ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ
Team Udayavani, Oct 16, 2022, 2:48 PM IST
ದೇವನಹಳ್ಳಿ: ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪುಸ್ತಕಗಳು ನಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತದೆ. ಲೇಖಕರು ಮತ್ತು ಸಾಹಿತಿ ಪುಸ್ತಕ ಬರೆಯಲು ಶ್ರಮವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕ ತಹಶೀಲ್ದಾರ್ ಎಚ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದಲ್ಲಿಬಿಟ್ಟಸಂದ್ರ ಗುರುಸಿದ್ದಯ್ಯನವರ ವಿರಚಿತ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುತ್ತೇವೆ. ಗುರುಸಿದ್ದಯ್ಯ ಅವರು ಉತ್ತಮ ಸಾಹಿತಿಗಳಾಗಿ, ಇತಿಹಾಸ ಸಂಶೀಧಕ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ 10 ಸಾವಿರ ಪುಸ್ತಕ ಕೊಡುಗೆಯಾಗಿ ನೀಡಿದ್ದಾರೆ. ಪುಸ್ತಕ ಓದುವುದರಿಂದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಬಿಟ್ಟಸಂದ್ರ ಗುರುಸಿದ್ದಯ್ಯ ಅವರು ಐಬಸಾಪುರ ಅಭಯ ಆಂಜನೇಯಸ್ವಾಮಿ, ಸಾವಯವ ಕೃಷಿ ಋಷಿ ಶಿವನಾಪುರ ರಮೇಶ್, ಆವತಿ ನಾಡಪ್ರಭುಗಳ ತಾಲೂಕುವಾರು ಶಾಸನಗಳ ಪುಸ್ತಕ ಬರೆದು ತಾಲೂಕಿನ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಿದರು.
ಮೂರು ಕೃತಿ ಬಿಡುಗಡೆ: ಹಿರಿಯ ಸಾಹಿತಿ ಡಾ.ತಿ.ನಂ.ಕುಮಾರಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಹೆಚ್ಚಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಬಿಟ್ಟಸಂದ್ರ ಗುರುಸಿದ್ದಯ್ಯ ಈಗಾಗಲೇ ಅನೇಕ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅಭಯಾಂಜನೇಯ ಸ್ವಾಮಿ ಐಬಾಸಾಪುರ, ಆವತಿ ನಾಡಪ್ರಭುಗಳ ಶಾಸನ ಹಾಗೂ ಶಿವನಾಪುರ ರಮೇಶ್ ಎಂಬ 3 ಕೃತಿಗಳನ್ನು ಬಿಡುಗಡೆ ಮಾಡಿದ್ದು, ಕೃತಿಗಳಲ್ಲಿ ತಾಲೂಕಿನ ಐತಿಹಾಸಿಕ ಮಾಹಿತಿ ಇದೆ ಎಂದರು. ಖ್ಯಾತ ಶಾಸನ ತಜ್ಞ ಡಾ.ಪಿ.ವಿ.ಕೃಷ್ಣಮೂರ್ತಿ ಮಾತನಾಡಿ, ಬಿಟ್ಟಸಂದ್ರ ಗುರುಸಿದ್ದಯ್ಯ ಕೇವಲ ಸಾಹಿತ್ಯ ಕ್ಷೇತ್ರದಲ್ಲಲ್ಲದೆ ಪುರಾತನ ಕಾಲದ ದೇವಾಲಯ, ಶಾಸನ, ಪತ್ತೆ ಹಚ್ಚಿ ಅವುಗಳನ್ನು ಓದಿಸಿ ಅವುಗಳನ್ನು ಸಂರಕ್ಷಿಸುವ ಕೆಲಸ ನಿರಂತವಾಗಿ ಮಾಡುತ್ತಿದ್ದಾರೆ ಎಂದರು.
ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ: ಸಾಹಿತಿ ಹಾಗೂ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ಮಾತನಾಡಿ, ಯುವಪೀಳಿಗೆ ಹಿಂದಿನ ಪರಂಪರೆಯನ್ನು ಮರೆಯುತ್ತಿದ್ದಾರೆ. ತಾಲೂಕಿನ ಹಿಂದಿನ ರಾಜರು ಆಳ್ವಿಕೆ ನಡೆದ ಇತಿಹಾಸ ಹಾಗೂ ತಾಲೂಕಿನಲ್ಲಿರುವ ಪುರಾತನ ದೇವಾಲಯಗಳ ನಿರ್ಮಾಣ ಕಾಲ ಹಾಗೂ ಯುವಪೀಳಿಗೆಗೆ ಬೇಕಾದ ಮಾಹಿತಿಯನ್ನು ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಯುವಕರು ಮೊಬೈಲ್ಗೆ ದಾಸರಾಗದೆ ಪುಸ್ತಕ ಓದುವ ಮೂಲಕ ಸಾಹಿತಿಗೆ ಪ್ರೋತ್ಸಾಹ ನೀಡುವ ಕೆಲಸವಾದಾಗ ಮಾತ್ರ ನಾವು ರಚಿಸಿದ ಕೃತಿಗಳಿಗೆ ಅರ್ಥ ಸಿಗಲಿದೆ ಎಂದರು.
ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಆರ್.ಎಚ್.ಎಂ. ಗಂಗಾಧರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸಾವಯವ ಕೃಷಿಕರು ಶಿವನಾಪುರ ರಮೇಶ್, ಸಾಹಿತಿ ಆದೆಪ್ಪಪಾಸೋಡಿ, ಬಿಜೆಪಿ ಜಿಲ್ಲಾ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಮುಖಂಡ ಐಬಸಾಪುರ ಐ.ಟಿ ರಾಮಾಂಜಿನಪ್ಪ ಹಾಗೂ ಮತ್ತಿತರರು ಇದ್ದರು.