ಎರಡು ಕೋಟಿ ಜನರ ತಲುಪಿದೆ ನಮ್ಮ ಕಾರ್ಯಕ್ರಮ
Team Udayavani, May 11, 2017, 11:21 AM IST
ಸಿಎಂ ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಬಿಂಬಿಸಿಕೊಂಡಿರುವ ನಾಲ್ಕು ವರ್ಷದಲ್ಲಿ ಹಲವಾರು ಬಾರಿ ಸಂಪುಟ ವಿಸ್ತರಣೆ ಹಾಗೂ ಒಮ್ಮೆ ಪುನಾರಚನೆಯಾದರೂ ಸಚಿವಗಿರಿಯಿಂದ ವಂಚಿತರಾಗದ, ಖಾತೆಯಲ್ಲೂ ಬದಲಾವಣೆಯಾಗದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಜತೆ ಮಾತುಕತೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ನಾಲ್ಕು ವರ್ಷದ ಸಾಧನೆ ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಅತಿ ಹೆಚ್ಚು ಒತ್ತು ನೀಡಿ ಎಸ್ಸಿಪಿ, ಟಿಎಸ್ಪಿ ಸೇರಿ 86,728 ಕೋಟಿ ರೂ. ಅನುದಾನ ನೀಡಿದೆ. ಇಷ್ಟು ದೊಡ್ಡ ಮೊತ್ತ ರಾಜ್ಯದ ಇತಿಹಾಸದಲ್ಲಿ ಎಂದೂ ಕೊಟ್ಟಿಲ್ಲ. ಮುಂದಿನ ವರ್ಷದ್ದೂ ಸೇರಿದರೆ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗೂ ಮೇಲ್ಪಟ್ಟು ಅನುದಾನ ಲಭಿಸಿದಂತಾಗುತ್ತದೆ. ಇದೇ ನಮ್ಮ ಸಾಧನೆ.
ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದೆಯೇ?
ಶೇ.80 ಕ್ಕೂ ಹೆಚ್ಚು ಬಳಕೆಯಾಗಿದೆ. ಒಂದೊಮ್ಮೆ ಬಳಕೆಯಾಗದಿದ್ದರೆ ಮುಂದಿನ ವರ್ಷಕ್ಕೆ ಕ್ಯಾರಿ ಫಾರ್ವಡ್ ಆಗುತ್ತದೆ. ಹೀಗಾಗಿ, ಅನುದಾನ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಸೇರಿ ಬಹುತೇಕ ಯೋಜನೆಗಳಲ್ಲಿ ಟೆಂಡರ್ ಬಿಟ್ಟು ಬೇರೇನೂ ನಡೆದಿಲ್ಲ. ಅರ್ಧದಷ್ಟು ಹಣ ಬಳಕೆಯಾಗಿಲ್ಲ ಎಂಬ ಆರೋಪ ಇದೆಯಲ್ಲಾ?
ಪ್ರತಿಪಕ್ಷಗಳು ರಾಜಕೀಯ ಕಾರಣಕ್ಕಾಗಿ ಆರೋಪ ಮಾಡಬಹುದು. ಆದರೆ, ಅಂಕಿ-ಅಂಶಗಳೇ ನಮ್ಮ ಸಾಧನೆ ಹೇಳುತ್ತವೆ.
ಇಲಾಖೆ ಸಚಿವರಾಗಿ ನಿಮ್ಮ ಪ್ರಕಾರ ವೈಫಲ್ಯಗಳೇನು?
ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪುವಲ್ಲಿ ಕೆಲವೆಡೆ ಸಮಸ್ಯೆ ಇದೆ. ನಾನು ಒಪ್ಪುತ್ತೇನೆ. ಕೆಳ ಹಂತದ ಅಧಿಕಾರಿ ಸಿಬ್ಬಂದಿಗಳಲ್ಲಿ ಇಂತಹ ವ್ಯತ್ಯಾಸ ಆಗುತ್ತಿದೆ. ಇದೇ ಕಾರಣಕ್ಕೆ ಎಲ್ಲ ಯೋಜನೆಗಳ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರಿಂದ ಭ್ರಷ್ಟಾಚಾರ ಅಥವಾ ಕಮೀಷನ್ಗೆ ಕಡಿವಾಣ ಬಿದ್ದಿದೆ.
ಅಹಿಂದ ವರ್ಗಕ್ಕೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ತಲುಪಿವೆ ಎಂಬ ಆರೋಪ ಇದೆಯಲ್ಲಾ?
