50 ಸಾವಿರ ಪುಸ್ತಕ ಸಂಗ್ರಹಿಸುವ ಗುರಿ; ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್
ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ
Team Udayavani, May 27, 2022, 5:46 PM IST
ದೇವನಹಳ್ಳಿ: ಜ್ಞಾನ ವೃಕ್ಷ, ನಿಮ್ಮ ಒಂದು ಪುಸ್ತಕದ ಕೊಡುಗೆ ನಮ್ಮ ಮಕ್ಕಳ ಜ್ಞಾನದ ಹಾದಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ಸಾರ್ವಜನಿಕರಿಂದ ಪುಸ್ತಕ ಸಂಗ್ರಹಣೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪುಸ್ತಕ ದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪುಸ್ತಕ ಸಂಗ್ರಹ ಮಾಸಿಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿನೂತನ ಕಾರ್ಯಕ್ರಮವು ಜಿಲ್ಲಾಡಳಿತದ ಹೊಸ ಪ್ರಯತ್ನವಾಗಿದ್ದು, ಪುಸ್ತಕ ಸಂಗ್ರಹ ಅಭಿಯಾನವಾಗಿದೆ. ಜೂನ್ 25ರವರೆಗೆ ಪುಸ್ತಕ ಸಂಗ್ರಹ ಅಭಿಯಾನ ನಡೆಯಲಿದೆ. ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು, ಈ ಅಭಿಯಾನದಿಂದ ಸಂಗ್ರಹಿಸಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ದಾನ ಮಾಡಲಾಗುತ್ತದೆ ಎಂದರು.
ಜ್ಞಾನ ವೃದ್ಧಿಯಾಗಲಿದೆ: ಈ ಅಭಿಯಾನದಿಂದ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಕಂಪ್ಯೂಟರ್, ಮೊಬೈಲ್ , ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಪುಸ್ತಕ ಓದುವುದನ್ನು ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಉತ್ತೇಜಿಸಿದರೆ, ಉತ್ತಮ ಹವ್ಯಾಸವನ್ನು ರೂಢಿಸಿದಂತಾಗುವುದು ಹಾಗೂ ಜ್ಞಾನವೂ ವೃದ್ಧಿಯಾಗಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ಕೃಷಿ ಇಲಾಖೆ ಉಪ ನಿರ್ದೇಶಕಿ ವಿನುತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ. ಬಿ.ಆರಾಧ್ಯ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಜೀವಲೋಚನ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಓದುವ ಹವ್ಯಾಸ ಬೆಳೆಸಲು ಸಹಕಾರಿ:
ಜಿಲ್ಲಾಧಿಕಾರಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಇದು ಸಹಕಾರಿಯಾಗಲಿದೆ. ಒಂದು ತಿಂಗಳು ಅಭಿಯಾನ ನಡೆಯಲಿದ್ದು 5 ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪಠ್ಯಪುಸ್ತಕಗಳು, ನೀತಿ ಕತೆ, ಕಾದಂಬರಿ, ಆತ್ಮಕಥನ, ವಿಜ್ಞಾನ ವಿಷಯ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿಂತೆ ಓದಲು ಉತ್ತಮ ಸ್ಥಿತಿಯಲ್ಲಿರುವ ಹಳೆಯ ಮತ್ತು ಹೊಸ ಪುಸ್ತಕಗಳನ್ನು ಸಾರ್ವಜನಿಕರು ದಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.