ಉದ್ಯಾನ ನಗರಿಯ ಎಲ್ಲೆಡೆ ಯೋಗಾರಾಧನೆ
Team Udayavani, Jun 22, 2019, 3:07 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲಾಯಿತು. ನಗರದ ಬಹುತೇಕ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಆಟದ ಮೈದಾನಗಳು, ಪಾರ್ಕ್ಗಳು, ಆಸ್ಪತ್ರೆಗಳು, ಕಚೇರಿಗಳಲ್ಲಿ ಶುಕ್ರವಾರ ಬೆಳಂಬೆಳಗ್ಗೆಯೇ ಯೋಗ ಅಭ್ಯಾಸ ಜೋರಿತ್ತು.
ಬಿಬಿಎಂಪಿ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಯೋಗಾಸನ ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಸ್ಕೌಟ್ಗೈಡ್ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು. ಸೇನೆಯ ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾ ಬೆಂಗಳೂರಿನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಸೇನಾಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಒಟ್ಟು 6,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ರಕ್ಷಣಾ ಇಲಾಖೆಯಿಂದ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ 16 ಎನ್ಸಿಸಿ ಘಟಕಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಯೋಗ ಪ್ರದರ್ಶನ ನೀಡಿದರು. ಮುಖ್ಯ ಅತಿಥಿಗಳಾಗಿ ಏರ್ ಕಮಾಂಡರ್ ಎಲ್.ಕೆ.ಜೈನ್ ಸೇರಿದಂತೆ 30ಕ್ಕೂ ಹೆಚ್ಚು ಎನ್ಸಿಸಿ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಐಎಎಲ್ ವತಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಲಾಫಿಂಗ್ ಯೋಗ ಕಾರ್ಯಕ್ರಮ ಆಯೋಜಿಸಿತ್ತು. ವಿವಿಧೆಡೆ ತೆರಳಲು ನಿಲ್ದಾಣಕ್ಕೆ ಆಗಮಿಸಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರು ಭಾಗವಹಿಸಿದರು.
ಬೆಂಗಳೂರು-ಮೈಸೂರು ರಸ್ತೆ ಕುಂಬಳಗೋಡುನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಗುರುಕುಲ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಶುಕ್ರವಾರ ಬೆಳಗ್ಗೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಸೇರಿದಂತೆ ನೂರಾರು ಮಂದಿ ಯೋಗ ಪ್ರದರ್ಶಿಸಿದರು. ಪುಟಾಣಿ ಮಕ್ಕಳು ಕೂಡ ಅತ್ಯಂತ ಕ್ಲಿಷ್ಟಕರವಾದ ಭಂಗಿಗಳನ್ನು ಲೀಲಾಜಾಲವಾಗಿ ಮಾಡಿ ಗಮನ ಸೆಳೆದರು. ರೆಡ್ಕ್ರಾಸ್ ಸಂಸ್ಥೆಯಿಂದ ವಿಶೇಷ ಯೋಗ ಉಪನ್ಯಾಸ ನಡೆಯಿತು. ಅಮೇರಿಕಾದ ಯೋಗ ವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ.ವಿ.ಸುಕೃತಾ ಯೋಗ ವಿಶ್ವಮಟ್ಟದಲ್ಲಿ ಯೋಗದ ಕುರಿತು ಮಾತನಾಡಿದರು. ನಗರದ ಪಿಇಎಸ್ ವಿಶ್ವವಿದ್ಯಾಲಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯೋಗಭ್ಯಾಸ ನಡೆದವು.