ಅಹಿಂದ ಎಂದರೆ ಕೇವಲ ಮೂರು ಸಮುದಾಯ ಎಂದು ತಿಳಿದಿರುವುದೇ ತಪ್ಪು. ಎಲ್ಲ ಜಾತಿಯ ಬಡವರು ಅಹಿಂದ ವರ್ಗಕ್ಕೆ ಸೇರುತ್ತಾರೆ. ಹೀಗಾಗಿ, ಬಡವರು ಎಂಬುದಷ್ಟೇ ಇಲ್ಲಿ ಮಾನದಂಡ. ಅದರ ಆಧಾರದ ಮೇಲೆ ಸವಲತ್ತು ಸಿಗುತ್ತದೆ. ರೈತರಿಗೆ, ಕಾರ್ಮಿಕರಿಗೆ, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವವರು ಒಂದೇ ಜಾತಿ ಸಮುದಾಯದವರು ಇರುತ್ತಾರಾ.
ನಿಜಕ್ಕೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು ಅರ್ಹರಿಗೆ ತಲುಪಿದೆಯಾ?
ತಲುಪಿಸುವ ಪ್ರಾಮಾಣಿಕ ಪ್ರಯತ್ನವಂತೂ ನಾವು ಮಾಡಿದ್ದೇವೆ. ಲೋಪ ಇಲ್ಲವೇ ಇಲ್ಲ ಎಂದು ಹೇಳಲಾಗದು. ಸಣ್ಣಪುಟ್ಟ ವ್ಯತ್ಯಾಸಗಳಿವೆ.
ಸಮಾಜ ಕಲ್ಯಾಣ ಇಲಾಖೆ ಎಂದರೆ ಬರೀ ಕಮೀಷನ್ ವ್ಯವಹಾರ ಎಂಬ ಆರೋಪ ಇದೆಯಲ್ಲಾ?
ಮೊದಲು ಇತ್ತು. ಆದರೆ, ಈಗಿಲ್ಲ. ನಮ್ಮ ಸರ್ಕಾರ ಬಂದ ನಂತರ ಪ್ರತಿ ಯೋಜನೆ ಪಾರದರ್ಶಕವಾಗಿ ಜಾರಿಗೆ ಒತ್ತು ಕೊಟ್ಟಿದ್ದೇವೆ. ಹೀಗಾಗಿ, ಬಹುತೇಕ ಯೋಜನೆ ತಲುಪಿವೆ.
ನಾಲ್ಕು ವರ್ಷಗಳಲ್ಲಿ ಎಷ್ಟು ಜನರಿಗೆ ಸಮಾಜ ಕಲ್ಯಾಣ ಇಲಾಖೆ ಯೋಜನೆಗಳು ತಲುಪಿವೆ?
33 ಇಲಾಖೆಗಳ ವ್ಯಾಪ್ತಿಯಲ್ಲಿ ಎಸ್ಸಿಪಿ -ಟಿಎಸ್ಪಿ ಅನುದಾನ ಬಳಕೆಯಾಗುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎರಡು ಕೋಟಿ ಜನರಿಗೆ ನಮ್ಮ ಇಲಾಖೆ ಕಾರ್ಯಕ್ರಮಗಳು ತಲುಪಿವೆ. ಕಾಂಕ್ರೀಟ್ ರಸ್ತೆ, ಕುಡಿಯುವ ನೀರು, ಮನೆ, ವಿದ್ಯಾಭ್ಯಾಸಕ್ಕೆ ನೆರವು, ಹಾಸ್ಟೆಲ್ ಸೌಲಭ್ಯ ಪ್ರಮುಖವಾದುವು. ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಬೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ಮೂಲಕ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ.
ನಾಲ್ಕು ವರ್ಷಗಳಲ್ಲಿ ಕೈಗೊಂಡ ಪ್ರಮುಖ ಯೋಜನೆಗಳು ಯಾವುವು?
ಅಂಬೇಡ್ಕರ್, ವಾಲ್ಮೀಕಿ, ದೇವರಾಜ ಅರಸು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 10 ಲಕ್ಷ ಬಡವರು ಪಡೆದಿದ್ದ 1400 ಕೋಟಿ ರೂ. ಸಾಲ ಮತ್ತು ಅದರ ಮೇಲಿನ ಬಡ್ಡಿ ಮನ್ನಾ ಮಾಡಿದ್ದು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ರೂಪಿಸಿದ್ದು. ಭೂ ರಹಿತ ಕುಟುಂಬಕ್ಕೆ ಜಮೀನು ಮಂಜೂರು ಮಾಡಿ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿದ್ದು.
ಹಾಗಾದರೆ, ರಾಜ್ಯದಲ್ಲಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅವಶ್ಯಕತೆ ಇರುವಷ್ಟು ಹಾಸ್ಟೆಲ್ ಸೌಲಭ್ಯ ಇದೆಯಾ?
