ಗಾಂಜಾ ಮಾರಾಟಗಾರರ ಬಂಧನ
Team Udayavani, Sep 19, 2020, 12:58 PM IST
ನೆಲಮಂಗಲ: ಟೌನ್ ಠಾಣೆ ವ್ಯಾಪ್ತಿ ಬಡಾವಣೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಟೌನ್ ಪೊಲೀಸರು ಬಂಧಿಸಿ 750 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಹಿದ್(20), ದೇವೇಂದ್ರ ಸಿಂಗ್(22) ಬಂಧಿತರು. ಶಾಹಿದ್ ವಾಲ್ಮೀಕಿನಗರದ ನಿವಾಸಿಯಾಗಿದ್ದು ದೇವೇಂದ್ರಸಿಂಗ್ ಅಡಕ ಮಾರನಹಳ್ಳಿಯಲ್ಲಿ ವಾಸವಾಗಿದ್ದನು. ನಗರಸಭೆ ವ್ಯಾಪ್ತಿಯ ಜಕ್ಕಸಂದ್ರ ಸಮೀಪದ ಬಡಾವಣೆಗಳಲ್ಲಿ ಗಾಂಜಾ ಮಾರಾಟ ಮಾಡುತಿರುವ ಖಚಿತ ಮಾಹಿತಿ ಮೇರೆಗೆ ಟೌನ್ ಠಾಣೆ ಪಿಎಸ್ಐ ಸುರೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ಮಾಡಿ 750 ಗ್ರಾಂ ಗಾಂಜಾ ವಶಕ್ಕೆ ಪಡೆದಿದೆ.
ನಗರದಲ್ಲಿ ಗಾಂಜಾ ಮಾರಾ ಟ, ಸೇವನೆ, ಮಾದಕ ವಸ್ತು ಮಾರಾಟ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಪೊಲೀಸರ ಗಮನಕ್ಕೆತರಬೇಕು.ಮಾಹಿತಿ ನೀಡಿದವರ ಹೆಸರನ್ನು ಗೌಪ್ಯ ವಾಗಿಡಲಾಗುತ್ತದೆ ಎಂದು ಪಿಎಸ್ಐ ತಿಳಿಸಿದ್ದಾರೆ.
ಗಾಂಜಾ ಗಿಡ ವಶ: ಸೆರೆ :
ದೊಡ್ಡಬಳ್ಳಾಪುರ: ಪಿಎಸ್ಐ ಗಜೇಂದ್ರ ನೇತೃತ್ವದ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಮಾರು 2 ಕೆ.ಜಿ.ತೂಕದ ಸುಮಾರು 60 ಸಾವಿರ ಮೌಲ್ಯದ ಗಾಂಜಾ ಗಿಡ ವಶಪಡಿಸಿ ಕೊಂಡಿರುವ ಘಟನೆ ತಾಲೂಕಿನ ಹಾಡೋನ ಹಳ್ಳಿಯಲ್ಲಿ ನಡೆದಿದೆ.
ಹಾಡೋನಹಳ್ಳಿ ಗ್ರಾಮದ ವೆಂಕಟೇಶ(45) ಬಂಧಿತ. ತನ್ನ ಮನೆಗೆ ಹೊಂದಿಕೊಂಡಂತಿರುವ ಶೌಚಾಲಯ, ಜಮೀನಿನ ನಡುವೆ ಗಾಂಜಾ ಗಿಡ ಬೆಳೆದಿದ್ದು, ಕುಂಬಳಗಿಡದ ಬಳ್ಳಿಯನ್ನು ಗಾಂಜಾ ಗಿಡಕಾಣದಂತೆ ಮರೆ ಮಾಡಿದ್ದ ಎನ್ನಲಾಗಿದೆ. ಡಿವೈಎಸ್ಪಿ ಟಿ.ರಂಗಪ್ಪ ಅವರಆದೇಶದ ಮೇರೆಗೆ, ಪಿಎಸ್ಐ ನೇತೃತ್ವದಲ್ಲಿ ರಾಧಾಕೃಷ್ಣ, ಸುರೇಶ್, ವೆಂಕಟೇಶ್, ಮಧುಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.