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಅತಿಥಿಗಳಾಗಿ ಭಾಗವಹಿಸಿದ್ದರು. ರಾಮಮೂರ್ತಿನಗರ ವಾರ್ಡ್ನ ಎನ್ಆರ್ಐ ಬಡಾವಣೆಯಲ್ಲಿ ಪುಣ್ಯಭೂಮಿ ಸೇವಾ ಫೌಂಡೇಷನ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯೋಗದಲ್ಲಿ ಕೆ.ಆರ್. ಪುರ ಕಸಾಪ ಅಧ್ಯಕ್ಷ ಕಲ್ಕೆರೆ ಕೃಷ್ಣಮೂರ್ತಿ, ಕೆ.ಆರ್. ಪುರ ಶಾಸಕ ನಂದೀಶ್ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿಯವರು ಯೋಗದ ಮಹತ್ವ ಮತ್ತು ಪ್ರಯೋಜನದ ಬಗ್ಗೆ ಮಾತನಾಡಿದರು. ನಗರದ ಹೊರವಲಯದ ಜಿಂದಾಲ್ ಪ್ರಕೃತಿ ಸಂಸ್ಥೆಯಲ್ಲಿ 1,200ಕ್ಕೂ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಜಿಂದಾಲ್ ಪಬ್ಲಿಕ್ ಸ್ಕೂಲ್ ಮತ್ತು ಜಿಂದಾಲ್ ಮಹಿಳೆಯರ ಪದವಿ ಕಾಲೇಜಿನ ವಿದ್ಯಾರ್ಥಿಗಳು ‘ಹೃದಯಕ್ಕಾಗಿ ಯೋಗ’ ಸಂದೇಶ ಸಾರಿದರು.
ಜಿಂದಾನ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ನ ಸ್ಥಾಪಕ ಡಾ.ಸೀತಾರಾಮ್ ಜಿಂದಾಲ್ ಯೋಗದ ಮಹತ್ವದ ಕುರಿತು ಮಾತನಾಡಿದರು. ಬಿಇಎಲ್ನಲ್ಲೂ ಯೋಗದಿನ ಆಚರಿಸಿದ್ದು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಯ ಸೇರಿ 2000 ಮಂದಿ ಭಾಗವಹಿಸಿದ್ದರು. ಬಾಣಸವಾಡಿ ಮುಖ್ಯ ರಸ್ತೆಯಲ್ಲಿರುವ ಮಾರುತಿಸೇವಾ ನಗರದ ಒರಾಯನ್ ಈಸ್ಟ್ ಮಾಲ್ನಲ್ಲಿ ಕೇಶವ ಸೇವಾ ಸಮಿತಿ ವತಿಯಿಂದ ಯೋಗ ಕಾರ್ಯಕ್ರಮ ನಡೆಯಿತು. ಸಮಿತಿಯ ವಿಶ್ವಸ್ಥರಾದ ನ.ತಿಪ್ಪೇಸ್ವಾಮಿರವರು ಯೋಗಾಸಕ್ತರನ್ನು ಉದ್ದೇಶಿಸಿ ಮಾತನಾಡಿದರು. ಚಿತ್ರನಟಿ ಭಾವನ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದರು.
ನಿಮಾನ್ಸ್ನಲ್ಲಿ ಯೋಗ ವಸ್ತು ಪ್ರದರ್ಶನ: ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ನಿಮ್ಹಾನ್ಸ್ ಮತ್ತು ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದಲ್ಲಿ ಯೋಗ ಕುರಿತ ವಸ್ತು ಪ್ರದರ್ಶನ ನಡೆಯುತ್ತಿದೆ. ಒಂದು ವಾರ ಕಾಲ ನಡೆಯುವ ಈ ಪ್ರದರ್ಶನಲ್ಲಿ ಯೋಗದ ಕುರಿತು ನಡೆಯುತ್ತಿರುವ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ಪ್ರದರ್ಶಿಸಲಾಗಿದೆ.
ನಿಮಾನ್ಸ್ನಲ್ಲಿ ಯೋಗ ದಿನದ ಅಂಗವಾಗಿ ಯೋಗ ವಿಭಾಗ ಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ವೈದ್ಯರು, ಸಿಬ್ಬಂದಿ ವರ್ಗ ಸೇರಿದಂತೆ ಸಾವಿರಾರು ಮಂದಿ ಯೋಗಾಭ್ಯಾಸ ಮಾಡಿದರು. ಆಸ್ಪತ್ರೆ ರೋಗಿಗಳಿಗಾಗಿ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ವಿಶೇಷ ಯೋಗ ಕಾರ್ಯಕ್ರಮ ನಡೆಯಿತು. ಬಳಿಕ ವಿಶೇಷ ಉಪನ್ಯಾಸ ಸೇರಿದಂತೆ ಸಾತ್ವಿಕ ಉಪಾಹಾರ ಕೂಟ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