ಖಂಡಿತ ಇದೆ. ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 173, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 49 ವಿದ್ಯಾರ್ಥಿನಿಲಯ ನಿರ್ಮಿಸಲು 560 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹಾಸ್ಟೆಲ್ ಸೌಲಭ್ಯ ಸಿಗದ ಎರಡೂವರೆ ಲಕ್ಷ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಮಾಸಿಕ 1500 ರೂ. ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಹಾಲಿ ಇರುವ ಎಸ್ಸಿ, ಎಸ್ಟಿ, ಹಿಂದುಳಿದ,ಅಲ್ಪಸಂಖ್ಯಾತ ಹಾಸ್ಟೆಲ್ಗಳನ್ನು ಮೇಲ್ದರ್ಜೆಗೇರಿಸಿ ಹೆಚ್ಚುವರಿಯಾಗಿ ಶೌಚಾಲಯ, ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಸ್ಟೆಲ್ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಯಾರೊಬ್ಬರೂ ಉನ್ನತ ವ್ಯಾಸಂಗ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶ ಸರ್ಕಾರದ್ದು.
ನಿಮ್ಮ ಇಲಾಖೆಯಲ್ಲಿ ಹಾಸಿಗೆ ದಿಂಬು ಹಗರಣ ದೊಡ್ಡ ಸದ್ದು ಮಾಡಿತಲ್ಲಾ?
ಅದು ಹಗರಣವಲ್ಲ. ಸಚಿವನಾಗಿ ನಾನೇ ಖುದ್ದಾಗಿ ವಿಷಯ ಪ್ರಸ್ತಾಪಿಸಿ ತನಿಖೆ ನಡೆಸುವ ತೀರ್ಮಾನ ಪ್ರಕಟಿಸಿದೆ. ಸರ್ಕಾರದ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಹೆಚ್ಚು ನೀಡಲಾಗಿದೆ ಎಂಬ ಆರೋಪ ಇತ್ತು ಅಷ್ಟೇ.
ನಿಮ್ಮ ಪತ್ನಿಯೇ ಲಂಚ ಸ್ವೀಕಾರ ಮಾಡಿದ ಆರೋಪವೂ ಕೇಳಿಬಂದಿತ್ತು?
ಅದು ನನ್ನ ರಾಜಕೀಯ ಏಳಿಗೆ ಸಹಿಸದವರು ಮಾಡಿದ ಕುತಂತ್ರ. ನನ್ನ ತೇಜೋವಧೆ ಮಾಡುವ ಉದ್ದೇಶ ಇತ್ತು. ಅದು ನಿಜವೇ ಆಗಿದ್ದರೆ ನಾನು ಸಚಿವನಾಗಿ ಮುಂದುವರಿಯಲು ಸಾಧ್ಯವಿತ್ತೇ.
ಸಮಾಜ ಕಲ್ಯಾಣ ಇಲಾಖೆ ಶೇ.100 ಕ್ಕೆ 100 ಸಾಧನೆ ಮಾಡಿದೆಯಾ?
ಸಾಧನೆ ಮಾಡುವುದು ಇನ್ನೂ ಇದೆ. ಇಲಾಖೆಯಿಂದ ಆದಷ್ಟು ಮಾಡಿದ್ದೇನೆ. ನಮ್ಮ ಇಲಾಖೆ ಬಡವರ ಪರ ಕೆಲಸ ಮಾಡುವ ಇಲಾಖೆ. ಸಮಾಜದ ಎಲ್ಲ ಬಡವರಿಗೂ ಸರ್ಕಾರದ ಯೋಜನೆಗಳು ತಲುಪಬೇಕು. ಅರ್ಹರು ಸವಲತ್ತುಗಳನ್ನು ತಪ್ಪಿಸಿಕೊಳ್ಳಬಾರದು ಎಂಬುದು ನಮ್ಮ ಉದ್ದೇಶ.
ನಾಲ್ಕು ವರ್ಷಗಳಲ್ಲಿ ಇಲಾಖೆಯಿಂದ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ?
ಉನ್ನತ ಶಿಕ್ಷಣಕ್ಕೆ ಬಂದರೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಪದವಿ ಕೋರ್ಸ್ಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದು ನಾಲ್ಕು ವರ್ಷಗಳಲ್ಲಿ 169 ವಿದ್ಯಾರ್ಥಿಗಳನ್ನು 35 ಕೋಟಿ ರೂ. ವೆಚ್ಚದಲ್ಲಿ ವಿದೇಶಕ್ಕೆ ಕಳುಹಿಸಲಾಗಿದೆ.ನಾಲ್ಕು ವರ್ಷಗಳಲ್ಲಿ 1160 ಕೋಟಿ ರೂ. ವೆಚ್ಚದಲ್ಲಿ 108 ವಸತಿ ಶಾಲಾ ಸಂಕೀರ್ಣ ನಿರ್ಮಿಸಲಾಗಿದೆ. 85 ವಸತಿ ಶಾಲೆ ದುರಸ್ತಿಗೊಳಿಸಲಾಗಿದೆ. ಪ್ರಸಕ್ತ ವರ್ಷ 270 ವಸತಿ ಶಾಲೆ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.1.58 ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಲಾಖೆಯಲ್ಲಿ ಜಾರಿಗೆ ತಂದ ಯೋಜನೆಗಳಿಗೆ ಏನಾದರೂ ಪ್ರೇರಣೆ ಇತ್ತಾ?
