ನೇಕಾರರ ಖಾತೆಗೆ 2 ಸಾವಿರ ರೂ. ಜಮೆ
Team Udayavani, Aug 8, 2020, 10:38 AM IST
ಸಾಂದರ್ಭಿಕ ಚಿತ್ರ
ವಿಜಯಪುರ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೈ ಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ನೇರವಾಗಿ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ.ಗಳಂತೆ ಆರ್ಥಿಕ ಬೆಂಬಲ ನೀಡಲು ಸರ್ಕಾರದ ಆದೇಶವಾಗಿರುತ್ತದೆ ಎಂದು ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಗಂಗಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಮಗ್ಗ ಕೂಲಿ ಕಾರ್ಮಿಕರು ಆನ್ ಲೈನ್ ಮೂಲಕ “”ಸೇವಾ ಸಿಂಧು”ನಲ್ಲಿ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಕಟಣೆ ಮೂಲಕ ನೇಕಾರ ಪ್ರತಿನಿಧಿಗಳ ಸಭೆ, ಸಂಘ ಸಂಸ್ಥೆ, ಮಾಹಿತಿ ಕಾರ್ಯಾಗಾರ, ಕಚೇರಿ ನಾಮಫಲಕದಲ್ಲಿ ಪ್ರಕಟಣೆ ಮತ್ತು ಸಂವಾದ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಪ್ರಚಾರ ನೀಡಲಾಗಿದೆ.
ಸರ್ಕಾರವು ಘೋಷಿಸಿರುವ 2 ಸಾವಿರ ರೂ ಆರ್ಥಿಕ ಬೆಂಬಲವನ್ನು ನೇಕಾರರಿಗೆ ತಲುಪಿಸಲು ಆರ್ಆರ್ ನಂಬರ್ ಮತ್ತು ವಿದ್ಯುತ್ ಮಗ್ಗಗಳನ್ನು ಹೊಂದಿರುವ ಮಾಲೀಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಸಹಕರಿಸಿ ಬಡ ಕೂಲಿ ಕಾರ್ಮಿಕರಿಗೆ ನೆರವಾಗಲು ಕೋರಿದ್ದಾರೆ.
ಸರ್ಕಾರದ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಹಕರಿಸದ ಹಾಗೂ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸಿ ಕೂಲಿ ಕಾರ್ಮಿಕರಿಗೆ ಸ್ಪಂದಿಸದೆ ಉದ್ಧಟತನ ಅಥವಾ ಬೇಜವಾಬ್ದಾರಿ ತೋರುವ ಘಟಕದ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಸರ್ಕಾರ ನೀಡಿರುವ ಸೌಲಭ್ಯಗಳು ಮತ್ತು ರಿಯಾಯಿತಿ ವಿದ್ಯುತ್ ಸಹಾಯಧನ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.