ಉಚಿತ ಬಜ್ಜಿ, ಬೋಂಡ ವಿತರಿಸಿ ಬಿಎಂಟಿಸಿ ನೌಕರರು ಪ್ರತಿಭಟನೆ
6ನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ !
Team Udayavani, Apr 3, 2021, 5:43 PM IST
ನೆಲಮಂಗಲ: 6ನೇ ವೇತನ ಆಯೋಗ ಜಾರಿಗೆ ತರುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಎಂಟಿಸಿ ನೌಕರರು ತಮ್ಮ ಕೆಲಸದ ಸಮಯದ ಬಳಿಕ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣ ಎದುರಿನಲ್ಲಿ ಸಮಾವೇಶಗೊಂಡ ಬಿಎಂಟಿಸಿ ನೌಕರರು ತಳ್ಳುವ ಗಾಡಿಯಲ್ಲಿ ಬಜ್ಜಿ, ಬೋಂಡ ತೇಲಿಸಿ, ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಮೂಲಕ ಸರ್ಕಾರದ ಗಮನ ಸೆಳೆದರು.
ಈ ವೇಳೆ ಪ್ರತಿಭಟನೆ ನಡೆಸಿದ ನೌಕರರು ತಮ್ಮ ಹಕ್ಕೊತ್ತಾಯ ಮಂಡಿಸಿದರು. ಕಾರ್ಯರೂಪಕ್ಕೆ ತಂದಿಲ್ಲ: ಕಾರ್ಮಿಕ ಮುಖಂಡ ಮಾರುತಿ ಕೆಳಗಡಿ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಬೇಕು, ಈಗಾಗಲೇ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಾಕಷ್ಟು ಹೋರಾಟಗಳನ್ನು ಮಾಡಿದಾಗ ರಾಜ್ಯ ಸರಕಾರ ಕೇವಲ ಭರವಸೆಗಳನ್ನು ನೀಡುತ್ತಲೆ ಬಂದಿದೆ ಹೊರತಾಗಿ, ಯಾವುದನ್ನೂ ಕಾರ್ಯರೂಪಕ್ಕೆ ತರುತ್ತಿಲ್ಲ ಎಂದು ಆರೋಪಿಸಿದರು.
ಸಾರಿಗೆ ಸಚಿವರು ನಮಗೆ ನೀಡದ ಗಡುವು ಮುಗಿಯುತ್ತಾ ಬಂದಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಏ.7ರಿಂದ ಉಗ್ರರೂಪದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಚನ್ನಬಸವಯ್ಯ ಹಿರೇಮಠ, ವೆಂಕಯ್ಯ ಬೆಂಚಿ, ಅಶೋಕ್ ಬೀದರ್, ದೇವರಾಜ್, ಬಿ.ಟಿ.ಸುರೇಶ್, ಮಲ್ಲಿಕಾರ್ಜುನ್, ಯೋಗ ನರಸಿಂಹ ಮತ್ತಿತರರಿದ್ದರು.