಲಕರು ಆರೋಪಿಗಳ ಬಳಿ ಕಾಲಾವಕಾಶ ಕೇಳಿದ್ದರು. 2022 ಜೂ.22ರಂದು ದೂರುದಾರ ಮಹಿಳೆಯ ಪಾಲಕರು 5.8 ಲಕ್ಷ ರೂ. ನೀಡಿದ್ದರು ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಸ್ನಾನ ಮಾಡುವಾಗ ಇಣುಕಿ ನೋಡುತ್ತಿದ್ದರು: ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಉಳಿದ 10 ಲಕ್ಷ ರೂ. ನೀಡದಿದ್ದರೆ ಮನೆಯಲ್ಲಿರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಸ್ನಾನ ಮಾಡುವಾಗ ಪತಿ ತಂದೆ ಇಣುಕಿ ನೋಡುತ್ತಿದ್ದರು. ಮಹಿಳೆ ಈ ಬಗ್ಗೆ ಮಾವನನ್ನು ಪ್ರಶ್ನಿಸಿದಾಗ, “ಯಾರಿಗಾದರೂ ಹೇಳಿದರೆ ನಿನ್ನನ್ನು ಮನೆಯಿಂದ ಆಚೆ ಹಾಕುವುದಾಗಿ ಬೆದರಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿದ್ದಾರೆ.
ದಾಖಲೆ ನೀಡಲು ದುಡ್ಡಿಗೆ ಬೇಡಿಕೆ: ಸಂತ್ರಸ್ತೆ ಮತ್ತೆ ಪಾಲಕರ ಬಳಿ ಹೋಗಿ ಗೋಳು ತೋಡಿಕೊಂಡಿದ್ದರು. ಇತ್ತ ಪಾಲಕರು ಮಗಳ ಪತಿಯ ಮನೆಯವರ ಬಳಿ ಈ ಬಗ್ಗೆ ವಿಚಾರಿಸಿದಾಗ, “ನಿಮ್ಮ ಮಗಳು ನಮ್ಮ ಮನೆಗೆ ಮಾರಾಟವಾಗಿದ್ದಾಳೆ. ನಾವು ಹೇಳಿದಂತೆ ಕೇಳಬೇಕು. ಇಲ್ಲವಾದಲ್ಲಿ ಈಗಲೆ 15 ಲಕ್ಷ ರೂ. ಹಣ ನೀಡಬೇಕು ಎಂದು ಹೇಳಿದ್ದರು. ಇದಾದ ನಂತರ ಮಹಿಳೆ ತವರು ಮನೆಗೆ ಬಂದಿದ್ದರು. ನನಗೆ ಸಂಬಂಧಿಸಿದ ಕೆಲವು ದಾಖಲಾತಿಗಳು ಆರೋಪಿಗಳ ಬಳಿ ಇದ್ದು, ಈ ಬಗ್ಗೆ ಕೇಳಿದರೆ ಹಣ ನೀಡಿ ದಾಖಲಾತಿಗಳನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.