ನನ್ನ ಸ್ನೇಹಿತ ಆ ಕಾಲದಲ್ಲೇ ಎಸ್ಎಸ್ಎಲ್ಸಿಯಲ್ಲಿ ಶೇ.60 ರಷ್ಟು ಅಂಕ ಪಡೆದು ತೇರ್ಗಡೆಯಾದ. ಆದರೆ ಆರ್ಥಿಕ ಸಮಸ್ಯೆ ಕಾರಣ ಉನ್ನತ ವ್ಯಾಸಂಗ ಮಾಡದೆ ಎಮ್ಮೆ ಕಾಯಲು ಹೋಗಿದ್ದು ನೆನಪಿನಲ್ಲಿ ಮಾಸದೆ ಉಳಿದಿತ್ತು. ಅದು ಪ್ರೇರಣೆಯಾಗಿ ಸಚಿವನಾದ ನಂತರ ಹಾಸ್ಟೆಲ್ ಸೌಲಭ್ಯ ಮತ್ತು ಉನ್ನತ ಶಿಕ್ಷಣಕ್ಕೆ ನೆರವು ಯೋಜನೆ ಜಾರಿಗೆ ರೂಪಿಸಲಾಯಿತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದುತ್ತಿದ್ದಾಗ ಹಾಸ್ಟೆಲ್ ಸೌಲಭ್ಯ ಇಲ್ಲದೆ ರೂಂ ಮಾಡಿಕೊಂಡು ಹೋಟೆಲ್ನಿಂದ ಸಾಂಬಾರ್ ಪಡೆದು ಅನ್ನ ಮಾಡಿಕೊಂಡು ಊಟ ಮಾಡಿಕೊಳ್ಳುತ್ತಿದ್ದರು ಎಂಬ ಸಂಗತಿ ವಿದ್ಯಾಸಿರಿ ಯೋಜನೆ ಅನುಷ್ಟಾನಕ್ಕೆ ಪ್ರೇರಣೆಯಾಯಿತು.
ನಿಮ್ಮ ಹವ್ಯಾಸ ?
ಬೇರೆ ರೀತಿಯ ಹವ್ಯಾಸಗಳೇನೂ ಇಲ್ಲ. ನಾನು ಪ್ಯೂರ್ ವೆಜಿಟೇರಿಯನ್. ಇಡೀ ಜೀವನಕ್ಕೆ ಸಾಕಾಗುವಷ್ಟು ಮೊದಲೇ ತಿಂದುಬಿಟ್ಟಿದ್ದೇನೆ. ಹೀಗಾಗಿ, ಈಗ ಬದುಕಲು ಮಾತ್ರ ವೆಜಿಟೇರಿಯನ್ ತಿನ್ನುತ್ತಿದ್ದೇನೆ. ಅದು ಬಿಟ್ಟರೆ ಓದುವುದು, ಸಾಂಸ್ಕೃತಿಕ ಚಟುವಟಿಕೆ, ದೇಸೀ ಕಲೆ ವೀಕ್ಷಣೆ ನನಗೆ ಅಚ್ಚುಮೆಚ್ಚು.
ಮಗಳು ರಾಜಕೀಯಕ್ಕೆ
ನನಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಅನುಪಮ, ಮತ್ತೂಬ್ಬಳು ಅರುಂಧತಿ. ಒಬ್ಬ ಮಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೇ ಮದುವೆ ಮಾಡಿದ್ದೇನೆ. ಮತ್ತೂಬ್ಬ ಮಗಳು ಐಎಎಸ್ ವ್ಯಾಸಂಗ ಮಾಡುತ್ತಿದ್ದು ರಾಜಕೀಯದ ಬಗ್ಗೆಯೂ ಆಸಕ್ತಿಯಿದೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ವ್ಯವಸ್ಥೆ ವಿಧಾನಸಭೆಯಲ್ಲೂ ಬಂದರೆ ಆಗ ರಾಜಕೀಯಕ್ಕೆ ಬರಲೂ ಬರಬಹುದು. ಇಲ್ಲವೇ ಉದ್ಯೋಗದತ್ತ ಹೋಗಬಹುದು.
ಸಂದರ್ಶನ: ಸೋಮಶೇಖರ ಕವಚೂರು/ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